ಭೋಪಾಲ್: ವ್ಯಕ್ತಿಯೊಬ್ಬ ತನ್ನ ಪತ್ನಿ ಬ್ಯಾಂಕ್ ಖಾತೆ ಹಾಗೂ ಇನ್ಶುರೆನ್ಸ್ಗೆ ತನ್ನನ್ನು ನಾಮಿನಿ ಮಾಡದ ಕಾರಣಕ್ಕೆ ಆಕೆಯನ್ನು ಹತ್ಯೆಗೈದ ಘಟನೆ ಮಧ್ಯಪ್ರದೇಶದ ಶಹಪುರದಲ್ಲಿ ನಡೆದಿದೆ. ಡಿಂಡೋರಿ ಜಿಲ್ಲೆಯ ಶಹಪುರದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ನಿಶಾ ನಾಪಿತ್ ಹತ್ಯೆಯಾದ ಮಹಿಳೆಯಾಗಿದ್ದಾರೆ. ಆಕೆಯ ಪತಿ ಮನೀಶ್ ಶರ್ಮಾ ಹತ್ಯೆಗೈದ ಆರೋಪಿ ಯಾಗಿದ್ದಾನೆ. ನಿರುದ್ಯೋಗಿಯಾಗಿದ್ದ ಮನೀಶ್ ಶರ್ಮಾ, ತನ್ನ ಪತ್ನಿಯ ಬಳಿ ಆಗಾಗ ಜಗಳ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಅಲ್ಲದೇ ಬ್ಯಾಂಕ್ ಖಾತೆ ಹಾಗೂ ಇನ್ಶುರೆನ್ಸ್ಗೆ ನಾಮಿನಿ ಮಾಡುವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಜ.28 ರಂದು ಸಹ ಇದೇ ವಿಚಾರಕ್ಕೆ ನಿಶಾ ನಾಪಿತ್ ಹಾಗೂ ಮನೀಶ್ ಶರ್ಮಾ ನಡುವೆ ಗಲಾಟೆಯಾಗಿದೆ. ಈ ವೇಳೆ ಮಹಿಳೆಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ಮಹಿಳೆ ಸಾವನ್ನಪ್ಪಿದ್ದಾರೆ. ಬಳಿಕ ರಕ್ತದ ಕಲೆಯಾಗಿದ್ದ ತಲೆದಿಂಬು ಹಾಗೂ ಬೆಡ್ಶೀಟ್ನ್ನು ವಾಷಿಂಗ್ ಮಷಿನ್ನಲ್ಲಿ ಹಾಕಿ ಮುಚ್ಚಿಟ್ಟಿದ್ದ ಎಂದು ತಿಳಿದು ಬಂದಿದೆ.
ನಿಶಾ ಅವರ ಸಹೋದರಿ ನಿಲಿಮಾ ನಾಪಿತ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ನಿಶಾ ಮಲಗುವ ಕೋಣೆಯೊಳಗೆ ಹೋಗದಂತೆ ಮನೀಶ್ ತಡೆದಿದ್ದ. ಅಲ್ಲದೇ ನಿಶಾ ಅವರ ಬಳಿ ಹಣಕ್ಕಾಗಿ ಮನೀಶ್ ಪೀಡಿಸುತ್ತಿದ್ದ ಎಂದು ಆರೋಪಿಸಿದ್ದಾರೆ. ಪತ್ನಿಯನ್ನು ಹತ್ಯೆಗೈದ ಬಳಿಕ ಮನೀಶ್, ನಿಶಾ ಅವರಿಗೆ ಮೂತ್ರ ಪಿಂಡದ ಸಮಸ್ಯೆ ಇತ್ತು, ರಾತ್ರಿ ಔಷಧಿ ಸೇವಿಸಿ ಮಲಗಿದ್ದರು ಎಂದು ಕತೆ ಕಟ್ಟಿದ್ದ. ಬಳಿಕ ಬೆಳಗ್ಗೆ ಆಸ್ಪತ್ರೆಗೆ ಸಾಗಿಸಿದ್ದ ವೇಳೆ ವೈದ್ಯರು ಮೃತಪಟ್ಟಿದ್ದಾಗಿ ಘೋಷಿಸಿದ್ದರು.
ಅಲ್ಲದೇ ಮೂಗು ಮತ್ತು ಬಾಯಿಯಲ್ಲಿ ರಕ್ತವನ್ನು ಗಮನಿಸಿದ್ದ ವೈದ್ಯರು, ಮರಣೋತ್ತರ ಪರೀಕ್ಷೆ ಬಳಿಕ ತಲೆಗೆ ಪೆಟ್ಟು ಬಿದ್ದಿರುವುದನ್ನು ಖಚಿತ ಪಡಿಸಿದ್ದರು. ಬಳಿಕ ಪೊಲೀಸರು (Police) ಮನೀಶ್ ಶರ್ಮಾನನ್ನು ವಿಚಾರಣೆಗೊಳಪಡಿಸಿದಾಗ ಕೊಲೆಯ ರಹಸ್ಯ ಬಯಲಾಗಿದೆ. ಮ್ಯಾಟ್ರಿಮೋನಿಯಲ್ ಸೈಟ್ನಲ್ಲಿ ಭೇಟಿಯಾಗಿದ್ದ ನಿಶಾ ನಾಪಿತ್ ಮತ್ತು ಮನೀಶ್ ಶರ್ಮಾ ಅವರು 2020 ರಲ್ಲಿ ವಿವಾಹವಾಗಿದ್ದರು. ನಿಶಾ ಅವರ ಕುಟುಂಬ ಈ ಮದುವೆಯಲ್ಲಿ ಭಾಗಿಯಾಗಿರಲಿಲ್ಲ ಎಂದು ನಿಲಿಮಾ ನಾಪಿತ್ ತಿಳಿಸಿದ್ದಾರೆ.