ದಾವಣಗೆರೆ: ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಶಂಕೆಯಿಂದ ಕೊಲೆ ಮಾಡಿದ್ದ ಆರೋಪಿಯನ್ನು ಕೃತ್ಯ ನಡೆದ ಆರು ಗಂಟೆಗಳಲ್ಲಿ ಹಂತಕನನ್ನು ಸೆರೆ ಹಿಡಿಯುವಲ್ಲಿ ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ. ಹಂತಕ ತನ್ನ ಹೆಂಡತಿಯ ಹತ್ಯೆಗೂ ಸಂಚು ರೂಪಿಸಿದ್ದ ಎಂಬ ಮಾಹಿತಿ ಬಿಚ್ಚಿಟ್ಟಿದ್ದಾನೆ. ಆದರೆ, ಪೊಲೀಸರ ಚಾಕಚಕ್ಯತೆ, ತುಂಗಾ-2 ಶ್ವಾನ ಕೊಟ್ಟ ಸುಳಿವು ಹಂತಕ ಸೆರೆ ಸಿಕ್ಕಿದ್ದಾನೆ.
ಕೊಲೆಗೆ ಕಾರಣ ಏನು?
ಜುಲೈ 15ರ ರಾತ್ರಿ 9.30 ಗಂಟೆ ಸುಮಾರಿನಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಗ್ರಾಮದ ಸಂತೇಬೆನ್ನೂರು- ದಾವಣಗೆರೆ ಮುಖ್ಯರಸ್ತೆಯ ಪೆಟ್ರೋಲ್ ಬಂಕ್ ಎದುರಿನ ರಸ್ತೆಯಲ್ಲಿ ಸಂತೇಬೆನ್ನೂರು ಗ್ರಾಮದ ಗಾರೆ ಕೆಲಸಗಾರ ಸಂತೋಷ (36) ನನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಲಾಗಿತ್ತು. ಈ ಘಟನೆ ಸಂತೇಬೆನ್ನೂರು ಗ್ರಾಮದ ಜನರಲ್ಲಿ ಭಯದ ವಾತಾವರಣ ಮೂಡಿಸಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಹೆದ್ದಾರಿ ಗಸ್ತು ಪೊಲೀಸ್ ಸಿಬ್ಬಂದಿ ಕೊಲೆ ನಡೆದ ಸ್ಥಳಕ್ಕೆ ಆಗಮಿಸಿದ್ದು, ಕೊಲೆಯಾದ ಸಂತೋಷನನ್ನು ಉಪಚರಿಸಿದ್ದರು. ಈ ವೇಳೆ ಹಲ್ಲೆ ನಡೆಸಿದವನ ಬಗ್ಗೆ
ಮಾಹಿತಿ ನೀಡಿರಬಹುದು ಎನ್ನಲಾಗಿದೆ.
ಕೊಲೆ ಆರೋಪಿಗಳ ಪತ್ತೆಗಾಗಿ ಕಾರ್ಯಾ ಪ್ರವೃತ್ತರಾದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯ ಕುಮಾರ್ ಸಂತೋಷ್ ಹಾಗೂ ಮಂಜುನಾಥ ಜಿ. ಮತ್ತು ಚನ್ನಗಿರಿ ಪೊಲೀಸ್ ಉಪಾಧೀಕ್ಷಕ ರುದ್ರಪ್ಪ ಎಸ್. ಉಜ್ಜನಕೊಪ್ಪ ಅವರ ಮಾರ್ಗದರ್ಶನದಲ್ಲಿ ಸಂತೇಬೆನ್ನೂರು ವೃತ್ತ ನಿರೀಕ್ಷಕ ಲಿಂಗನಗೌಡ ನೆಗಳೂರು ಅವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡ ಹಾಗೂ ಅಪರಾಧ ಪತ್ತೆ ಶ್ವಾನ (ಕ್ರೈಂ ಡಾಗ್) “ತುಂಗಾ-2” ದೊಂದಿಗೆ ಶ್ವಾನದಳ ಹಾಗೂ ಸುಕೋ ತಂಡದೊಂದಿಗೆ ಕಾರ್ಯಾಚರಣೆ ನಡೆಸಿದ್ದರು.
ಘಟನೆ ನಡೆದ ಕೆಲವೇ ಗಂಟೆಯಲ್ಲಿಯೇ ಕೊಲೆ ಪ್ರಕರಣವನ್ನು ಭೇದಿಸಿ ಪ್ರಕರಣದಲ್ಲಿ ಆರೋಪಿತನಾದ ಚನ್ನಗಿರಿ ತಾಲೂಕಿನ ಚನ್ನಪುರ ಗ್ರಾಮದ ಪಂಚರ್ ಅಂಗಡಿ ಕೆಲಸಗಾರ ರಂಗಸ್ವಾಮಿ (32) ಎಂಬಾತನನ್ನು ಬಂಧಿಸಿದ್ದಾರೆ. ಅಲ್ಲದೆ, ಕೃತ್ಯಕ್ಕೆ ಬಳಸಿದ ಹರಿತವಾದ ಮಚ್ಚು ವಶಕ್ಕೆ ಪಡೆಯಲಾಗಿದೆ.
