ತುಮಕೂರು:- ಪರಪುರುಷನ ಜೊತೆ ಪ್ರೀತಿ, ಪ್ರೇಮ ಅಂತಾ ಹೋದ ಹೆಂಡತಿ ಗಂಡನ ಪ್ರಾಣವನ್ನೇ ಬಲಿ ತೆಗೆದುಕೊಂಡಿದ್ದಲ್ಲದೇ ತನ್ನಿಬ್ಬರು ಮಕ್ಕಳನ್ನೂ ತಬ್ಬಲಿಗಳನ್ನಾಗಿ ಮಾಡಿದ ಘಟನೆ ತುಮಕೂರು ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಜರುಗಿದೆ.
ದೇವರಾಜ್ ಎಂಬಾತ ದಾಬಸ್ ಪೇಟೆ ಮೂಲದ ಮಾಧವಿ ಎಂಬಾಕೆಯನ್ನ ಕಳೆದ 17 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಈ ದಂಪತಿ ಅದೇ ಊರಿನಲ್ಲಿ ಪುಟ್ಟ ಅಂಗಡಿಯನ್ನ ಇಟ್ಟುಕೊಂಡು ಜೀವನ ಸಾಗಿಸುತ್ತಿತ್ತು. ಗಂಡ-ಹೆಂಡತಿ ಇಬ್ಬರೂ ಅಂಗಡಿಯಲ್ಲಿ ವ್ಯಾಪಾರ ನಡೆಸುತ್ತಿದ್ರು. ಗಂಡ ಇಲ್ಲದ ಸಂದರ್ಭದಲ್ಲಿ ಪತ್ನಿ ಮಾಧವಿ ಒಬ್ಬಳೇ ಅಂಗಡಿಯಲ್ಲಿ ಇರುತ್ತಿದ್ದಳು. ಇನ್ನು ಈ ಅಂಗಡಿಗೆ ಪ್ರತಿನಿತ್ಯ ಹೋಗುತ್ತಿದ್ದ ಅದೇ ಊರಿನ ಆನಂದ್ ಎಂಬಾತ, ದೇವರಾಜ್ ಪತ್ನಿ ಮಾಧವಿ ಜೊತೆ ಸ್ನೇಹ, ಸಲುಗೆ ಬೆಳೆಸಿಕೊಂಡಿದ್ದಾನೆ. ನಂತರ ಪ್ರೀತಿ-ಪ್ರೇಮ ಅಂತಾ ಬಲೆಗೆ ಬೀಳಿಸಿಕೊಂಡಿದ್ದ ಆನಂದ, ಕಳೆದ ಮೂರು ತಿಂಗಳ ಹಿಂದೆ ಮಾಧವಿಯನ್ನ ಓಡಿಸಿಕೊಂಡು ಹೋಗಿದ್ದಾನೆ.
ಇನ್ನು ಓಡಿಹೋದ ಹೆಂಡತಿಯನ್ನ ವಾಪಾಸ್ ಮನೆಗೆ ಕರೆತರಲು ದೇವರಾಜ್ ಸಾಕಷ್ಟು ಪ್ರಯತ್ನ ನಡೆಸಿದ್ದ. ಆದ್ರೆ ಹೆಂಡತಿಯನ್ನ ಓಡಿಸಿಕೊಂಡು ಹೋಗಿದ್ದ ಆನಂದ್ ಅವಳ ತಂಟೆಗೆ ಬರದಂತೆ ದೇವರಾಜ್ ಗೆ ಆವಾಜ್ ಹಾಕಿದ್ದಾನೆ. ಅಂಗಡಿಯ ಬಳಿಯೂ ಬಂದು ಧಮ್ಕಿ ಹಾಕಿದ್ದಾನೆ. ಇದರಿಂದ ಮನನೊಂದ ದೇವರಾಜ್ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೂ ಮೊದಲು ಡೆತ್ ನೋಟ್ ಬರೆದಿಟ್ಟಿರುವ ದೇವರಾಜ್, ಹೆಂಡತಿಯನ್ನ ಓಡಿಸಿಕೊಂಡು ಹೋದ ಆನಂದ್ ತನಗೆ ಧಮ್ಕಿ ಹಾಕಿದ್ದ ವಿಚಾರವನ್ನ ಹೇಳಿಕೊಂಡಿದ್ದಾನೆ
ಇನ್ನು ಪ್ರಕರಣ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು, ಮಾಧವಿ, ಆನಂದ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಮೇಲೆ ಕೇಸ್ ದಾಖಲಾಗಿದೆ.