ಹಾಸನ:- ತಲೆ ಮೇಲೆ ಕಲ್ಲು ಎತ್ತಿಹಾಕಿ ಅಪರಿಚಿತ ವ್ಯಕ್ತಿಯ ಬರ್ಬರ ಕೊಲೆ ನಡೆದ ಘಟನೆ ಹಾಸನ ಹೊರವಲಯದ ಬುಸ್ತೇನಹಳ್ಳಿ ಗ್ರಾಮದ ನಿರ್ಜನ ಪ್ರದೇಶವಾದ ಹಾಸನ-ಬೆಂಗಳೂರು ರೈಲ್ವೆ ಟ್ರ್ಯಾಕ್ ಬಳಿ ಜರುಗಿದೆ.
ಮೇಲ್ನೋಟಕ್ಕೆ ಮೃತ ವ್ಯಕ್ತಿ ಕೂಲಿ ಕಾರ್ಮಿಕ ಅಥವಾ ಕುರಿಗಾಹಿ ಎಂದು ಶಂಕಿಸಲಾಗಿದ್ದು, ಎರಡು ದಿನಗಳ ಹಿಂದೆ ಆತನನ್ನು ರಾತ್ರಿ ವೇಳೆಯಲ್ಲಿ ಜೊತೆಗೆ ಕರೆತಂದಿರುವ ಹಂತಕರು, ಮೃತದೇಹ ಪತ್ತೆಯಾಗಿರುವ ಸ್ಥಳದಲ್ಲೇ ಎಣ್ಣೆ ಪಾರ್ಟಿ ಮಾಡಿದ್ದಾರೆ. ಬಹುಶಃ ಮೃತ ವ್ಯಕ್ತಿಗೆ ಕಂಠಪೂರ್ತಿ ಕುಡಿಸಿ ಅಮಲಿನಲ್ಲಿದ್ದವನ ಮೇಲೆ ಬಾಟಲ್ನಿಂದ ಹಲ್ಲೆ ಮಾಡಿ, ಬಳಿಕ ತಲೆಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಲಾಗಿದೆ.
ಎರಡು ದಿನಗಳ ಬಳಿಕ ಅಂದರೆ ಇಂದು ಸ್ಥಳೀಯರು ಜಮೀನಿನ ಬಳಿ ಬಂದಾಗ ಮೃತದೇಹ ಬಿದ್ದಿರುವುದು ಪತ್ತೆಯಾಗಿದೆ. ಕೂಡಲೇ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಹಾಸನ ಬಡಾವಣೆ ಠಾಣೆ ಪೊಲೀಸರು ಪರೀಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹವನ್ನು ಹಾಸನದ ವೈದ್ಯಕೀಯ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದಾರೆ. ಜೊತೆಗೆ ಬಂದವರು ಕುಡಿದ ಅಮಲಿನಲ್ಲಿ ಜಗಳ ಮಾಡಿಕೊಂಡು ಬಳಿಕ ಹತ್ಯೆ ನಡೆದಿರಬಹುದು ಅಥವಾ ಕೊಲೆಮಾಡಲೆಂದೇ ಕರೆತಂದು ಕಂಠಪೂರ್ತಿ ಕುಡಿಸಿ ಬಳಿಕ ಹತ್ಯೆ ಮಾಡಿರಬಹುದು. ಹೀಗೆ ಹಲವು ಅನುಮಾನಗಳ ಬೆನ್ನೇರಿ ಪೊಲೀಸರು ತನಿಖೆ ಕೈಗೊಂಡಿದ್ದು, ಮೊದಲು ಕೊಲೆಯಾದ ವ್ಯಕ್ತಿ ಯಾರು ಎನ್ನುವ ಗುರುತಿಗಾಗಿ ಪತ್ತೆಗಿಳಿದಿದ್ದಾರೆ.