ಕೃಷಿಯ ಜೊತೆಗೆ ಕುರಿ ಸಾಕಾಣಿಕೆಯನ್ನು ಆರಂಭ ಮಾಡಿ 7ರಿಂದ 8 ಲಕ್ಷದವರೆಗೆ ಆದಾಯ ಗಳಿಸುತ್ತಿದ್ದಾರೆ ಈ ಮಹಿಳೆ. ಇಲ್ಲಿದೆ ಸ್ಪೂರ್ತಿದಾಯಕ ಕೃಷಿ ಮಾಡುತ್ತಿರುವ ಮಹಿಳೆಯ ಕಥೆ…
ಇನ್ನೂ ಹೆಚ್ಚಿನದನ್ನು ಸಾಧಿಸಬೇಕಾಗಿದೆ ಎನ್ನುವ ತುಡಿತದಲ್ಲಿರುವ ಗದಗ ಜಿಲ್ಲೆಯ ಮುಳಗುಂದ ಗ್ರಾಮದ ಕೃಷಿ ಪದವಿಧರೆ ಶ್ರೀಮತಿ ಮಂಗಳಾ ಕಿರಣ ನೀಲಗುಂದ.
ಬರ ಪರಿಸ್ಥಿತಿಯಲ್ಲಿ ಪರ್ಯಾಯ ಮಾರ್ಗಗಳನ್ನು ಅನುಸರಿಸಿ ಯಶಸ್ಸನ್ನು ಕಂಡ ಮಹಿಳೆ ಮಂಗಳಾ ಕಿರಣ ನೀಲಗುಂದ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಗುಡಿಹೊನ್ನತ್ತಿ ಗ್ರಾಮದವರು. ತಂದೆ ಚಂದ್ರಶೇಖರ ಬಸಪ್ಪ ಉಪ್ಪಿನ.
ಓದಿನಲ್ಲಿ ಚುರುಕಾಗಿದ್ದ ಇವರನ್ನು ತಂದೆ ಚಂದ್ರಶೇಖರ ಅವರು ಮಿತಿಗಳನ್ನು ಹೇರದೆ ಗಂಡು ಮಗುವಿನಂತೆ ಬೆಳೆಸಿದರು. ಪರಿಣಾಮವಾಗಿ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಇದ್ದ ಇವರು ತಂದೆಯವರ ಪ್ರೋತ್ಸಾಹದ ಮೂಲಕ ಓಟದಲ್ಲಿ ಜಿಲ್ಲಾಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.
ಬಿಎಸ್ಸಿ ಕೃಷಿ ಪದವಿಯನ್ನು ಪಡೆದುಕೊಂಡಿರುವ ಇವರು ಮೂಲತಃ ಕೃಷಿಯಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದರು. ಕೃಷಿಯಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ವಿಚಾರದೊಂದಿಗೆ ಕೃಷಿ ಮತ್ತು ಕೃಷಿ ಉಪಕಸುಬಾದ ಕುರಿ ಸಾಕಾಣಿಕೆಯನ್ನು ಆರಂಭ ಮಾಡಲು ಪತಿ ಕಿರಣ ನೀಲಗುಂದ ಅವರೊಂದಿಗೆ ಚರ್ಚಿಸಿ ಕುರಿ ಸಾಕಾಣಿಕೆ ಆರಂಭಿಸಿದರು.
30 ಕುರಿ ಮರಿಗಳೊಂದಿಗೆ 2015ರಲ್ಲಿ ಕುರಿ ಸಾಕಾಣಿಕೆ ಆರಂಭ!
ಕೇವಲ 30 ಕುರಿ ಮರಿಗಳೊಂದಿಗೆ 2015ರಲ್ಲಿ ಕುರಿ ಸಾಕಾಣಿಕೆಯನ್ನು ಆರಂಭ ಮಾಡುತ್ತಾರೆ. 5 ತಿಂಗಳ ನಂತರ ಅವುಗಳನ್ನು ಮಾರಾಟ ಮಾಡಿದಾಗ ಕುರಿ ಸಾಕಾಣಿಕೆಯಲ್ಲಿ ಹೂಡಿದ್ದ ನಿವ್ವಳ ಖರ್ಚು ಮರಳಿ ಬಂದಿತ್ತು.
ನಂತರ ಎರಡನೇ ಬಾರಿಗೆ 70 ಕುರಿ ಮರಿ, ಮೂರನೇ ಬಾರಿ 100 ಕುರಿ ಮರಿ, ನಂತರ 200 ಕುರಿ ಮರಿಗಳನ್ನು ತಂದು ಸಾಕಾಣಿಕೆ ಮಾಡುವಷ್ಟು ಕುರಿ ಸಾಕಾಣಿಕೆ ಕೈ ಹಿಡಿದಿತ್ತು.
ಹೆಚ್ಚಿನ ಪಾಲನೆ-ಪೋಷಣೆಗಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಆಡು ಮತ್ತು ಕುರಿ ಸಾಕಾಣಿಕೆ ತರಬೇತಿಯನ್ನು ಪಡೆದುಕೊಂಡರು. ಕುರಿಗಳ ನಿರ್ವಹಣೆಗೆ 3 ಜನ ಕೆಲಸಗಾರರನ್ನು ಕೂಡ ನೇಮಿಸಿಕೊಂಡಿದ್ದಾರೆ. ಸದ್ಯಕ್ಕೆ ಒಟ್ಟು 300 ಕುರಿಗಳು ಹಾಗೂ 100 ಟಗರುಗಳನ್ನು ಇವರು ಸಾಕುತ್ತಿದ್ದಾರೆ. ಸ್ಥಳೀಯವಾಗಿ ಕುರಿಗಳನ್ನು ಮಾರಾಟ ಮಾಡುತ್ತಾರೆ.
ಒಂದು ವರ್ಷದ ಟಗರು 40ರಿಂದ 55 ಕೆ.ಜಿ ತೂಗುತ್ತವೆ. ಇವುಗಳನ್ನು 15000 ದಿಂದ 25000 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತದೆ. ಒಟ್ಟು ವಾರ್ಷಿಕವಾಗಿ 7ರಿಂದ 8 ಲಕ್ಷದವರೆಗೆ ಈ ಕುರಿ ಸಾಕಾಣಿಕೆಯಿಂದ ಲಾಭವನ್ನು ಪಡೆಯುತ್ತಾರೆ. ಜೊತೆಗೆ 20 ಆಡು ಹಾಗೂ 200 ನಾಟಿ ಕೋಳಿ ಸಾಕಾಣಿಕೆಯನ್ನು ಕೂಡ ಮಾಡುತ್ತಿದ್ದಾರೆ.