ರಾಮನಗರ:- ನಾಪತ್ತೆ ಆಗಿದ್ದ ಗಂಡ, ಮುತೈದೆ ರೀತಿ ಹೆಣ್ಣಾಗಿ ಪತ್ತೆಯಾಗಿದ್ದು, ರಾಮನಗರ ಜಿಲ್ಲಾ ಕೇಂದ್ರದಲ್ಲಿ ವಿಚಿತ್ರ ಘಟನೆಗೆ ಸಾಕ್ಷಿ ಆಗಿದೆ. ಇದರಿಂದ ಪೊಲೀಸರೇ ಶಾಕ್ ಆಗಿದ್ದಾರೆ.
ಇದು ಲಕ್ಷ್ಮಣರಾವ್ ಎಂಬಾತ ವಿಜಯಲಕ್ಷ್ಮಿ ಆಗಿ ಬದಲಾದ ವಿಚಿತ್ರ ಕಥೆ. ತನ್ನ ಗಂಡನನ್ನು ಸ್ತ್ರೀ ರೂಪದಲ್ಲಿ ಕಂಡು ಪತ್ನಿ ಮೂರ್ಛೆಹೋದ ಘಟನೆಯೂ ನಡೆದಿದೆ. ಲಕ್ಷ್ಮಣ ರಾವ್ ಎಂಬಾತ ತನ್ನ ಮದುವೆಗೂ ಮುನ್ನ ಚಿಕನ್ ಅಂಡಗಿಯಲ್ಲಿ ಕೆಲಸ ಮಾಡಿಕೊಂಡಿದ್ದ. 2015 ರಲ್ಲಿ ಆತನಿಗೆ ಮದುವೆ ಮಾಡಿಕೊಡಲಾಗಿತ್ತು. ರಾಮನಗರ ಪಟ್ಟಣದಲ್ಲಿ ಪತ್ನಿ ಜೊತೆ ಲಕ್ಷ್ಮಣ್ ವಾಸವಿದ್ದ. ಅನ್ಯೋನ್ಯವಾಗಿದ್ದ ಲಕ್ಷ್ಮಣ್ ರಾವ್ ದಂಪತಿಗೆ ಇಬ್ಬರು ಗಂಡು ಮಕ್ಕಳು ಆದರು. ಆದರೆ ಮದುವೆ ಆದ ಎರಡೇ ವರ್ಷಕ್ಕೆ ಗಂಡ ಲಕ್ಷ್ಮಣ್ ಮನೆಯಿಂದ ನಾಪತ್ತೆಯಾಗಿಬಿಟ್ಟ.
ಲಕ್ಷ್ಮಣ್ 2017 ಮಾರ್ಚ್ ತಿಂಗಳಲ್ಲಿ ಮನೆ ಬಿಟ್ಟು ಹೋಗಿದ್ದ. ಸಾಲ ಮಾಡಿಕೊಂಡ ವಿಚಾರಕ್ಕೆ ಲಕ್ಷ್ಮಣ್ ಜಿಗುಪ್ಸೆಗೊಂಡಿದ್ದನಂತೆ. ಪತಿ ಲಕ್ಷ್ಮಣ್ ರಾವ್ ವಾಪಾಸ್ ಬರದ ಕಾರಣ ಪತ್ನಿ ದೂರು ದಾಖಲಿಸಿದ್ದಳು. ರಾಮನಗರ ಐಜೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು. ಲಕ್ಷ್ಮಣ್ ಗಾಗಿ ಊರು ಊರು ತಿರುಗಿ ಹುಡುಕಾಟ ಮಾಡಿದ್ದರು ಆತನ ಮಡದಿ-ಮಕ್ಕಳು. ತನ್ನಿಬ್ಬರು ಗಂಡು ಮಕ್ಕಳನ್ನು ಮಡಿಲಲ್ಲಿ ಹೊತ್ತು ಪತ್ನಿ ಹುಡುಕಾಡಿದ್ದಳು.