ಪತ್ನಿ ಹತ್ಯೆಗು ಸ್ಕೆಚ್:
ಕೊಲೆ ಪ್ರಕರರಣದ ಆರೋಪಿ ಬಂಧಿಸಿ ವಿಚಾರಣೆ ಮಾಡಲಾಗಿದ್ದು, ಮೃತನು ಕೊಲೆ ಆರೋಪಿಯ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಇದರಿಂದ ಕೋಪಗೊಂಡು ಸಂತೇಬೆನ್ನೂರು ಗ್ರಾಮದ ಸಂತೋಷನನ್ನು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಈ ಕೊಲೆ ಆರೋಪಿತನು ಸಂತೋ಼ಷನನ್ನು ಕೊಲೆ ಮಾಡಿದ ನಂತರ ತನ್ನ ಹೆಂಡತಿಯನ್ನು ಕೊಲೆ ಸಂಚು ರೂಪಿಸಿರುವ ವಿಷಯ ಬೆಳಕಿಗೆ ಬಂದಿದೆ.
ಪೊಲೀಸರು ಕೂಡಲೇ ಕಾರ್ಯ ಪ್ರವೃತ್ತರಾಗಿ ರಂಗಸ್ವಾಮಿಯನ್ನು ಬಂಧಿಸಿದ್ದರಿಂದ ನಡೆಯಬಹುದಾಗಿದ್ದ ಇನ್ನೊಂದು ಕೊಲೆ ತಪ್ಪಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಅಣ್ಣ ನಾಗರಾಜ ದೂರು ನೀಡಿದ ಹಿನ್ನಲೆಯಲ್ಲಿ ಸಂತೇಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಂಗಾ ಶ್ವಾನ ಕಾರ್ಯಾಚರಣೆ:
ಧಾರಕಾರವಾಗಿ ಸುರಿಯುವ ಮಳೆಯ ಮಧ್ಯೆಯೂ ದಾವಣಗೆರೆ ಜಿಲ್ಲಾ ಪೊಲೀಸ್ ಮತ್ತು “ತುಂಗಾ ಶ್ವಾನ” ದಳದ ಸಿಬ್ಬಂದಿ ಶಫಿವುಲ್ಲಾ ಎಂ.ಡಿ ದರ್ಗಾನಾಯ್ಕ ರವರೊಂದಿಗೆ ಆರೋಪಿತನ ಚಲನವಲನ ಗುರುತಿಸುವಲ್ಲಿ ಮಾಡಿದ ಕಾರ್ಯ ಶ್ಲಾಘನೀಯ.
ಕೊಲೆ ಆರೋಪಿಯನ್ನು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಬಂಧಿಸಲಾಗಿದೆ. ಅಲ್ಲದೇ ಸಂಭವಿಸಬಹುದಾಗಿದ್ದ ಇನ್ನೊಂದು ಕೊಲೆಯನ್ನು ತಪ್ಪಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸ್ ಅಧಿಕಾರಿಗಳಾ ಸಂತೇಬೆನ್ನೂರು ವೃತ್ತ ನಿರೀಕ್ಷಕ ಲಿಂಗನಗೌಡ ನೆಗಳೂರು, ಸಂತೇಬೆನ್ನೂರು ಠಾಣೆ ಪಿ.ಎಸ್.ಐ ರೂಪಾ ತೆಂಬದ್, ಚನ್ನವೀರಪ್ಪ ಹಾಗೂ ಸಿಬ್ಬಂದಿಗಳಾದ ರವಿ, ರಾಘವೇಂದ್ರ, ಕಣ್ಣಪ್ಪ, ಕುಮಾರ ನಾಯ್ಕ, ನಾಗಭೂಷಣ, ಸತೀಶ ಜಿ.ಆರ್, ರುದ್ರೇಶ್ ಎಂ., ಪರಶುರಾಮ ಚಾಲಕರುಗಳಾದ ರಘು, ರವಿ, ಸೋಮಶೇಖರ್, ಶ್ವಾನದಳದ ಶಫಿವುಲ್ಲಾ ಎಂ.ಡಿ, ದರ್ಗಾನಾಯ್ಕ ಅವರ ತಂಡವನ್ನು ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಅವರು ಶ್ಲಾಘಿಸಿದ್ದಾರೆ.