ಸ್ಯಾಂಡಲ್ ವುಡ್ ನಿರ್ಮಾಪಕ ಹಾಗೂ ಉದ್ಯಮಿ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಪ್ರಕರಣ ರದ್ದು ಕೋರಿ ವಿ.ಎಸ್. ಸುರೇಶ್, ಎಸ್.ಪಿ.ಹೊಂಬಣ್ಣ, ಎಸ್. ಸುಧೀಂದ್ರ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ತಿಂಗಳ ಬಳಿಕ ಸಿಕ್ಕ ಪತ್ರ ಆಧರಿಸಿ ಕೇಸ್ ದಾಖಲಾಗಿತ್ತು. ಇದೀಗ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಪ್ರಕರಣ ರದ್ದುಗೊಳಿಸುವಂತೆ ಕೋರ್ಟ್ ಮೊರೆ ಹೋಗಿದ್ದಾರೆ.
ಸೌಂದರ್ಯ ಜಗದೀಶ್ ಬ್ಲಾಕ್ ಮೇಲ್ ಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಜಗದೀಶ್ ಪವಿತ್ರಾಗೌಡಗೆ ಹಣ ವರ್ಗಾವಣೆ ಮಾಡಿದ್ದಾರೆಂದು ಆರೋಪಿ ಹೇಳಿದ್ದರು. ಹಲವು ಅಂಶಗಳನ್ನು ಬಹಿರಂಗಪಡಿಸುವುದಾಗಿ ಆರೋಪಿ ಸುರೇಶ್ ಹೇಳಿದ್ದರು. ಸೌಂದರ್ಯ ಜಗದೀಶ್ ಬ್ಲಾಕ್ ಮೇಲ್ ಗೆ ಒಳಗಾಗಿರುವ ಸಾಧ್ಯತೆಯಿದೆ. ಪ್ರಕರಣದ ತನಿಖೆಗೆ ತಡೆ ನೀಡಬಾರದೆಂದು ಪತ್ನಿ ಶಶಿರೇಖಾ ಪರ ವಕೀಲರ ಮನವಿ ಮಾಡಿದ್ದಾರೆ. ವಿಚಾರಣೆ ಪೂರ್ಣಗೊಳಿಸಿ ಆದೇಶವನ್ನು ಹೈಕೋರ್ಟ್ ಕಾಯ್ದಿರಿಸಿದೆ.
ಎರಡು ತಿಂಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದ ಚಿತ್ರ ನಿರ್ಮಾಪಕ, ಉದ್ಯಮಿ ಸೌಂದರ್ಯ ಜಗದೀಶ್ ಮತ್ತು ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡ ನಡುವೆ ಹಣಕಾಸಿನ ವ್ಯವಹಾರ ನಡೆದಿದೆ ಎನ್ನಲಾಗಿದೆ. ಸೌಂದರ್ಯ ಜಗದೀಶ್ ಅವರು ರಾಜಾಜಿನಗರದ ಬ್ಯಾಂಕ್ವೊಂದರ ಖಾತೆಯಿಂದ 2017ರ ನ.13ರಂದು 1 ಕೋಟಿ ರೂ ಹಾಗೂ 2018ರ ಜ.23ರಂದು ಒಂದು ಕೋಟಿ ರೂ ಹಣ ವರ್ಗಾವಣೆಯಾಗಿತ್ತು. ಪವಿತ್ರಾ ಪಿ. ಎಂದರೆ, ದರ್ಶನ್ ಆಪ್ತೆ ಪವಿತ್ರಾ ಗೌಡ ಎನ್ನಲಾಗಿದೆ. ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಈ ಹಣಕಾಸು ವ್ಯವಹಾರವೂ ಕಾರಣ ಇರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.
