ಬೆಂಗಳೂರು: ನವೆಂಬರ್ ಒಳಗೆ ಜಾತಿ ಜನಗಣತಿ ಬಿಡುಗಡೆ ಮಾಡದಿದ್ದರೆ ಸಿಎಂ ಸಿದ್ದರಾಮಯ್ಯಗೆ (Siddaramaiah) ಸಾಧು ಸಂತರ ಶಾಪ ತಟ್ಟುತ್ತದೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ (KS Eshwarappa) ಭವಿಷ್ಯ ನುಡಿದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಕೆಎಸ್ ಈಶ್ವರಪ್ಪ, ಹಿಂದುಳಿದ ವರ್ಗಗಳ ವರದಿ ನವೆಂಬರ್ ಒಳಗೆ ಬಿಡುಗಡೆ ಮಾಡುತ್ತೇನೆ ಎಂದು ಸಿದ್ದರಾಮಯ್ಯ 1001ನೇ ಸಲ ಹೇಳಿದ್ದಾರೆ. ಹಿಂದುಳಿದ, ದಲಿತ ಮಠಾಧಿಪತಿಗಳ ಒಕ್ಕೂಟಕ್ಕೆ ನವೆಂಬರ್ನಲ್ಲಿ ಬಿಡುಗಡೆ ಮಾಡ್ತೀನಿ ಅಂತಾ ಸಿಎಂ ಹೇಳಿದ್ದಾರೆ ನವೆಂಬರ್ ಒಳಗೆ ಬಿಡುಗಡೆ ಮಾಡದಿದ್ದರೆ ಸಿದ್ದರಾಮಯ್ಯಗೆ ಸಾಧು ಸಂತರ ಶಾಪ ತಟ್ಟುತ್ತದೆ. ಈ ಸರ್ಕಾರ ಬಹಳ ದಿನ ಇರಲ್ಲ, ಹಾಳಾಗಿ ಹೋಗುತ್ತದೆ ಎಂದು ಕಿಡಿ ಕಾರಿದ್ದಾರೆ.
ಕಾಂಗ್ರೆಸ್ನಲ್ಲಿ ನಾನೇ ಸಿಎಂ ಎಂದು ಹೇಳಿಕೊಳ್ಳುವವರ ಸಂಖ್ಯೆ ವೋಟರ್ ಲಿಸ್ಟ್ನಂತೆ ಬೆಳೆಯುತ್ತಿದೆ. ಮಾತೆತ್ತಿದರೆ ಕೇಂದ್ರ ಪರಿಹಾರ ಕೊಟ್ಟಿಲ್ಲ ಎನ್ನುತ್ತಾರೆ. ಕದ್ದು ತಮಿಳುನಾಡಿಗೆ ನೀರು ಬಿಟ್ರಲ್ಲ, ಆಗ ಇವರು ಪ್ರಧಾನಿಯವರನ್ನು ಕೇಳಿದ್ರಾ? ಸಿದ್ದರಾಮಯ್ಯ ಈಗ ಸಿಎಂ, ಇನ್ನೆಷ್ಟು ದಿನ ಸಿಎಂ ಸ್ಥಾನದಲ್ಲಿ ಇರ್ತಾರೋ ಗೊತ್ತಿಲ್ಲ. ರೈತರಿಗೆ ಪರಿಹಾರ ಕೊಡಿ, ನಿಮಗೆ ಇನ್ನಷ್ಟು ದಿನ ಅಧಿಕಾರದಲ್ಲಿರಿ ಎಂದು ರೈತರು ಆಶೀರ್ವಾದ ಮಾಡುತ್ತಾರೆ ಎಂದು ಈಶ್ವರಪ್ಪ ಹೇಳಿಕೆ ನೀಡಿದರು.