ಬೆಂಗಳೂರು:- ಬೆಳ್ಳಂ ಬೆಳಗ್ಗೆ ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತಕ್ಕೀಡಾದ ಘಟನೆ ರಾಜಧಾನಿ ಬೆಂಗಳೂರಿನ ಯಶವಂತಪುರ ಸರ್ಕಲ್ ಬಳಿ ಜರುಗಿದೆ.
ವಿದ್ಯುತ್ ಕಂಬಗಳಿಗೆ ಗುದ್ದಿ ಕಾರು ಅಪಘಾತಕ್ಕೊಳಗಾಗಿದ್ದು, ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಘಟನೆ ಜರುಗಿದೆ. ಅಪಘಾತದಿಂದ ಕಾರಿನ ಮುಂಭಾಗ ಸಂಪೂರ್ಣ ನಜ್ಹುಗುಜ್ಜಾಗಿದೆ.
ಕಾರ್ ಮುಂಭಾಗದ ಸೀಟ್ ನ ಏರ್ ಬ್ಯಾಗ್ ಗಳು ಓಪನ್ ಆಗಿದ್ದು, ಭಾರೀ ಅನಾಹುತ ತಪ್ಪಿದೆ. ಕೆಎ 02 ಎಂಆರ್ 1314 ಮಹೀಂದ್ರ ಎಕ್ಸ್ ಯುವಿ 500 ಕಾರು ಇದಾಗಿದ್ದು, ಕಾರಿನಲ್ಲಿ ಚಾಲಕ ಮಾತ್ರ ಇದ್ದ. ಅತೀ ವೇಗವೆ ಘಟನೆಗೆ ಕಾರಣ ಎನ್ನಲಾಗಿದೆ.
ಘಟನೆಯಿಂದ ರಸ್ತೆಯಲ್ಲೇ ಚೆಲ್ಲಾಪಿಲ್ಲಿಯಾಗಿ ವಿದ್ಯುತ್ ಕಂಬಗಳು, ಕಾರ್ ನ ಬಿಡಿಭಾಗಗಳು ಬಿದ್ದಿವೆ. ಮದ್ಯಪಾನ ಮಾಡಿ ಅಪಘಾತ ಮಾಡಿರೋ ಶಂಕೆ ವ್ಯಕ್ತವಾಗಿದೆ. ಚಾಲಕನನ್ನ ಸ್ಥಳೀಯ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಯಶವಂತಪುರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.