ಹುಬ್ಬಳ್ಳಿ: ಪತಂಜಲಿ ಯೋಗ ಸಮಿತಿ, ಹುಬ್ಬಳ್ಳಿ ವತಿಯಿಂದ ಇಂದು ಬೆಳಿಗ್ಗೆ ಹುಬ್ಬಳ್ಳಿಯ ಬಿಡ್ನಾಳದ ಆರ್ ಕೆ ಪಾಟೀಲ್ ಹೈಸ್ಕೂಲಿನಲ್ಲಿ ವಿಶೇಷ ಯೋಗ ಶಿಬಿರ ಮತ್ತು ಅಗ್ನಿಹೋತ್ರ ಕಾರ್ಯಕ್ರಮ ಆಯೋಜಿಸಲಾಯಿತು.
ಯೋಗ ಮಾರ್ಗದರ್ಶನ ಮತ್ತು ಪವಿತ್ರ ಅಗ್ನಿಹೋತ್ರ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಭಾರತೀಯ ಯೋಗ ಸಂಸ್ಥೆ, ಕರ್ನಾಟಕದ ಅಧ್ಯಕ್ಷರು ಮತ್ತು ಪತಂಜಲಿ ಯೋಗ ಪೀಠ, ಹರಿದ್ವಾರದ ಅಂತರರಾಷ್ಟ್ರೀಯ ಯೋಗ ಗುರು ಭವರಲಾಲ್ ಆರ್ಯ ಅವರು,
” ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠಾಪನೆಯ ನಂತರದಲ್ಲಿ ನಾಸ್ತಿಕರು ಕೂಡಾ ಆಸ್ತಿಕರಾಗಿದ್ದಾರೆ, ದೇವರನ್ನು ಪೂಜಿಸುತ್ತಿದ್ದಾರೆ, ಮಠ ಮಂದಿರ ದೇವಸ್ಥಾನಗಳಿಗೆ ಹೋಗುತ್ತಿದ್ದಾರೆ, ಹೋಮ – ಹವನಗಳನ್ನು ಮಾಡುತ್ತಿದ್ದಾರೆ. ಅಯೋಧ್ಯೆಯ ರಾಮ ಮಂದಿರ ಲೋಕಾರ್ಪಣೆಯಿಂದಾಗಿ ಭಾರತದಲ್ಲಿ ರಾಮರಾಜ್ಯದ ಪರ್ವಕಾಲ ಶುರುವಾಗಿದೆ, ಸಂಪೂರ್ಣ ಭಾರತದಾದ್ಯಂತ ಜೊತೆಗೆ ವಿಶ್ವದ ಅನೇಕಾನೇಕ ದೇಶಗಳಲ್ಲಿ ಎಲ್ಲಾ ಕಡೆ ಶ್ರೀ ರಾಮ ದೇವರ ಬಗೆಗಿನ ವಾತಾವರಣ ಸೃಷ್ಟಿಯಾಗಿದೆ.
ನಾವೆಲ್ಲರೂ ಮರ್ಯಾದಾ ಪುರುಷೋತ್ತಮ ಶ್ರೀ ರಾಮ ದೇವರ ಪೂಜೆ, ಧ್ಯಾನದೊಂದಿಗೆ ಪ್ರತಿ ದಿನ ಯೋಗ ಮತ್ತು ಅಗ್ನಿಹೋತ್ರ ಅಭ್ಯಾಸ ಮಾಡಬೇಕು ಏಕೆಂದರೆ ಯೋಗ ಮತ್ತು ಅಗ್ನಿಹೋತ್ರ ಅಭ್ಯಾಸಗಳು ಆರೋಗ್ಯಯುತ ಜೀವನಕ್ಕೆ ಸಂಬಂಧಿಸಿದ ವೈಜ್ಞಾನಿಕ ಪದ್ಧತಿಗಳಾಗಿವೆ. ಇವುಗಳ ಆಚರಣೆಗೆ ಯಾವುದೇ ಜಾತಿ,ಕುಲ, ಧರ್ಮ, ದೇಶದ ಬೇಧಭಾವವಿಲ್ಲದೇ ಎಲ್ಲರೂ ಯೋಗ ಮತ್ತು ಅಗ್ನಿಹೋತ್ರ ಅಭ್ಯಾಸ ಮಾಡಬಹುದಾಗಿದೆ ಮತ್ತು ಇವುಗಳ ಅಭ್ಯಾಸದಿಂದ ನಮ್ಮ ದೇಹ ಮನಸ್ಸುಗಳು ಶುದ್ಧಿಯಾಗುತ್ತದೆ,
ಜೊತೆಗೆ ನಮ್ಮ ಸುತ್ತಮುತ್ತಲಿನ ವಾತಾವರಣ ಶುದ್ಧಿಯಾಗುತ್ತದೆ. ಪ್ರತಿದಿನ ಯೋಗ ಮತ್ತು ಅಗ್ನಿಹೋತ್ರ ಅಭ್ಯಾಸ ಮಾಡಿ ಆರೋಗ್ಯದಿಂದ ನಿರೋಗಿಯಾಗಿ ಬದುಕುವುದೇ ನಿಜವಾದ ರಾಷ್ಟ್ರ ಸೇವೆ. ಆದ್ದರಿಂದ ಪ್ರತಿಯೊಬ್ಬರು ಪ್ರತಿದಿನ ನಿಮ್ಮ ನಿಮ್ಮ ಮನೆಗಳಲ್ಲಿ, ಕಛೇರಿಗಳಲ್ಲಿ, ಯೋಗ ಕೇಂದ್ರಗಳಲ್ಲಿ, ಬೇರೆ ಬೇರೆ ಸ್ಥಳಗಳಲ್ಲಿ ನಿರಂತರವಾಗಿ ಯೋಗ ಮತ್ತು ಅಗ್ನಿಹೋತ್ರ ಅಭ್ಯಾಸ ಮಾಡಬೇಕೆಂದು,” ಸಂದೇಶ ನೀಡಿದರು.
