ಬೆಂಗಳೂರು: ಕರ್ನಾಟಕ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದಲ್ಲಿ ನಡೆದಿದೆಯೆನ್ನಲಾಗಿರುವ 183 ಕೋಟಿ ರೂ. ಹಗರಣದಲ್ಲಿ ಪಾಲುದಾರನಾಗಿರುವ ಆರೋಪ ಹೊತ್ತಿರುವ ಹೈದರಾಬಾದ್ ಮೂಲದ ಸತ್ಯನಾರಾಯಣ ವರ್ಮಾ, ವಾಲ್ಮೀಕಿ ನಿಗಮದಲ್ಲಿ ತಾನು ಪಡೆದ ಪಾಲಿನಿಂದಲೇ ಎರಡು ಐಷಾರಾಮಿ ಕಾರುಗಳನ್ನು ಖರೀದಿಸಿದ್ದ. ಈ ಪ್ರಕರಣದ ತನಿಖೆ ನಡೆಸುತ್ತಿರುವ,
ರಾಜ್ಯ ಸರ್ಕಾರದ ವಿಶೇಷ ತನಿಖಾ ತಂಡದ (ಎಸ್ಐಟಿ) ತನಿಖೆಯಲ್ಲಿ ಈ ವಿಚಾರ ಬಹಿರಂಗವಾಗಿದೆ. ವಾಲ್ಮೀಕಿ ಹಗರಣದಡಿ ಕರ್ನಾಟಕದಿಂದ ವರ್ಗಾವಣೆಯಾಗಿರುವ ಹಣವನ್ನು ಹೈದರಾಬಾದ್ ಮೂಲದ ಕಾಕಿ ಶ್ರೀನಿವಾಸ್ ಎಂಬುವರ ಕಂಪನಿಗೆ ವರ್ಗಾವಣೆ ಮಾಡಲಾಗಿತ್ತು. ಈ ಹಣದ ವರ್ಗಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ನೋಡಿಕೊಂಡುದ ಈತನೇ ಎಂದು ಹೇಳಲಾಗಿದೆ.
ಕಾಕಿ ಶ್ರೀನಿವಾಸ್ ಅವರ ಡಿಜಿಟೆಲ್ ಕಂಪನಿಗೆ 10 ಕೋಟಿ ರೂ. ವರ್ಗಾವಣೆ ಮಾಡಿಸಿಕೊಳ್ಳಲಾಗಿತ್ತು. ಇದೀಗ, ಕಾಕಿ ಶ್ರೀನಿವಾಸ್ ತಲೆಮರೆಸಿಕೊಂಡಿದ್ದು ಆತನಿಗಾಗಿ ಶೋಧ ನಡೆಸಲಾಗುತ್ತಿದೆ. ಈ ಅಕ್ರಮ ಹಣ ವರ್ಗಾವಣೆಯಲ್ಲಿ ತನ್ನ ಪಾಲಿಗೆ ಬಂದಿರುವ ಹಣದಲ್ಲಿ ವರ್ಮಾ, ಎರಡು ಐಷಾರಾಮಿ ಕಾರುಗಳನ್ನು ಖರೀದಿ ಮಾಡಿದ್ದ.
ಆ ಕಾರುಗಳು ಸೆಕೆಂಡ್ ಹ್ಯಾಂಡ್ ಕಾರುಗಳಾಗಿದ್ದು, ಅವುಗಳನ್ನು ಹೈದರಾಬಾದ್ ನಲ್ಲಿರುವ ಸೆಕೆಂಡ್ ಹ್ಯಾಂಡ್ ಕಾರುಗಳ ಶೋರೂಂನಿಂದಲೇ ಖರೀದಿಸಲಾಗಿತ್ತು. ಈ ವಿಚಾರವನ್ನು ಪತ್ತೆ ಮಾಡಿದ ಎಸ್ಐಟಿ, ಹೈದರಾಬಾದ್ ನಲ್ಲಿರುವ ಆ ಶೋರೂಂನ ಮಾಲೀಕರಿಗೆ ವಿಚಾರ ತಿಳಿಸಿದ್ದಾರೆ.
ಆಗ, ವರ್ಮಾ ಕೊಂಡಿರುವ ಕಾರುಗಳನ್ನು ವಾಪಸ್ ಮಾಡಿದರೆ ತಾವು ಆತ ಕೊಟ್ಟಿದ್ದ ಹಣವನ್ನು ಮರಳಿಸುವುದಾಗಿ ಎಸ್ಐಟಿ ಅಧಿಕಾರಿಗಳಿಗೆ ಸೂಚಿಸಿದ್ದರು. ಅಂತೆಯೇ, ವರ್ಮಾ ಹೊಂದಿದ್ದ ಎರಡು ಐಶಾರಾಮಿ ಕಾರುಗಳನ್ನು ಶೋ ರೂಮಿನವರಿಗೆ ನೀಡಿ ಹಣವನ್ನು ಮತ್ತೆ ವಶಪಡಿಸಿಕೊಳ್ಳಲಾಗಿದೆ.