ಹುಬ್ಬಳ್ಳಿ: ತಾವು ಆಯ್ಕೆ ಮಾಡಿಕೊಳ್ಳುವ ವಿಷಯ ತಮಗೆ ಇಷ್ಟವಾಗಿರಬೇಕು ಅಂದಾಗ ಮಾತ್ರ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಹಾಗೂ ವಿದ್ಯಾರ್ಥಿಗಳು ಆಯ್ಕೆ ವಿಷಯ ಗೊಂದಲಕಾ ರಿಯಾಗಬಾರದು ಎಂದು
ಕೊಲ್ಲಾಪುರದ ಸಂಜಯ ಘೋಡಾವತ್ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಡಾ. ವೆಂಕಟೇಶ ರಾಯ್ಕರ್ ಹೇಳಿದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು ಭಾರತೀಯ ಶಿಕ್ಷಣ ಮಂಡಳ ಮತ್ತು ದೈವಜ್ಞ ವಿದ್ಯಾವರ್ಧಕ ಸಂಘದ ಸಹಯೋಗದೊಂದಿಗೆ ಆಯೋಜಿಸಿದ್ದ 12ನೇ ತರಗತಿಯ ಬಳಿಕ ವೃತ್ತಿ ಆಯ್ಕೆಗಳ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ವೃತ್ತಿಜೀವನದ ಹಾದಿಯನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು ಎಂದು ಸಲಹೆ ನೀಡಿದರು.
ಮಾತೃಭಾಷೆ ಯಾವುದಾದರೂ ಭವಿಷ್ಯದ ದೃಷ್ಟಿಯಿಂದ ಇಂಗ್ಲೀಷ, ಹಿಂದಿ ಭಾಷೆಗಳನ್ನು ಕಲಿಯುವುದು ಅವಶ್ಯ. ಪಾಲಕರು, ಮಕ್ಕಳ ಮೇಲೆ ಅತಿಯಾದ ವಿಶ್ವಾಸ ಇಟ್ಟಿರುತ್ತಾರೆ. ಆ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು. ದೈವಜ್ಞ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವಿಜಯ ವರ್ಣೆಕರ ಮಾತನಾಡಿ, ಧರಿಸುವ ಬಟ್ಟೆ, ಬಳಸುವ ಮೊಬೈಲ್ ಫೋನ್ ಹಾಗೂ ಇತರ ಆಕರ್ಷಕ ವಸ್ತುಗಳು ವಿದ್ಯಾರ್ಥಿಗಳ ಬ್ರಾಂಡ್ ಆಗಬಾರದು. ಕಲಿಯುವ ವಿದ್ಯೆಯನ್ನು ಬ್ರಾಂಡ್ ಆಗಿ ರೂಪಿಸಿಕೊಳ್ಳಿ ಎಂದರು.
ಉದ್ಯಮಿ ಮಹೇಂದ್ರ ಸಿಂಘಿ, ಉದಯ ರೇವಣಕರ, ಡಾ. ಬಸವರಾಜ ಅನಾಮಿ, ಸದಾನಂದ ಕಾಮತ, ಗೌತಮ ಗೊಲೇಚಾ, ವಿಶ್ವನಾಥ ಹಿರೇಗೌಡರ, ವಿಶ್ವನಾಥ ಬೆಣಕಲ್ಲ, ವೀರೇಶ ಮೋಟಗಿ ಇತರರು ಇದ್ದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಸ್.ಪಿ.ಸಂಶಿಮಠ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಅಮೃತ ಪಾಲನಕರ ಹಾಗೂ ಪ್ರಾಂಚಿ ರೇವಣಕರ ನಿರೂಪಿಸಿದರು. ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ ವಂದಿಸಿದರು.