ದಾವಣಗೆರೆ:- ದಾವಣಗೆರೆ ತಾಲ್ಲೂಕಿನ ಕೊಡಗನೂರು ಕೆರೆಯಲ್ಲಿ ಎರಡನೇ ಹೆಂಡತಿಗಾಗಿ ಮೊದಲ ಪತ್ನಿಯನ್ನೇ ಕೊಂದು ಕೆರೆಗೆ ಹಾಕಿದ ಘಟನೆ ಜರುಗಿದೆ.
ಕಾವ್ಯ ಹೀಗೆ ಕೊಲೆಯಾಗಿರುವ ಗೃಹಿಣಿಯಾಗಿದ್ದು, ಈಕೆ ಹೊಳಲ್ಕೆರೆ ತಾಲ್ಲೂಕಿನ ಕಾಗಳಗೆರೆ ಗ್ರಾಮದ ನಿವಾಸಿ ಸಚಿನ್ ಎನ್ನುವನನ್ನು ಕಳೆದ ಐದು ವರ್ಷಗಳ ಹಿಂದೆ ಮದುವೆಯಾಗಿದ್ದಳು, ಅವರ ಮುದ್ದಾದ ಸಂಸಾರಕ್ಕೆ ಒಂದು ಮಗು ಕೂಡ ಇತ್ತು. ಆದರೆ, ಬೇರೆ ಮಹಿಳೆಯರ ಚಪಲ ಹೊಂದಿದ್ದ ಸಚಿನ್ ದಾವಣಗೆರೆ ತಾಲ್ಲೂಕಿನ ಕಡ್ಲೆಬಾಳು ಗ್ರಾಮದ ನಿವಾಸಿ ಚೈತ್ರ ಎಂಬಾಕೆಯ ಹಿಂದೆ ಬಿದ್ದಿದ್ದ. ಆಕೆಯನ್ನು ಕೂಡ ಎರಡನೇ ಮದುವೆಯಾಗಿದ್ದ ಎಂದು ಹೇಳಲಾಗುತ್ತಿದೆ. ಇನ್ನು ಇವರಿಬ್ಬರ ಸರಸಕ್ಕೆ ಕಾವ್ಯ ಅಡ್ಡಿಯಾದ ಹಿನ್ನಲೆ ಈಕೆಯನ್ನು ಕತ್ತು ಹಿಸುಕಿ ಸಾಯಿಸಿ ಗೋಣಿಚೀಲದಲ್ಲಿ ತುಂಬಿಕೊಂಡು ದಾವಣಗೆರೆ ತಾಲ್ಲೂಕಿನ ಕೊಡಗನೂರು ಕೆರೆಗೆ ತಂದು ಹಾಕಿದ್ದಾರೆ.
ಇತ್ತ ಕಾವ್ಯ ಕಾಣದೇ ಇರುವುದರಿಂದ ಅವರ ತವರು ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಅನುಮಾನಗೊಂಡ ಪೊಲೀಸರು ಗಂಡ ಸಚಿನ್ನನ್ನು ಅವರ ಸ್ಟೈಲ್ ನಲ್ಲಿ ವಿಚಾರ ಮಾಡಿದಾಗ ಸತ್ಯಾಂಶ ಹೊರಬಂದಿದೆ. ಇನ್ನು ಕಾವ್ಯ ಕಳೆದ ಐದು ವರ್ಷ ಸಚಿನ್ ಜೊತೆ ಸಂಸಾರ ಮಾಡಿದ್ದು, ಆದರೆ ಇತ್ತೀಚಿಗೆ ಈತನ ವರ್ತನೆಯೇ ಬೇರೆಯಾಗಿತ್ತು. ಅಲ್ಲದೆ ಚೈತ್ರಳಾ ಜೊತೆ ಕಣ್ಣಮುಚ್ಚಾಲೆ ಆಟದ ವಿಚಾರ ತಿಳಿಯುತ್ತಿದ್ದಂತೆ ಜಗಳಮಾಡಿಕೊಂಡು ತನ್ನ ತವರು ಮನೆಗೆ ಹೋಗಿದ್ದಳಂತೆ. ಕಳೆದ ಜನವರಿ 6 ರಂದು ಆಕೆಯನ್ನು ತವರು ಮನೆಯಿಂದ ಕಾಗಳಗೆರೆ ಗ್ರಾಮಕ್ಕೆ ಕರೆತಂದಿದ್ದ. ಮತ್ತೆ ಜಗಳವಾಗುತ್ತಿದ್ದಂತೆ ಸಚಿನ್ ಹಾಗೂ ಚೈತ್ರ ಸೇರಿಕೊಂಡು ಕಾವ್ಯಾಳ ಕತೆ ಮುಗಿಸಿದ್ದಾರೆ.