ಗಂಡ ಲಕ್ಷ್ಮಣ್ ರಾವ್ ನಾಪತ್ತೆಯಾಗಿ ಎರಡು ವರ್ಷ ಕಳೆದ್ರೂ ಆತನ ಸುಳಿವು ಮಾತ್ರ ಸಿಗಲೇ ಇರಲಿಲ್ಲ. ಅಳಿಯ ಬಾರದ ಹಿನ್ನೆಲೆ ಮಕ್ಕಳಿಗಾಗಿ ಆದರೂ ಮತ್ತೊಂದು ಮದುವೆ ಆಗು ಎಂದು ಮಗಳಿಗೆ ತಂದೆ ಬುದ್ದಿವಾದ ಹೇಳಿದ್ದರು. ಆದರೆ ತಂದೆಯ ಮಾತನ್ನು ಧಿಕ್ಕರಿಸಿ ಗಂಡ ಲಕ್ಷ್ಮಣ್ ರಾವ್ ಗಾಗಿ ಕಾದಿದ್ದೇ ಬಂತು ಪತ್ನಿಗೆ. ಹೀಗೆಯೇ ಬರೊಬ್ಬರಿ ಆರು ವರ್ಷಗಳ ಕಾಲ ಲಕ್ಷ್ಮಣ್ ರಾವ್ ಸುಳಿವು ಪತ್ತೆಯೇ ಆಗಲಿಲ್ಲ.
ಆ ಮೇಲೆ ಒಂದು ದಿನ ಲಕ್ಷ್ಮಣ್ ರಾವ್ ಸಿಕ್ಕಿಯೇ ಬಿಟ್ಟ. ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಲಕ್ಷ್ಮಣನ ಸುಳಿವು ಸಿಕ್ಕಿತ್ತು. ಮೈಸೂರಿನಲ್ಲಿ ಬಿಗ್ ಬಾಸ್ ಸ್ಪರ್ಧಿ ನೀತೂಗೆ ಸನ್ಮಾನ ಕಾರ್ಯಕ್ರಮ ನಡೆದಿತ್ತು. ಬಿಗ್ ಬಾಸ್ ಸ್ಪರ್ಧಿ ನೀತೂ ವನಜಾಕ್ಷಿ ಸ್ವಾಗತಕ್ಕೆ ತೃತೀಯ ಲಿಂಗಿಗಳು ತೆರಳಿದ್ದರು. ಆ ವೇಳೆ ಇದೇ ಲಕ್ಷ್ಮಣ್ ತೃತೀಯಲಿಂಗಿ ರಷ್ಮಿಕಾ ರೀಲ್ಸ್ ನಲ್ಲಿ ಹೆಣ್ಣಾಗಿ ಕಾಣಿಸಿಕೊಂಡಿದ್ದ. ವೈರಲ್ ಆದ ಆ ರೀಲ್ಸ್ ನಲ್ಲಿ ಲಕ್ಷ್ಮಣ್ ಮುಖ ಹೋಲಿಕೆ ಇತ್ತು. ಮೊಬೈಲ್ ನಲ್ಲಿ ರೀಲ್ಸ್ ವೀಕ್ಷಣೆ ಮಾಡಿದ ಪೊಲೀಸರಿಗೆ ಲಕ್ಷ್ಮಣ್ ಮುಖ ಹೋಲುವ ವ್ಯಕ್ತಿ ಪತ್ತೆಯಾದ. ಲಕ್ಷ್ಮಣ್ ಕುಟುಂಬಸ್ಥರಿಗೂ ಅದು ಲಕ್ಷ್ಮಣ್ ಇರಬಹುದು ಎಂಬ ಅನುಮಾನ ಮೂಡಿತ್ತು. ಅಂದಹಾಗೆ ರಷ್ಮಿಕಾ ತೃತೀಯ ಲಿಂಗಿಗಳ ಸಾಮಾಜಿಕ ಹೋರಾಟಗಾರ್ತಿ.
ಮುಂದೆ… ಐಜೂರು ಪೊಲೀಸರು ರಷ್ಮಿಕಾ ಹೆಸರಿನಲ್ಲಿರುವ ಪ್ರೊಫೈಲ್ ಬೆನ್ನುಹತ್ತಿದರು. ರಷ್ಮಿಕಾ ಬಳಿ ಐಜೂರು ಪೊಲೀಸರಿಂದ ಲಕ್ಷ್ಮಣ್ ರಾವ್ ವಿಚಾರ ಪ್ರಸ್ತಾಪವೂ ಆಯ್ತು. ಲಕ್ಷ್ಮಣ್ ಹಿನ್ನೆಲೆ ಗೊತ್ತಿಲ್ಲ, ಆದರೆ ವಿಳಾಸವನ್ನು ಕೊಡ್ತೇನೆ ಎಂದು ರಷ್ಮಿಕಾ ಉಪಕಾರ ಮಾಡಿದ್ದಳು.
