ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಮೊದಲ ಸೋಲಿನ ಆಘಾತಕ್ಕೊಳಗಾಯಿತು. ಹ್ಯಾಟ್ರಿಕ್ ಜಯದೊಂದಿಗೆ ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿದ್ದ ಶ್ರೇಯಸ್ ಅಯ್ಯರ್ ಸಾರಥ್ಯದ ಕೆಕೆಆರ್ ತಂಡ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ಎದುರು 7 ವಿಕೆಟ್ಗಳ ಹೀನಾಯ ಸೋಲುಂಡಿತು. ಈ ಬಗ್ಗೆ ಮಾತನಾಡಿದ ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ ತಂಡದ ಕಡೆಯಿಂದಾದ ತಪ್ಪನ್ನು ಒಪ್ಪಿಕೊಂಡು ಬೇಸರ ವ್ಯಕ್ತ ಪಡಿಸಿದ್ದಾರೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡ ಮೊದಲ ಎಸೆತದಲ್ಲೇ ಓಪನರ್ ಫಿಲ್ ಸಾಲ್ಟ್ (0) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದರೂ, ಪವರ್ ಪ್ಲೇ ಓವರ್ಗಳಲ್ಲಿ ಸರಾಸರಿ 10ರಂತೆ ರನ್ ಕಲೆಹಾಕಿ ಸ್ಪೋಟಕ ಆರಂಭವನ್ನೇ ಪಡೆದಿತ್ತು. ಆದರೆ, ಪವರ್ ಪ್ಲೇ ಓವರ್ಗಳ ನಂತರ ಸ್ಪಿನ್ನರ್ಗಳು ದಾಳಿ ಆರಂಭಿಸಿದಂತೆ ಕೆಕೆಆರ್ ಬ್ಯಾಟರ್ಗಳ ಪೆವಿಲಿಯನ್ ಪರೇಡ್ ಶುರುವಾಯಿತು. ಒಂದು ಹಂತದಲ್ಲಿ 160ಕ್ಕೂ ಹೆಚ್ಚು ರನ್ ಕಲೆಹಾಕುವ ಲೆಕ್ಕಾಚಾರದಲ್ಲಿದ್ದ ಕೆಕೆಆರ್, ಕೊನೆಗೆ 20 ಓವರ್ಗಳಲ್ಲಿ 137/9 ರನ್ ಮಾತ್ರವೇ ಕಲೆಹಾಕಲು ಶಕ್ತವಾಯಿತು.
Gruhalakshmi Scheme: ಗ್ಯಾರಂಟಿ ಯೋಜನೆಯ ಗೃಹಲಕ್ಷ್ಮೀ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ..!
ಈ ಹಿಂದಿನ ಮೂರೂ ಪಂದ್ಯಗಳಲ್ಲಿ ಕೆಕೆಆರ್ ಬ್ಯಾಟರ್ಗಳು ಪವರ್ಫುಲ್ ಪ್ರದರ್ಶನ ನೀಡಿದ್ದರು. ಆದರೆ, ಚೆಪಾಕ್ನ ಸ್ಪಿನ್ ಸ್ನೇಹಿ ಪಿಚ್ನಲ್ಲಿ ಸಿಎಸ್ಕೆ ತಂಡದ ಗುಣಮಟ್ಟದ ಬೌಲಿಂಗ್ ದಾಳಿ ಎದುರು ಕೆಕೆಆರ್ ಬ್ಯಾಟರ್ಗಳು ಅಕ್ಷರಶಃ ಕಕ್ಕಾಬಿಕ್ಕಿಯಾದರು. ಸುಲಭದ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಋತುರಾಜ್ ಗಾಯಕ್ವಾಡ್ (67*) ಅವರ ಅಜೇಯ ಅರ್ಧಶತಕದ ಬಲದಿಂದ 17.5 ಓವರ್ಗಳಲ್ಲಿ ಗೆಲುವಿನ ಕೇಕೆ ಹಾಕಿತು.
ಪಂದ್ಯದ ಬಳಿಕ ಮಾತನಾಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್, ಟೂರ್ನಿಯಲ್ಲಿ ತಮ್ಮ ತಂಡದ ಮೊದಲ ಸೋಲಿಗೆ ಮುಕ್ಯ ಕಾರಣ ಏನೆಂಬುದನ್ನು ತಿಳಿಸಿದರು. ಬ್ಯಾಟರ್ಗಳ ನಿರಾಶಾದಾಯಕ ಪ್ರದರ್ಶನವೇ ಹೀನಾಯ ಸೋಲಿಗೆ ಮುಖ್ಯ ಕಾರಣವಾಯಿತು ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಚೆಪಾಕ್ ಪಿಚ್ನ ಸ್ವಭಾವ ಅರಿಯುವಲ್ಲಿ ತಮ್ಮ ತಂಡ ಸಂಪೂರ್ಣ ವಿಫಲವಾಯಿತು ಎಂದು ಒಪ್ಪಿಕೊಂಡಿದ್ದಾರೆ.