ಚೆನ್ನೈ: ಎಲ್ಲ ಕಳ್ಳರೂ ಖದೀಮರಲ್ಲ. ಅವರಲ್ಲಿ ‘ಹೃದಯವಂತರೂ’ ಇರುತ್ತಾರೆ. ಕೆಲವವರಿಗೆ ಕಳ್ಳತನ ಕಸುಬಾದರೆ, ಇನ್ನು ಕೆಲವರಿಗೆ ಹೊಟ್ಟೆಪಾಡಿನ ಅನಿವಾರ್ಯತೆಯೂ ಆಗಬಹುದು. ಅಂತಹವರಲ್ಲಿ ಯಾರದ್ದೋ ಮನೆಗೆ ಕನ್ನ ಹಾಕಿದಾಗ ಪಾಪಪ್ರಜ್ಞೆಯೂ ಕಾಡುತ್ತದೆ. ತಮಿಳುನಾಡಿನಲ್ಲಿ ಇಂತಹದೇ ಘಟನೆ ನಡೆದಿದೆ.
ತಮಿಳುನಾಡಿನ ತೂತುಕುಡಿ ಜಿಲ್ಲೆಯ ಮೇಗ್ನಾನಪುರಂನ ಸಥಾಂಕುಲಂ ರಸ್ತೆಯಲ್ಲಿರುವ ನಿವೃತ್ತ ಶಿಕ್ಷಕ ದಂಪತಿಯ ಮನೆಯಲ್ಲಿ ಕಿಡಿಗೇಡಿಯೊಬ್ಬ ಕೈಗೆ ಸಿಕ್ಕ ಬೆಲೆಬಾಳುವ ವಸ್ತುಗಳು ಮತ್ತು ನಗದು ಸಮೇತ ಪರಾರಿಯಾಗಿದ್ದಾನೆ. ಆದರೆ ಅದರ ಜತೆಗೆ ಆತ ಅಲ್ಲಿ ಕ್ಷಮಾಪಣೆ ಪತ್ರವೊಂದನ್ನು ಸಹ ಇರಿಸಿದ್ದಾನೆ. ಕದ್ದ ಮಾಲುಗಳನ್ನು ಒಂದು ತಿಂಗಳಲ್ಲಿ ವಾಪಸ್ ಕೊಡುವುದಾಗಿ ತಿಳಿಸಿದ್ದಾನೆ.
79 ವರ್ಷದ ಚಿತಿರಾಯ್ ಸೆಲ್ವಿನ್ ಮತ್ತು ಅವರ ಪತ್ನಿ ಇಬ್ಬರೂ ನಿವೃತ್ತ ಶಿಕ್ಷಕರು. ಜೂನ್ 17ರಂದು ಮಗನನ್ನು ಭೇಟಿ ಮಾಡಲು ಅವರು ತೂತುಕುಡಿ ಜಿಲ್ಲೆಯಿಂದ ಸುಮಾರು 600 ಕಿಮೀ ದೂರದಲ್ಲಿರುವ ಚೆನ್ನೈಗೆ ತೆರಳಿದ್ದರು. ಮನೆಯಲ್ಲಿ ತಾವು ಇಲ್ಲದೆ ಇರುವಾಗ ಸ್ವಚ್ಛಗೊಳಿಸುವ ಹೊಣೆಯನ್ನು ಕೆಲಸದಾಕೆ ಸೆಲ್ವಿಗೆ ವಹಿಸಿದ್ದರು. ಜೂನ್ 26ರಂದು ಎಂದಿನಂತೆ ಸೆಲ್ವಿ ಮನೆ ಕ್ಲೀನ್ ಮಾಡಲು ಸೆಲ್ವಿನ್ ಅವರ ಮನೆಗೆ ಬಂದಾಗ ಮುಖ್ಯ ಬಾಗಿಲು ತೆರೆದಿರುವುದನ್ನು ಕಂಡು ದಿಗಿಲುಗೊಂಡಿದ್ದಳು.
https://ainlivenews.com/do-you-eat-after-9-pm-all-these-problems-are-guaranteed-to-occur/
ಕೂಡಲೇ ಆಕೆ ಸೆಲ್ವಿನ್ ಅವರಿಗೆ ಕರೆ ಮಾಡಿ ಕಳ್ಳತನದ ವಿಚಾರ ತಿಳಿಸಿದ್ದಳು. ಚೆನ್ನೈನಲ್ಲಿದ್ದ ಸೆಲ್ವಿನ್ ದಂಪತಿ, ತರಾತುರಿಯಲ್ಲಿ ಊರಿಗೆ ಮರಳಿದ್ದರು. ಅವರು ಪರಿಶೀಲನೆ ನಡೆಸಿದಾಗ 60 ಸಾವಿರ ರೂ ನಗದು ಹಣ, 12 ಗ್ರಾಂ ಚಿನ್ನದ ಆಭರಣ ಹಾಗೂ ಒಂದು ಜೋಡಿ ಬೆಳ್ಳಿ ಕಾಲ್ಗೆಜ್ಜೆ ನಾಪತ್ತೆಯಾಗಿರುವುದು ಕಂಡುಬಂದಿತ್ತು.
ಸೆಲ್ವಿನ್ ಅವರ ಮನೆಗೆ ಬಂದು ಶೋಧ ನಡೆಸಿದ ಪೊಲೀಸರಿಗೆ ಕಳ್ಳ ಬಿಟ್ಟು ಹೋಗಿದ್ದಾನೆ ಎನ್ನಲಾದ ಕ್ಷಮಾಪಣೆ ಪತ್ರವೊಂದು ಕಂಡುಬಂದಿದೆ. ಅದರಲ್ಲಿ ಆತ ಮನೆ ಮಾಲೀಕರ ಕ್ಷಮೆ ಕೋರಿದ್ದು, ಕದ್ದ ವಸ್ತುಗಳನ್ನು ಇನ್ನು ಒಂದು ತಿಂಗಳಲ್ಲಿ ವಾಪಸ್ ನೀಡುವುದಾಗಿ ಹೇಳಿದ್ದಾನೆ. ಜತೆಗೆ ತನ್ನ ಕಳ್ಳತನಕ್ಕೆ ಮಾನವೀಯ ಕಾರಣವೊಂದನ್ನು ನೀಡಿದ್ದಾನೆ.
“ನನ್ನನ್ನು ಕ್ಷಮಿಸಿ. ಇದನ್ನು ಇನ್ನು ಒಂದು ತಿಂಗಳಲ್ಲಿ ವಾಪಸ್ ನೀಡುತ್ತೇನೆ. ನನ್ನ ಮನೆಯಲ್ಲಿ ಒಬ್ಬರಿಗೆ ಅನಾರೋಗ್ಯ ಇರುವ ಕಾರಣ ಹೀಗೆ ಮಾಡುತ್ತಿದ್ದೇನೆ” ಎಂದು ಆತ ಪತ್ರ ಬರೆದಿಟ್ಟು ಹೋಗಿದ್ದಾನೆ. ಮೇಗ್ನಾನಪುರಂ ಪೊಲೀಸರು ಸೆಲ್ವಿನ್ ನೀಡಿರುವ ದೂರಿನ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.