ರಷ್ಮಿಕಾ ಕೊಟ್ಟಿದ್ದ ವಿಳಾಸಕ್ಕೆ ತೆರಳಿದ್ದ ರಾಮನಗರ ಪೊಲೀಸರಿಗೆ ಶಾಕ್ ಕಾದಿತ್ತು. ಪೊಲೀಸರ ಬಳಿ ಇದ್ದ ಲಕ್ಷ್ಮಣ್ ರಾವ್ ಫೋಟೋಗೂ ಎದುರಿಗಿದ್ದ ಹೆಣ್ಣಿಗೂ ಅಜಗಜ ಅಂತರವಿತ್ತು! ಆದರೆ ಮುಖ ಮಾತ್ರ ಲಕ್ಷ್ಮಣ್ ರಾವ್ ರೀತಿ ಹೋಲಿಕೆ ಆಗ್ತಿತ್ತು. ಹಾಗಾಗಿ ನೀನು ಲಕ್ಷ್ಮಣ್ ರಾವ್ ಹೌದಲ್ಲವಾ? ಅಂತ ಪೊಲೀಸರು ಕೇಳಿಯೇಬಿಟ್ಟರು.
ಅದಕ್ಕೆ ನಾನು ಲಕ್ಷ್ಮಣ್ ರಾವ್ ಅಲ್ಲ, ನಾನು ವಿಜಯಲಕ್ಷ್ಮಿ ಎಂದಿದ್ದ ಲಕ್ಷ್ಮಣ್. ಎಷ್ಟೇ ಬಾಯಿ ಬಿಡಿಸುವುದಕ್ಕೆ ನೋಡಿದ್ರೂ ತಾನು ವಿಜಯಲಕ್ಷ್ಮಿ ಅಂತಲೇ ಪಟ್ಟು ಹಿಡಿದಿದ್ದ ಲಕ್ಷ್ಮಣ್. ಒಂದು ಹಂತದಲ್ಲಿ ಪೊಲೀಸರಿಗೂ ಇವನು ಲಕ್ಷ್ಮಣ್ ಅಲ್ಲ ಅನ್ನೋ ಅಭಿಪ್ರಾಯಕ್ಕೆ ಬಂದುಬಿಟ್ಟಿದ್ದರು. ಆಯ್ತು ನಿಮ್ಮ ಹಾಗೆ ಲಕ್ಷ್ಮಣ್ ಕಾಣಿಸಿದ. ಆ ಕಾರಣಕ್ಕೆ ವಿಚಾರಿಸಿದ್ವಿ ಅಷ್ಟೇ ಎಂದರು. ಆಯ್ತು ಈಗ ನೀವು ವಾಪಾಸ್ ಹೋಗಿ ಅಂತ ಐಜೂರು ಪೊಲೀಸರು ಜೀಪು ಹತ್ತಿದ್ದರು. ಜೀಪ್ ಹತ್ತಿ ವಾಪಾಸ್ ಹೋಗುವ ವೇಳೆ, ಪೊಲೀಸ್ ಇನ್ಸ್ಪೆಕ್ಟರ್ಗೆ ಅದೇನು ತೋಚಿತೋ ಜೋರಾಗಿ ಲಕ್ಷ್ಮಣ್ ಅಂತ ಒಂದು ಕೂಗು ಹಾಕಿಯೇಬಿಟ್ಟರು!
ಲಕ್ಷ್ಮಣ್ ಅಂತ ಕೂಗಿದಕ್ಕೆ ಹಾಂ ಅಂತ ತಿರುಗಿ ಉತ್ತರ ಕೊಟ್ಟಿಯೇ ಬಿಟ್ಟಳು ವಿಜಯಲಕ್ಷ್ಮಿ ಉರ್ಫ್ ಲಕ್ಷ್ಮಣ್ ರಾವ್! ಆಗಲೇ ಪೊಲೀಸರಿಗೆ ಎಲ್ಲವೂ ಖಾತ್ರಿಯಾಯಿತು. ವಿಚಾರಣೆಗೆಂದು ವಿಜಯಲಕ್ಷ್ಮಿ ಉರ್ಫ್ ಲಕ್ಷ್ಮಣನನ್ನು ರಾಮನಗರದ ಐಜೂರು ಠಾಣೆಗೆ ಕರೆ ತಂದರು.
