ಇಂದು ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಗ್ರಾಮೀಣ ಸ್ಥಳೀಯ ಸಮಿತಿ ವತಿಯಿಂದ ಕಂಪ್ಲಿ ಪಟ್ಟಣದಲ್ಲಿ ಕೇಂದ್ರ ಸರ್ಕಾರದ ಬೆಲೆ ಏರಿಕೆ, ನಿರುದ್ಯೋಗ, ಮಹಿಳೆಯರ ಮೇಲಿನ ದೌರ್ಜನ್ಯ, ಶಿಕ್ಷಣ, ಆರೋಗ್ಯ ಮತ್ತು ವಿದ್ಯುತ್ ಸೇರಿದಂತೆ ಹಲವಾರು ಸಾರ್ವಜನಿಕ ಸಂಸ್ಥೆಗಳ ಖಾಸಗಿಕರಣದಂತಹ ಜನರ ಜ್ವಲಂತ ಸಮಸ್ಯೆಗಳ ವಿರುದ್ಧ ಸಹಿ ಸಂಗ್ರಹ ಅಭಿಯಾನ ನಡೆಯಿತು. ಈ ಸಂದರ್ಭದಲ್ಲಿ ಸಾವಿರಾರು ಸಹಿಗಳನ್ನು ಸಂಗ್ರಹಿಸಲಾಯಿತು.ಎಸ್ ಯು ಸಿ ಐ ಗ್ರಾಮೀಣ ಸ್ಥಳಿಯ ಸಮಿತಿ ಕಾರ್ಯದರ್ಶಿಗಳಾದ ಎ. ದೇವದಾಸ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ,
ಮಾತನಾಡುತ್ತಾ ನಮ್ಮ ದೇಶಕ್ಕೆ ಸ್ವತಂತ್ರ ಬಂದು 75 ವರ್ಷಗಳು ಕಳೆದರೂ ಸಹ ಇದುವರೆಗೂ ಜನರ ಜೀವನದಲ್ಲಿ ಯಾವುದೇ ಪ್ರಗತಿಯನ್ನು ಕಾಣಲಾಗಿಲ್ಲ, ಬದಲಾಗಿ ದಿನದಿಂದ ದಿನಕ್ಕೆ ಅವರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಮಂಡಿಸಿದ ಮಧ್ಯಂತರ ಬಡ್ಜೆಟ್ ನಲ್ಲಿಯೂ ಸಹ ಬಡ ಜನಪರವಾದ ಯಾವುದೇ ಯೋಜನೆಯನ್ನು ನಾವು ಕಾಣಲಾಗಿಲ್ಲ, ಇಂದು ಹಸಿವಿನ ಸೂಚ್ಯಂಕ ದಲ್ಲಿ ಭಾರತ 111 ನೇ ಸ್ಥಾನಕ್ಕೆ ಕುಸಿದಿದೆ, ನಿರುದ್ಯೋಗ, ಬೆಲೆ ಏರಿಕೆ ಸಮಸ್ಯೆ ಗಗನಕ್ಕೇರಿದೆ, ಶಿಕ್ಷಣ, ಆರೋಗ್ಯ ದುಬಾರಿಯಾಗಿವೆ. ಇದು ಈ ದೇಶದ ಪರಿಸ್ಥಿತಿ.
ಇಲ್ಲಿ ಆಳ್ವಿಕೆಗೆ ಬಂದ ಎಲ್ಲಾ ಪಕ್ಷಗಳು ಸಹ ಜನಸಾಮಾನ್ಯರ ಹಿತವನ್ನು ಕಡೆಗಣಿಸಿ ದೊಡ್ಡ ದೊಡ್ಡ ಬಂಡವಾಳಶಾಹಿಗಳ ಪರ ನೀತಿಗಳನ್ನ ಜಾರಿಗೊಳಿಸುತ್ತಿದ್ದಾರೆ. ರೈತರಿಗೆ ಇದುವರೆಗೂ ಬೆಳೆ ನಷ್ಟ ಮತ್ತು ಬರದ ಪರಿಹಾರ ಕೊಡದಿರುವುದು ಇದಕ್ಕೆ ಪುಷ್ಠಿ ನೀಡಿದಂತಿದೆ. ಹಾಗಾಗಿ ಕಾರ್ಮಿಕರು, ರೈತರು- ಕೃಷಿ ಕಾರ್ಮಿಕರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬಲಿಷ್ಠ ಚಳುವಳಿಗಳಿಂದ ಮಾತ್ರ ಸಾಧ್ಯ ಹಾಗಾಗಿ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಕಟ್ಟಲು ಮುಂದಾಗಿ ಎಂದು ಕರೆ ನೀಡಿದರು ಈ ಸಂದರ್ಭದಲ್ಲಿ ಗ್ರಾಮೀಣ ಸಮಿತಿಯ ಮುಖಂಡರುಗಳಾದ ಹನುಮಪ್ಪ, ಜಗದೀಶ್ ನೇಮಕಲ್, ಗುರಳ್ಳಿ ರಾಜ, ಸದಸ್ಯರಾದ ಈರಣ್ಣ, ಶಾಂತಿ, ವಿದ್ಯಾ, ನಿಂಗಪ್ಪ ಸೇರಿದಂತೆ ಇತರರು ಇದ್ದರು.