ಹುಬ್ಬಳ್ಳಿ:15 ಬಜೆಟ್ ಗಳನ್ನು ಮಂಡನೆ ಮಾಡಿ, ದೊಡ್ಡ ಆರ್ಥಿಕತಜ್ಞ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ಧರಾ ಮಯ್ಯನವರು, ತಮ್ಮ ಜೀವನಕಾಲದಲ್ಲಿಯೇ ಮಾಡಿದ ಅತ್ಯಂತ ಕೆಟ್ಟ, ಕಳಪೆ, ನಿರಾಶಾದಾಯಕ ಆಗಿದೆ ಎಂದು ರಾಜ್ಯ ವಿಧಾನ ಸಭಾ ಸಭಾ ವಿರೋಧ ಪಕ್ಷದ ಉಪ ನಾಯಕ ಹಾಗೂ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಮಾಹಿತಿ ನೀಡಿದ ಅವರು ಇದೊಂದುಸುಳ್ಳುಕಂತೆಗಳಿರುವ ಬಜೆಟ್ ಇದಾಗಿದೆ. ಅವರು ಪ್ರತಿ ಬಾರಿಯು ಕೇಂದ್ರದಿಂದ ದುಡ್ಡು ಬಂದಿಲ್ಲ ಎಂದು ಹೇಳುತ್ತಿರುತ್ತಾರೆ ಹಾಗೂ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾ ಇರುತ್ತಾರೆ. ಆದರೆ ಅವರ ಸಾಧನೆ ಶೂನ್ಯ. ಕಳೆದ ಬಾರಿ ಸನ್ 2023-24 ನೇ ಸಾಲಿನಲ್ಲಿ ಅವರು ಬಜೆಟ್ ಮಂಡಿಸಿದಾಗ 96,000 ಕೋಟಿಯನ್ನು ಸಾಮಾಜಿಕ ಸೇವೆಗಾಗಿ ಮೀಸಲಿಟ್ಟಿರುತ್ತೇನೆ ಎಂದು ವಾಗ್ದಾನ ಮಾಡಿದ್ರು ಕೂಡ 2,000 ಕೋಟಿಯಷ್ಟು ಕಡಿಮೆ ಮೊತ್ತವನ್ನು ಸಾಮಾಜಿಕ ಸೇವೆಗಾಗಿ ಮೀಸಲಿಟ್ಟಿರುತ್ತಾರೆ.
ಹಿಂದಿನ ಬಾರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ್ದು ಹೆಚ್ಚುವರಿ ಉಳಿತಾಯದ ಬಜೆಟ್ ಆಗಿದ್ದು, ಮತ್ತೆ ಈ ಬಾರಿ ಶ್ರೀ ಸಿದ್ಧರಾಮಯ್ಯನವರು ಬಹಳ ದೊಡ್ಡ ಕೊರತೆಯ ಬಜೆಟ್ ಅನ್ನು ಮಂಡಿಸಿ ರಾಜ್ಯದ ಜನತೆಗೆ ಮತ್ತೊಮ್ಮೆ ಮೋಸ ಮಾಡಿರುತ್ತಾರೆ. ಕಳೆದ ಬಾರಿ ಸುಮಾರು 1,75,000 ಕೋಟಿ ತೆರಿಗೆಯನ್ನು ಸಂಗ್ರಹ ಮಾಡುತ್ತೇವೆ ಎಂದು ತಿಳಿಸಿದ್ದರು, ಆದರೆ ಸಂಗ್ರಹಿದ್ದು ಕೇವಲ 14, 000 ಕೋಟಿಗಿಂತ ಕಡಿಮೆ, ಎಂತಹ ವಿಪರ್ಯಾಸ?
ಈ ನಿಟ್ಟಿನಲ್ಲಿ ಇವರ ಆಡಳಿತವು ಸಂಪೂರ್ಣವಾಗಿ ವೈಫಲ್ಯವಾಗಿರುವುದು ಕಂಡು ಬಂದಿರುತ್ತದೆ, ಪ್ರತಿ ಬಾರಿ ಕೇಂದ್ರದಿಂದ ಸಹಾಯ ಧನ ಬಂದಿಲ್ಲ ಎಂದು ಹೇಳುವ ಇವರು ಕೇಂದ್ರಕ್ಕೆ ಕೇಳಿದ್ದು 37,000 ಕೋಟಿ. ಆದರೆ ಕೇಂದ್ರ ಸರ್ಕಾರ ಕೊಟ್ಟಿದ್ದು 40,000 ಕೋಟಿ, ರೂ. 3000 ಕೋಟಿಯನ್ನು ಹೆಚ್ಚುವರಿಯಾಗಿ ಈಗಾಗಲೇ ನೀಡಿದೆ. ಜತೆಗೆ ಕೇಂದ್ರ ಸರ್ಕಾರದ ಸಹಾಯಧನ ಬಗ್ಗೆ ಸುಮಾರು 13,500 ಕೋಟಿ ಯಷ್ಟು ಬೇಡಿಕೆ ಇಟ್ಟಿದ್ದು, ಈ ನಿಟ್ಟಿನಲ್ಲಿ ಸುಮಾರು 13,500 ಕೋಟಿಯಷ್ಟು ಕೇಂದ್ರ ಸರ್ಕಾರವು ಸಹಾಯಧನವನ್ನು ಕೊಟ್ಟಿದೆ. ಇವರ ಆಡಳಿತ ವೈಫಲ್ಯ ಇಟ್ಟುಕೊಂಡು ಕುಣಿಯಲಾರದವ ನೆಲ ಡೊಂಕು ಎಂಬಂತೆ ಮಾತುಮಾತಿಗೆ ತಮಗೆ ಕೇಂದ್ರ ಸರ್ಕಾರದಿಂದ ದುಡ್ಡು ಬಂದಿಲ್ಲ ಎಂದು ದೂಷಿಸುವ ಚಾಳಿ ಇವರದ್ದಾಗಿದೆ.
ಒಟ್ಟಾರೆಯಾಗಿ ನಿರಾಶಾದಾಯಕ, ಕಳಪೆಯ ಬಜೆಟ್ ಆಗಿದ್ದು ಹಾಗೂ ಎಂದಿನಂತೆ ಅವರು ಮಂಡಿಸುವ ಬಜೆಟ್ ಗಳಲ್ಲಿ ಅವಳಿ ನಗರಕ್ಕೆ ಹಾಗೂ ವಿದ್ಯಾಕಾಶಿ ಧಾರವಾಡಕ್ಕೆ ಯಾವುದೇ ಪ್ರಯೋಜನವಿರುವುದಿಲ್ಲ ಎಂದಿದ್ದಾರೆ.