ಬೆಂಗಳೂರು: ಯಾರೋ ನನಗೆ ಮಾಟ ಮಾಡಿಸಿದ್ರೇನೋ, ನಾನೇ ಹೋಗಿ ನಾಲ್ಕೂವರೆ ಅಡಿ ಗುಂಡಿಗೆ ಬಿದ್ದೆ. ನನಗೆ ಆದ ಅನ್ಯಾಯ ಯಾರಿಗೂ ಆಗಬಾರದು ಎಂದು ಬಿಜೆಪಿ ಮಾಜಿ ಸಚಿವ ವಿ.ಸೋಮಣ್ಣ (V Somanna) ಸ್ವಪಕ್ಷೀಯರ ವಿರುದ್ಧ ಮತ್ತೆ ಬೇಸರ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿಂದು (Bengaluru) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗೆ ಅನ್ಯಾಯ ಆಗಿದೆ, ನಾನೇ ಹೋಗಿ ನಾಲ್ಕೂವರೆ ಅಡಿ ಗುಂಡಿಗೆ ಬಿದ್ದೆ. ಗೋವಿಂದರಾಜನಗರ ಕ್ಷೇತ್ರ ಬಿಡಬಾರದಿತ್ತು. ಆಗ ಯಾರಾದ್ರು ನನಗೆ ಮಾಟ ಮಂತ್ರ ಮಾಡಿಸಿದ್ದರೇನೋ, ಕ್ಷೇತ್ರ ಬಿಟ್ಟೆ. ನನಗೆ ಆದ ಅನ್ಯಾಯ ಯಾರಿಗೂ ಆಗಬಾರದು. ಜನವರಿ 9ಕ್ಕೆ ದೆಹಲಿಯಲ್ಲಿ (New Delhi) ವರಿಷ್ಠರ ಭೇಟಿ ಆಗುತ್ತೇನೆ, ನನಗೆ ಆದ ಅನ್ಯಾಯವನ್ನ ವರಿಷ್ಠರ ಬಳಿ ಹೇಳುತ್ತೇನೆ. ನರೇಂದ್ರ ಮೋದಿ (Narendra Modi) ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಹೇಳಿದ್ದಾರೆ.
ನನಗೆ ನೇರವಾಗಿ ತೊಂದರೆ ಆಗಿದೆ. ಯಾರು ಕಾರಣವೋ ಅವರನ್ನ ಕೂರಿಸಿ ಮಾತುಕತೆ ನಡೆಸಲಿ. ಇದನ್ನ ಸರಿಪಡಿಸಿ ಎಂದು ಹೈಕಮಾಂಡ್ ನಾಯಕರ ಬಳಿ ಕೇಳಿದ್ದೇನೆ. ಯಾರಿಂದ ತೊಂದರೆ ಆಗಿದೆಯೋ ಅವರನ್ನ ಕರೆಸಿ ಸೂಚನೆ ಕೊಡಿಸಬೇಕು. ಬಹುಶಃ ಜನವರಿ 10ರ ಒಳಗೆ ಎಲ್ಲವೂ ಬಗೆಹರಿಯಲಿದೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ
ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿ.ಸೋಮಣ್ಣ, ರಾಷ್ಟ್ರೀಯ ವರಿಷ್ಠರ ಮಾತಿಗೆ ಬದ್ಧನಿದ್ದೇನೆ. ಒಟ್ಟಿನಲ್ಲಿ ನಮ್ಮ ಮೇಲೆ ಗದಾಪ್ರಹಾರ ಆಗದಂತೆ ಎಲ್ಲರಿಗೂ ಕಟ್ಟುನಿಟ್ಟಿನ ಸೂಚನೆ ಆಗಬೇಕು ಎಂದು ಮನವಿ ಮಾಡಿದ್ದಾರೆ.