ಧಾರವಾಡ: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಆ ಮನೆಗೆ ಕನ್ನ ಹಾಕಿದ್ದ ಕಳ್ಳನನ್ನು ಬಂಧಿಸಿ ಆತನ ಕೈಗೆ ಕೋಳ ತೊಡಿಸುವಲ್ಲಿ ಧಾರವಾಡದ ವಿದ್ಯಾಗಿರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಜುಲೈ 20 ರಂದು ಧಾರವಾಡದ ರಾಜೀವಗಾಂಧಿ ನಗರದಲ್ಲಿರುವ ಸಾವಿತ್ರಿ ಬಸವರಾಜ ಹಡಪದ ಎಂಬುವವರ ಮನೆಯ ಕೀಲಿ ಮುರಿದು ಒಳಗಡೆ ಹೋಗಿದ್ದ ಕಳ್ಳ,
ಅಲ್ಮೆರಾದಲ್ಲಿದ್ದ 2,38,500 ರೂಪಾಯಿ ಮೌಲ್ಯದ 38 ಗ್ರಾಂ ತೂಕದ ಚಿನ್ನದ ಸಾಮಾನು, 220 ಗ್ರಾಂ ತೂಕದ ಬೆಳ್ಳಿಯ ಸಾಮಾನು ಹಾಗೂ 5300 ರೂಪಾಯಿ ದೋಚಿಕೊಂಡು ಪರಾರಿಯಾಗಿದ್ದ. ಈ ಸಂಬಂಧ ವಿದ್ಯಾಗಿರಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಎಸಿಪಿ ಪ್ರಶಾಂತ ಸಿದ್ಧನಗೌಡರ, ಇನ್ಸ್ಪೆಕ್ಟರ್ ಸಂಗಮೇಶ ದಿಡಿಗನಾಳ ಹಾಗೂ ತಂಡ ಕಳ್ಳನನ್ನು ಪತ್ತೆ ಮಾಡಿ ಕಳುವು ಮಾಡಿದ ಸಾಮಾನುಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದೆ.