ಬೆಂಗಳೂರು:- ಅತಿಥಿ ಶಿಕ್ಷಕರಿಗೆ ಕಳೆದ 6 ತಿಂಗಳಿನಿಂದ ವೇತನ ಸಿಗದೇ ಸಂಕಷ್ಟಕ್ಕೊಳಗಾಗಿದ್ದಾರೆ.
ಶಿಕ್ಷಣ ಇಲಾಖೆಯು 2023-24ನೇ ಸಾಲಿನಲ್ಲಿ 2 ಹಂತದಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿದೆ.ಮೊದಲ ಹಂತದಲ್ಲಿ ಜೂನ್ನಲ್ಲಿ 33 ಸಾವಿರ ಶಿಕ್ಷಕರು ಮತ್ತು 2ನೇ ಹಂತದಲ್ಲಿ ಆಗಸ್ಟ್ನಲ್ಲಿ 10 ಸಾವಿರ ಸೇರಿ ಒಟ್ಟು 43 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಮೊದಲ ಹಂತದಲ್ಲಿ ನೇಮಕವಾಗಿರುವ ಶಿಕ್ಷಕರಿಗೆ ಸರಿಯಾದ ಸಮಯಕ್ಕೆ ವೇತನವನ್ನು ಪಾವತಿ ಮಾಡಲಾಗುತ್ತಿದೆ. ಆದರೆ, 2ನೇ ಹಂತದಲ್ಲಿ ನೇಮಕವಾಗಿರುವ ಶಿಕ್ಷಕರು ನೇಮಕವಾದ ಅಂದಿನಿಂದ ಈ ವರೆಗೂ ವೇತನವನ್ನೇ ನೋಡಿಲ್ಲ. 6 ತಿಂಗಳಿನಿಂದ ವೇತನ ನೀಡದಿರುವ ಕಾರಣ ಸಾಕಷ್ಟು ಸಮಸ್ಯೆಯಾಗಿ ಪರಿಣಮಿಸಿದೆ.
ಪ್ರಾಥಮಿಕ ಶಾಲಾ ಶಿಕ್ಷಕರಿಗೆ 10 ಸಾವಿರ ರೂ. ಮತ್ತು ಪ್ರೌಢಶಾಲಾ ಶಿಕ್ಷಕರಿಗೆ 10,500 ರೂ.ಗಳನ್ನು ಸರ್ಕಾರವು ನೀಡುತ್ತಿದೆ. ಅತಿಥಿ ಶಿಕ್ಷಕರ ಗೌರವ ಧನ ಕೊಡುತ್ತಿರುವುದೇ ಕಡಿಮೆ. ಅದನ್ನೂ ನೀಡದಿದ್ದರೆ ಏನು ಮಾಡುವುದು ಎಂಬುದನ್ನು ಸರ್ಕಾರವೆ ತಿಳಿಸಬೇಕು ಎನ್ನತ್ತಾರೆ ಅತಿಥಿ ಶಿಕ್ಷಕರು ಒತ್ತಾಯಿಸಿದ್ದಾರೆ.
ಬೇಡಿಕೆ ಈಡೇರಿಸಿಲ್ಲ:
ಕಳೆದ 6 ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆಸಿದ್ದ ಹೋರಾಟದ ವೇಳೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಅತಿಥಿ ಶಿಕ್ಷಕರ ಬೇಡಿಕೆಗಳನ್ನು ಒಂದು ವಾರದೊಳಗೆ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ, 6 ತಿಂಗಳಾದರೂ ಈಡೇರಿಸುವ ಮನಸ್ಸು ಮಾಡಿಲ್ಲ. ಕೂಡಲೇ ಸರ್ಕಾರವು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಅತಿಥಿ ಶಿಕ್ಷಕ ದುರುಗಪ್ಪ ಅಮರಾವತಿ ಒತ್ತಾಯಿಸಿದ್ದಾರೆ.