ಸೇವಾ ಭಾರತೀ ಟ್ರಸ್ಟ್ , ಬಾಲ ಕಲ್ಯಾಣ ಕೇಂದ್ರ , ಹುಬ್ಬಳ್ಳಿ ಅಧ್ಯಕ್ಷರಾದ ಶ್ರೀಮತಿ. ಕಮಲಾ ಜೋಶಿ ಅವರು, ” ಯೋಗ ಮತ್ತು ಅಗ್ನಿಹೋತ್ರವು ನಮ್ಮ ಸನಾತನ ಪರಂಪರೆ. ಪ್ರತೀ ಮನೆಗಳಲ್ಲಿ ಪ್ರತೀ ದಿನ ಯೋಗ ಮತ್ತು ಅಗ್ನಿಹೋತ್ರದ ಅಭ್ಯಾಸ ಮಾಡಿರಿ. ಇವುಗಳಿಂದ ನಮ್ಮ ಆರೋಗ್ಯವನ್ನು ಸದಾಕಾಲ ಚೆನ್ನಾಗಿ ಇಟ್ಟುಕೊಳ್ಳಬಹುದು. ಆರೋಗ್ಯವೇ ಭಾಗ್ಯ” ಎಂದು ವಿನಂತಿಸಿದರು.
ಧಾರವಾಡ ಜಿಲ್ಲೆಯ ಭಾರತೀಯ ಜನತಾ ಪಕ್ಷದ ನೂತನ ಅಧ್ಯಕ್ಷರಾದ ಶ್ರೀ. ತಿಪ್ಪಣ್ಣ ಮಜ್ಜಗಿ ಅವರು, ” ಯೋಗ ಮತ್ತು ಅಗ್ನಿಹೋತ್ರವು ಭಾರತವು ವಿಶ್ವಕ್ಕೆ ನೀಡಿದ ಬಹು ಅತ್ಯಮೂಲ್ಯ ಕೊಡುಗೆ. ಇವುಗಳು ಆರೋಗ್ಯದ ಸೂತ್ರಗಳು. ಹುಬ್ಬಳ್ಳಿ ಧಾರವಾಡದ ಎಲ್ಲಾ ಕಡೆ ನಿರಂತರ ಉಚಿತ ಯೋಗ ಕೇಂದ್ರಗಳು ಮತ್ತು ಅಗ್ನಿಹೋತ್ರ ಅಭ್ಯಾಸ ನಿರಂತರವಾಗಿ ನಡೆಯುವಂತೆ ಮಾಡಲು ನಾನು ಸದಾಕಾಲ ಸಹಕರಿಸುತ್ತೇನೆ, ” ಎಂದು ತಿಳಿಸಿದರು.
ಈ ವಿಶೇಷ ಕಾರ್ಯಕ್ರಮದ ಮುಖ್ಯ ರೂವಾರಿಗಳಾದ ಪತಂಜಲಿ ಪರಿವಾರದ ಶ್ರೀಮತಿ ಹರ್ಷಿತಾ ಮತ್ತು ರಾಜೇಶ್ ಅಡವಿ ದಂಪತಿಗಳು, ಪಾರ್ವತಿ ಕಪ್ಪತ್ತನವರ್, ನೀಲಪ್ಪ ಹಳ್ಳಿ, ಶ್ರೀಮತಿ ರೇಣುಕಾ ಮತ್ತು ರವಿ ಚನ್ನಳ್ಳಿ ದಂಪತಿಗಳು, ಜ್ಯೋತಿ, ವಾಮನ್ ಶಾನಭಾಗ್, ಭರಮಪ್ಪನವರ್, ಸೇವಾ ಭಾರತಿ ಬಾಲ ಕಲ್ಯಾಣ ಕೇಂದ್ರದ ರತ್ನಾ ಮಾತಾಜೀ, ಗಂಗನಗೌಡ ಪಾಟೀಲ್, ಶರಣಯ್ಯ ಹಿರೇಮಠ, ಬಸವರಾಜ ಹಿರೇಮಠ, ರಾಜೇಶ ಕುದರಿ, ಸುಭಾಷ ಮತ್ತು ಹುಬ್ಬಳ್ಳಿ ಧಾರವಾಡದ 100 ಕ್ಕೂ ಹೆಚ್ಚು ಸಾಧಕರು ಉಪಸ್ಥಿತರಿದ್ದರು.