ಕೋಲಾರ:- ಕೆಜಿಎಫ್ನ ಸಂಜಯ್ಗಾಂಧಿ ನಗರದಲ್ಲಿ ಗಂಡನ ವಿರುದ್ದ ಹೆಂಡತಿ ವರದಕ್ಷಿಣೆ ಕಿರುಕುಳ ದೂರು ನೀಡಿದ ಹಿನ್ನೆಲೆಯಲ್ಲಿ ಗಂಡನೇ ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜರುಗಿದೆ.
ಕಳೆದ ಆರು ವರ್ಷಗಳ ಹಿಂದೆ ಕೆಜಿಎಫ್ನ ಸಂಜಯ್ಗಾಂಧಿ ನಗರದ ಪವಿತ್ರ ಹಾಗೂ ಕೋರಮಂಡಲ್ ಏರಿಯಾದ ಲೋಕೇಶ್ ಎಂಬುವವರು ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಜೊತೆಗೆ ಇಬ್ಬರು ಮಕ್ಕಳು ಕೂಡ ಇದ್ದರು. ಹೀಗೆ ಸಂಸಾರ ನಡೆಯಬೇಕಾದರೆ ಕಳೆದ ಕೆಲವು ವರ್ಷಗಳಿಂದ ಪವಿತ್ರ ಪತಿ ಲೋಕೇಶ್, ಹೆಂಡತಿಗೆ ಕಿರುಕುಳ ನೀಡಲು ಶುರುಮಾಡಿದ್ದಾನೆ. ಹಣಕ್ಕಾಗಿ ಹೆಂಡತಿ ಪವಿತ್ರಾ ಮೇಲೆ ಹಲ್ಲೆ ಮಾಡೋದು, ಹಣ ತರದೆ ಇದ್ದಾಗ ತನ್ನ ತಾಯಿಯ ಮನೆಗೆ ಕಳಿಸುವುದು ಮಾಡುತ್ತಿದ್ದ.
ಇನ್ನು ಲೋಕೇಶ್ ಮಾತ್ರ ಬೇರೆ ಬೇರೆ ಮಹಿಳೆಯರ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ. ಜೊತೆಗೆ ಅವರ ಜೊತೆಗಿನ ಪೋಟೋಗಳನ್ನು ತನ್ನ ಹೆಂಡತಿಗೆ ಹಾಕಿ ಹಿಂಸೆ ನೀಡುತ್ತಿದ್ದ. ಇದರಿಂದ ಬೇಸತ್ತ ಪವಿತ್ರ, ಕಳೆದ ಎರಡು ವರ್ಷಗಳ ಹಿಂದೆ ಉರಿಗಾಂ ಪೊಲೀಸ್ ಠಾಣೆಗೆ ವರದಕ್ಷಿಣೆ ಕಿರುಕುಳ ದೂರು ನೀಡಿದ್ದಳು. ಅದಾದ ಮೇಲೆ ಇಬ್ಬರೂ ಬೇರೆ ಬೇರೆಯಾಗಿದ್ದರು. ಆದರೂ ಕೂಡ ಅವನ ಕಿರುಕುಳ ಮಾತ್ರ ತಪ್ಪಿರಲಿಲ್ಲ. ಇದರಿಂದ ಕಳೆದ ವಾರವಷ್ಟೇ ಪವಿತ್ರ, ಲೋಕೇಶ್ ವಿರುದ್ದ ಉರಿಗಾಂ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಈ ಹಿನ್ನೆಲೆ ಅಲ್ಲಿನ ಪೊಲೀಸರು ಲೋಕೇಶ್ನನ್ನು ಕರೆದು ವಾರ್ನ್ ಮಾಡಿ ಕಳಿಸಿದ್ದರು. ಹೀಗಿರುವಾಗಲೇ ನಿನ್ನೆ(ಫೆ.14) ರಾತ್ರಿ ಪವಿತ್ರ, ಲೋಕೇಶ್ ಮನೆಯಲ್ಲಿದ್ದ ತನ್ನ ಮೊದಲನೆ ಮಗನನ್ನು ಮಾತನಾಡಿಕೊಂಡು ಬರುಲು ಕೋರಮಂಡಲ್ ಏರಿಯಾಗೆ ಹೋಗಿದ್ದಾಳೆ. ಈ ವೇಳೆ ಕೋರಮಂಡಲ್ ಬಳಿ ಇರುವ ನಾರ್ಥ್ ಟ್ಯಾನ್ ಬ್ಲಾಕ್ ಮೈದಾನದಲ್ಲಿ ಲೋಕೇಶ್ ಪವಿತ್ರಾಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದಾನೆ
ಘಟನೆ ಕುರಿತು ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಉರಿಗಾಂ ಪೊಲೀಸರು, ವರದಕ್ಷಿಣೆ ಹಾಗೂ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ತಲೆ ಮರೆಸಿಕೊಂಡಿರುವ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