ಗಮನಿಸಿ 2017ರಲ್ಲಿ ರಾಮನಗರ ಬಿಟ್ಟಿದ್ದ ಲಕ್ಷ್ಮಣ್ ರಾವ್ 2024ರಲ್ಲಿ ವಾಪಾಸ್ ಬಂದಿದ್ದ. ಗಂಡಾಗಿ ಹೋದವನು, ಹೆಣ್ಣಾಗಿ ಪರಿವರ್ತನೆ ಆಗಿ ಬಂದಿದ್ದ ಲಕ್ಷ್ಮಣ್ ರಾವ್. ಈ ವೇಳೆ ಐಜೂರು ಪೊಲೀಸರು ಲಕ್ಷ್ಮಣ್ ರಾವ್ ಕುಟುಂಬಸ್ಥರನ್ನು ಠಾಣೆಗೆ ಕರೆಸಿದರು. ಈ ವೇಳೆ ಗಂಡ ಹೆಣ್ಣಾಗಿ ಪರಿವರ್ತನೆ ಆಗಿರುವುದನ್ನು ಕಂಡು ಕುಟುಂಬದ ಸದಸ್ಯರು ಹೌಹಾರಿದರು. ತಂದೆಯ ಅವತಾರ ಕಂಡು ಮಕ್ಕಳು ಬೆದರಿದರು.
ಅದೆಲ್ಲಾ ಆದ ಮೇಲೆ ನಿನಗೆ ಹೆಂಡತಿ ಮಕ್ಕಳು ಬೇಕಿಲ್ಲವಾ ಅಂತ ಪೊಲೀಸರು ಲಕ್ಷ್ಮಣನನ್ನು ನೇರವಾಗಿ ಪ್ರಶ್ನಿಸಿದರು. ನನಗೆ ನನ್ನ ತೃತೀಯ ಲಿಂಗಿಗಳ ಕುಟುಂಬವೇ ಇಷ್ಟ ಎಂದುಬಿಟ್ಟಳು ವಿಜಯಲಕ್ಷ್ಮಿ ಉರ್ಫ್ ಲಕ್ಷ್ಮಣ್ ರಾವ್!
ನನಗೆ ಹೆಂಡತಿ ಬೇಡ, ಮಕ್ಕಳು ಬೇಡ, ನನಗೆ ಮೊದಲಿನಿಂದಲೂ ಹೆಣ್ಣು ಅಂದರೆ ಆಗೋಲ್ಲ ಅಂತ ಉತ್ತರ ಕೊಟ್ಟಳು ವಿಜಯಲಕ್ಷ್ಮಿ. ನಿಮ್ಮ ತಂಟಗೆ ಬರಲ್ಲ, ನನ್ನನ್ನು ಬಿಟ್ಟು ಬಿಡಿ ಎಂದೂ ಲಕ್ಷ್ಮಣ್ ರಾವ್ ಅಹವಾಲು ಸಲ್ಲಿಸಿದ. ಅಳಿಯನ ಅವತಾರ ಕಂಡು ಮಗಳನ್ನು ಕೊಟ್ಟಿದ್ದ ಮಾವ ಪೇಚಾಡಿದ. ಮಗಳ ಬಾಳು ಹಾಳು ಮಾಡಿ ಬಿಟ್ಟೆ ಅಂತ ಕಣ್ಣೀರಿಡುತ್ತಾ ಭಾರವಾದ ಹೃದಯದೊಂದಿಗೆ ಮಾವ ಠಾಣೆಯಿಂದ ತೆರಳಿದ. ಇನ್ನು ಐಜೂರು ಪೊಲೀಸರು ಮುಚ್ಚಳಿಕೆ ಪತ್ರ ಬರೆಸಿಕೊಂಡು ನಾಪತ್ತೆ ಪ್ರಕರಣ ಇತ್ಯರ್ಥ ಗೊಳಿಸಿದ ಘಟನೆ ಜರುಗಿದೆ.