ದರ್ಶನ್ ಆಪ್ತೆ ಪವಿತ್ರಾ ಗೌಡ 2018ರಲ್ಲಿ ರಾಜರಾಜೇಶ್ವರಿನಗರದ ಕೆಂಚೇನಹಳ್ಳಿಯಲ್ಲಿ 1.75 ಕೋಟಿ ರು. ಮೌಲ್ಯದ ಮನೆ ಖರೀದಿಸಿದ್ದಾರೆ. ಈ ಮನೆ ಖರೀದಿಗೆ ಸೌಂದರ್ಯ ಜಗದೀಶ್ ನೀಡಿದ್ದಾರೆ ಎನ್ನಲಾದ ಹಣವನ್ನೇ ಬಳಸಿದ್ದಾರೆ ಎನ್ನಲಾಗಿದೆ. ಪವಿತ್ರಾ ಪಿ. ಹೆಸರಿನ ಮನೆ ಖರೀದಿ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಕಳೆದ ಏ.14ರಂದು ಸೌಂದರ್ಯ ಜಗದೀಶ್ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಮಹಾಲಕ್ಷ್ಮೀ ಲೇಔಟ್ನಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಮೇ 24ರಂದು ಮೃತ ಸೌಂದರ್ಯ ಜಗದೀಶ್ ಅವರ ಪತ್ನಿ ಶಶಿರೇಖಾ ಅವರು ದೂರು ನೀಡಿದ್ದರು. ಪತಿ ಸೌಂದರ್ಯ ಜಗದೀಶ್ ಅವರು ಸೌಂದರ್ಯ ಕನ್ಸ್ಟ್ರಕ್ಷನ್ ಕಂಪನಿ ನಡೆಸುತ್ತಿದ್ದರು. ವಿ.ಎಸ್.ಸುರೇಶ್, ಎಸ್.ಪಿ. ಹೊಂಬಣ್ಣ ಹಾಗೂ ಸುಧೀಂದ್ರ ಅವರು ಕಂಪನಿಯ ಸಹ ಪಾಲುದಾರರಾಗಿದ್ದರು. ಪತಿ ಸೌಂದರ್ಯ ಜಗದೀಶ್ ಅವರು ತಮ್ಮ ಕೆಲ ಆಸ್ತಿಗಳನ್ನು ಬ್ಯಾಂಕ್ನಲ್ಲಿ ಅಡಮಾನವಿರಿಸಿ 60 ಕೋಟಿ ರು. ಸಾಲ ಪಡೆದು ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು.
ಆದರೆ, ಸಹಪಾಲುದಾರರು ಕಂಪನಿ ನಷ್ಟದಲ್ಲಿರುವುದಾಗಿ ಹೇಳಿ 60 ಕೋಟಿ ರು. ವಂಚಿಸಿದ್ದರು. ಅಂತೆಯೆ ಪತಿ ಸೌಂದರ್ಯ ಜಗದೀಶ್ ಅವರಿಂದ ಹಲವು ದಾಖಲೆಗಳಿಗೆ ಸಹಿ ಮಾಡಿಸಿಕೊಂಡಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಸಹ ಪಾಲುದಾರರು ಪತಿಗೆ ಜೀವ ಬೆದರಿಕೆ ಹಾಕಿದ್ದರು. ಈ ಸಹ ಪಾಲುದಾರರ ಕಿರುಕುಳದಿಂದ ಪತಿ ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ಶಶಿರೇಖಾ ದೂರಿನಲ್ಲಿ ಆರೋಪಿಸಿದ್ದರು. ಸೌಂದರ್ಯ ಜಗದೀಶ್ ಆತ್ಮಹತ್ಯೆ ಬಳಿಕ ಅವರ ಬಟ್ಟೆಯಲ್ಲಿ ಡೆತ್ ನೋಟ್ ಸಿಕ್ಕಿತ್ತು. ಈ ಮರಣಪತ್ರ ಆಧರಿಸಿ ಪತ್ನಿ ಶಶಿರೇಖಾ ದೂರು ನೀಡಿದ್ದರು.