ಬೆಂಗಳೂರು:- ಲೋಕಸಭಾ ಚುನಾವಣೆಯಲ್ಲಿ ಅಂದುಕೊಂಡ ಲೀಡ್ ಪಡೆಯದ ಹಿನ್ನೆಲೆ ಹೈಕಮಾಂಡ್ ವಿಚಲಿತವಾಗಿದ್ದು, ರಾಜ್ಯ ನಾಯಕರ ಮೇಲೆ ಗರಂ ಆಗಿದೆ. ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಭೇಟಿಗೆ ಬರುವ ಶಾಸಕರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.
ತಮ್ಮ ಭೇಟಿಗೆ ಬಂದ ಶಾಸಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ನಿಮ್ಮ ಕ್ಷೇತ್ರದಲ್ಲಿ ಎಷ್ಟು ಲೀಡ್ ಬಂದಿದೆ” ಎಂದು ಪ್ರಶ್ನಿಸುತ್ತಿದ್ದಾರೆ. ಲೀಡ್ ಕಡಿಮೆ ಬಂದಿದ್ದರೆ ಮುಂದಿನ ದಿನಗಳಲ್ಲಿ ನಿಮಗೆ ಸಮಸ್ಯೆ ಆಗಲಿದೆ ಎಂದು ಎಚ್ಚರಿಕೆ ನೀಡುತ್ತಿದ್ದಾರೆ. ಇದು ಸಹಜವಾಗಿ ಶಾಸಕರಲ್ಲಿ ಆತಂಕ ಶುರುವಾಗಿದೆ. 18 ಕ್ಕೂ ಹೆಚ್ಚು ಸಚಿವರ ಕ್ಷೇತ್ರಗಳಲ್ಲಿ ಲೀಡ್ ಕಡಿಮೆ ಬಂದಿರುವ ಬಗ್ಗೆ ಹೈಕಮಾಂಡ್ ಕೈ ಸೇರಿದೆ. ಬೂತ್ ಮಟ್ಟದಲ್ಲಿ ಪಕ್ಷ ಕೊಂಡೊಯ್ಯುವ ತಯಾರಿ ಮಾಡಿಕೊಂಡಿದ್ದ ಕಾಂಗ್ರೆಸ್ಗೆ ಸಚಿವರಿಂದಲೇ ಸರಿಯಾದ ಸಹಕಾರ ಸಿಕ್ಕಿಲ್ಲ ಎಂಬಂತಾಗಿದೆ. ಕರ್ನಾಟಕದಲ್ಲಿ ಫಲಿತಾಂಶ ಕಡಿಮೆಯಾದ ಹಿನ್ನೆಲೆಯಲ್ಲಿ ಸೋಲಿನ ಪರಾಮರ್ಶೆಗೆ ಎಐಸಿಸಿ ಸಮಿತಿ ರಚಿಸಲು ನಿರ್ಧರಿಸಿದೆ. ಎಐಸಿಸಿ ಮಟ್ಟದ ಹಾಗೂ ರಾಜ್ಯ ನಾಯಕರು ಒಳಗೊಂಡ ಸಮಿತಿ ರಚನೆಯಾಗಲಿದ್ದು, ಕ್ಷೇತ್ರವಾರು ಮಾಹಿತಿ ಪಡೆದು ಪರಿಶೀಲನೆ ನಡೆಸಲಿದೆ. ಯಾವ ಕ್ಷೇತ್ರದಲ್ಲಿ ಹಿನ್ನಡೆಯಾಗಿದೆ ಎಂದು ತಿಳಿದುಕೊಳ್ಳಲಾಗುತ್ತದೆ. ಬಳಿಕ ಆಯಾ ಕ್ಷೇತ್ರದ ಶಾಸಕರ ಮತ್ತು ಸಚಿವರ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ.
ಲೋಕಸಭಾ ಚುನಾವಣೆಯಲ್ಲಿ ಸ್ವಕ್ಷೇತ್ರದಲ್ಲಿ ಪಕ್ಷಕ್ಕೆ ಲೀಡ್ ಕೊಡಿಸುವಲ್ಲಿ ವಿಫಲರಾದ ರಾಜ್ಯದ 17 ಸಚಿವರಿಗೆ ವರಿಷ್ಠ ರಾಹುಲ್ ಗಾಂಧಿ ಕೆಂಗಣ್ಣು ಬೀರಿದ್ದು, ಈ ಸಚಿವರು ಪ್ರತಿನಿಧಿಸಿದ್ದ ಕ್ಷೇತ್ರಗಳಲ್ಲಿ ಹಿನ್ನಡೆಗೆ ಕಾರಣವೇನು ಎಂಬ ಬಗ್ಗೆ ಸಮಗ್ರ ವರದಿ ನೀಡುವಂತೆ ರಾಜ್ಯ ನಾಯಕತ್ವಕ್ಕೆ ತಾಕೀತು ಮಾಡಿ ದ್ದರು.