ಶಿರಾ:-ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಲ್ಲಿ ಮುಳುಗಿದ್ದು, ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ಕಡೆಗಣಿಸಿದೆ ಎಂದು ವಿಧಾನಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಕಿಡಿಕಾರಿದರು.
ನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವಾಗ ಡಿಸೆಂಬರ್ ಒಳಗೆ ೭ನೇ ವೇತನ ಆಯೋಗ, ಓಪಿಎಸ್ ಜಾರಿ ಮಾಡುವ ಭರವಸೆ ಈಡೇರಿಸುವಲ್ಲಿ ವಿಫಲವಾಗುವ ಮೂಲಕ ಸಿದ್ದರಾಮಯ್ಯ ಸರ್ಕಾರಿ ನೌಕರರು ಮತ್ತು ಶಿಕ್ಷಕರಿಗೆ ಮೋಸ ಮಾಡಿದ್ದಾರೆ ಎಂದು ಟೀಕಿಸಿದರು.
ನಗರದ ವಿವಿಧ ಶಾಲೆ,ಕಾಲೇಜುಗಳಿಗೆ ಭೇಟಿ ನೀಡಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಹಿನ್ನಲೆಯಲ್ಲಿ ಮತ ಯಾಚಿಸಿದ ಅವರು, ಸಿದ್ದರಾಮಯ್ಯ ಸರ್ಕಾರ ಶಿಕ್ಷಕರು ಮತ್ತು ನೌಕರರಿಗೆ ನೀಡಿರುವ ಭರವಸೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಎನ್ಪಿಎಸ್ ರದ್ದು-ಒಪಿಎಸ್ ಜಾರಿ ಮಾಡುವ ಭರವಸೆ ನೀಡಿದ್ದಾರೆ, ಇದನ್ನು ಕಾರ್ಯಗತಗೊಳಿಸಲು ಮುಂದಾಗಿಲ್ಲ ಎಂದು ಟೀಕಿಸಿದ ಅವರು,
ಸರ್ಕಾರದ ೬ ತಿಂಗಳ ಸಾಧನೆಯ ಪಕ್ಷಿನೋಟದಲ್ಲಿ ಇದರ ಪ್ರಸ್ತಾಪವೇ ಇಲ್ಲ ಎಂದರು. ಎನ್ಪಿಎಸ್ ಅಡಿ ಈಗಾಗಲೇ ನಿವೃತ್ತರಾಗಿರುವ ಕೆಲವು ಶಿಕ್ಷಕರ ಬದುಕು ನರಕವಾಗಿದೆ, ಅವರ ಮುಸ್ಸಂಜೆಯ ಜೀವನದಲ್ಲಿ ತಿಂಗಳಿಗೆ ಕನಿಷ್ಟ ೩-೪ ಸಾವಿರವೂ ಕೈಗೆ ಬರುತ್ತಿಲ್ಲ ಎಂದ ಅವರು, ಇಂತಹ ನೌಕರರ ನೆರವಿಗೆ ಸರ್ಕಾರ ಬರಬೇಕು, ಓಪಿಎಸ್ ಜಾರಿ ಅಮಾಡಬೇಕು ಎಂದರು.
ಪ್ರತಿ ವರ್ಷ ಮಾರ್ಚ್ನಿಂದ ಮೇ ತಿಂಗಳ ನಡುವೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ, ಸಹಶಿಕ್ಷಕರಿಂದ ಮುಖ್ಯಶಿಕ್ಷಕರಾಗಿ ಬಡ್ತಿ, ಸಹಶಿಕ್ಷಕರಿಂದ ಉಪನ್ಯಾಸಕರಾಗಿ ಬಡ್ತಿ ಪ್ರಕ್ರಿಯೆಗಳನ್ನು ಮುಗಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ಅನುದಾನಿತ ಶಾಲೆಗಳಲ್ಲಿ ೨೦೧೫ ರಿಂದೀಚೆಗೆ ಹುದ್ದೆಗಳ ಭರ್ತಿಗೆ ಅವಕಾಶ ನೀಡಬೇಕು, ಶಿಕ್ಷಕರ ಕೊರತೆಯಿಂದ ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಮೇಲಾಗುತ್ತಿರುವ ದುಷ್ಪರಿಣಾಮ ತಡೆಯಬೇಕು ಎಂದು ಆಗ್ರಹಿಸಿದರು.
ಖಾಸಗಿ ಶಾಲೆಗಳ ಶಿಕ್ಷಕರು ಕಡಿಮೆ ಸಂಬಳದೊಂದಿಗೆ ಅತ್ಯಂತ ಕಷ್ಟದ ಜೀವನ ನಡೆಸುತ್ತಿದ್ದು, ಈ ಶಿಕ್ಷಕರಿಗೆ ಆರೋಗ್ಯ ವಿಮೆ ಸೌಲಭ್ಯ ಒದಗಿಸಲು ಆಗ್ರಹಿಸಿದ ಅವರು, ಸರ್ಕಾರಿ ನೌಕರರು,ಶಿಕ್ಷಕರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಲು ಒತ್ತಾಯಿಸಿದರು.
ಶಿಕ್ಷಕರನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ೧೮ ವರ್ಷಗಳಿಂದ ಆಗ್ನೇಯ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಸದನದ ಹೊರಗೆ,ಒಳಗೆ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ, ಜಾತಿ,ಮತ ಎಣಿಸದೇ ಆಅಶಿಕ್ಷಕ ಸ್ನೇಹಿಯಾಗಿದ್ದೇನೆ, ಆಯಾವುದೇ ಸಣ್ಣ ತಪ್ಪು ಎಸಗಿಲ್ಲ, ಕಪ್ಪು ಚುಕ್ಕೆ ಇಲ್ಲದಂತೆ ನಿಮ್ಮಾ ಪ್ರತಿನಿಧಿಯಾಗಿ ಗೌರವ ಉಳಿಸಿಕೊಂಡಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ
ವಿಧಾನ ಪರಿಷತ್ ಸದಸ್ಯ ಚಿದಾನಂದ ಸೇರಿದಂತೆ ಮತ್ತಿತರ ಹಾಜರಿದ್ದರು