ರಾಜ್ಯ ಸರ್ಕಾರವು ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಮಸೂದೆ 2024 ಅನ್ನು ಮಂಡಿಸಿದೆ. ಆದರೆ ಈ ಮಸೂದೆ ಬಗ್ಗೆ ಬಿಜೆಪಿಯು ಆಕ್ಷೇಪಣೆ ಎತ್ತಿದ್ದು, ಟಿಕೆಟ್ ಹಾಗೂ ಒಟಿಟಿ ದರಗಳನ್ನು ಹೆಚ್ಚಿಸಿ, ಮನೊರಂಜನೆಯನ್ನು ಪ್ರೇಕ್ಷಕರ ಪಾಲಿಗೆ ದುಬಾರಿ ಮಾಡುವ ಕಾರಣದಿಂದ ಈ ಮಸೂದೆಯನ್ನು ರಾಜ್ಯ ಸರ್ಕಾರ ಮಂಡಿಸಿದೆ ಎಂದು ಆರೋಪಿಸಿದೆ.
ಕನ್ನಡ ಚಿತ್ರರಂಗಕ್ಕೆ ಗರಬಡಿದಂತೆ ಆಗಿದ್ದು ಜನರು ಥಿಯೇಟರ್ಗೆ ಬರದ ಕಾರಣ ಹಲವು ಸಿನಿಮಾಗಳು ಬಾಕ್ಸ್ ಆಫೀಸ್ ಕಲೆಕ್ಷನ್ ಇಲ್ಲದೆ ಮಕಾಡೆ ಮಲಗುತ್ತಿವೆ. ದೊಡ್ಡ ದೊಡ್ಡ ನಟರು ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಿಲ್ಲ, ಇನ್ನು ದರ್ಶನ್ ಕೊಲೆ ಆರೋಪದಲ್ಲಿ ಜೈಲು ಸೇರಿದ್ದು ಇಂತಾ ಸಮಯದಲ್ಲಿ ಜನರನ್ನು ಥಿಯೇಟರ್ಗೆ ಕರೆತರುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಈ ನಡುವೆ ರಾಜ್ಯ ಸರ್ಕಾರ ಸಿನಿಮಾ ಟಿಕೆಟ್ ಮತ್ತು ಒಟಿಟಿ ಸಬ್ಸ್ಕ್ರಿಪ್ಶನ್ ಮೇಲೆ ಸೆಸ್ ವಿಧಿಸಲು ಮುಂದಾಗಿದೆ.
ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ಉಪತೆರಿಗೆ ಅಥವಾ ಉಪಕರವನ್ನು ಸಿನಿಮಾ ಟಿಕೆಟ್, ವಂತಿಗೆಗಳ ಮೇಲೆ ಹೇರತಕ್ಕದ್ದು ಎಂದು ರಾಜ್ಯ ಸರ್ಕಾರವು ಮಸೂದೆಯಲ್ಲಿ ಉಲ್ಲೇಖಿಸಿದೆ. ಈ ತೆರಿಗೆಯು ಶೇ 2 ರಷ್ಟನ್ನು ದಾಟುವಂತಿಲ್ಲ ಆದರೆ ಶೇಕಡಾ ಒಂದಕ್ಕಿಂತಾ ಕಡಿಮೆಯೂ ಇರುವಂತಿರುವಂತಿಲ್ಲ ಎಂದು ಹೇಳಿದೆ. ಈ ಮಸೂದೆಯು ಅನುಮೋದನೆಯಾದರೆ ಸಿನಿಮಾ ಟಿಕೆಟ್ ಬೆಲೆ ಹಾಗೂ ಒಟಿಟಿ ಸಬ್ಸ್ಕ್ರಿಪ್ಷನ್ ಬೆಲೆಗಳು ಸಹ ಏರಿಕೆ ಆಗಲಿವೆ. ಈ ಶುಲ್ಕವನ್ನು ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ಬಳಸಿಕೊಳ್ಳಲಾಗುತ್ತದೆ ಎಂದು ಮಸೂದೆಯಲ್ಲಿ ವಿವರಿಸಲಾಗಿದೆ.
ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಮಸೂದೆ 2024 ಅನ್ನು ಟೀಕಿಸಿ ಟ್ವೀಟ್ ಒಂದನ್ನು ಮಾಡಿರುವ ಕರ್ನಾಟಕ ಬಿಜೆಪಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ತಮ್ಮ ಸಿ.ಎಂ ಸೀಟನ್ನು ಉಳಿಸಿಕೊಳ್ಳಲು ನಾಡಿನ ಸಿನಿ ಪ್ರಿಯರ ಬೆನ್ನಿಗೂ ತೆರಿಗೆ ಬರೆ ಎಳೆಯಲು ಮುಂದಾಗಿದ್ದಾರೆ. ಕನ್ನಡ ಚಿತ್ರರಂಗ ಸಂಕಷ್ಟಗಳಿಂದ ಬಳಲುತ್ತಿದ್ದರೂ, ಅವುಗಳಿಗೆ ಕಿವಿಗೊಡದ ಮುಖ್ಯಮಂತ್ರಿಗಳು, ಸಿನಿಮಾ ಟಿಕೆಟ್, ಒಟಿಟಿಗಳ ಚಂದಾದಾರಿಕೆಯ ಮೇಲೆ ಶೇ.2ರಷ್ಟು ತೆರಿಗೆಯನ್ನು ವಿಧಿಸಿ ಹಣ ದೋಚಲು ವಿಧಾನಸಭೆಯಲ್ಲಿ ಕರ್ನಾಟಕ ಸಿನಿಮಾ ಮತ್ತು ಸಾಂಸ್ಕೃತಿಕ ಹೋರಾಟಗಾರರ (ಕ್ಷೇಮಾಭಿವೃದ್ಧಿ) ಮಸೂದೆ-2024 ಅನ್ನು ಅನುಮೋದನೆಗೆ ಇಟ್ಟಿದ್ದಾರೆ. ಈಗಾಗಲೇ ಎಲ್ಲದರ ಮೇಲೂ ತೆರಿಗೆಯನ್ನು ಹೇರಿರುವ ರಣಹೇಡಿ ಕರ್ನಾಟಕ ಸರ್ಕಾರ ಈಗ ಸಿನಿಮಾ ಪ್ರೇಕ್ಷಕರ ಮೇಲೂ ತೆರಿಗೆ ಪ್ರಹಾರ ಮಾಡಲು ‘ಕೈ’ ಎತ್ತಿರುವುದು ನಾಚಿಕೆಗೇಡಿನ ಸಂಗತಿ’ ಎಂದಿದೆ