ಕೊಯಮತ್ತೂರು:- ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಇಬ್ಬರು ಹಂಗಾಮಿ ಪ್ರಾಧ್ಯಾಪಕರು ಸೇರಿದಂತೆ ನಾಲ್ವರನ್ನು ಬಂಧಿಸಿರುವ ಘಟನೆ ಜರುಗಿದೆ.
ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಮುಂದೆಯೇ ಕಿತ್ತಾಡಿಕೊಂಡ “ಕೈ” ಕಾರ್ಯಕರ್ತರು!
ಪ್ರಕರಣದಲ್ಲಿ ಇಬ್ಬರು ಪ್ರಾಧ್ಯಾಪಕರು ಮತ್ತು ಲ್ಯಾಬ್ ತಂತ್ರಜ್ಞರನ್ನು ಕೂಡ ಅಮಾನತು ಮಾಡಲಾಗಿದೆ. ಕೊಯಮತ್ತೂರಿನ ವಾಲ್ಪಾರೈನಲ್ಲಿರುವ ಸರ್ಕಾರಿ ಕಲಾ ಕಾಲೇಜಿನಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಸ್ಥಳೀಯರು ಮಾತ್ರವಲ್ಲದೆ ಹೊರಗಿನವರೂ ಇಲ್ಲಿಗೆ ಬಂದು ಸರಕಾರಿ ಹಾಸ್ಟೆಲ್ನಲ್ಲಿ ಉಳಿದು ಓದುತ್ತಿದ್ದಾರೆ. ಈ ಸಂದರ್ಭದಲ್ಲಿ ಕಳೆದ ಆಗಸ್ಟ್ 30ರಂದು ರಾಷ್ಟ್ರೀಯ ಮಹಿಳಾ ಆಯೋಗದ ಸಮಗ್ರ ಸೇವಾ ಕೇಂದ್ರದ ವತಿಯಿಂದ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ನಿಮ್ಮ ಕಾಲೇಜಿನಲ್ಲಿ ಏನಾದರೂ ಸಮಸ್ಯೆ ಇದೆಯೇ? ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದಾಗ ತಮಗೆ ಕಾಲೇಜಿನಲ್ಲಿ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು 7 ವಿದ್ಯಾರ್ಥಿಗಳು ತಿಳಿಸಿದರು. ಬಳಿಕ ಆಯೋಗದ ಸಂಯೋಜಕಿ ಕೃಷ್ಣವೇಣಿ ಪೊಲ್ಲಾಚಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ನಾಲ್ವರು ಕಾಲೇಜು ಪ್ರಾಧ್ಯಾಪಕರು ಹಾಗೂ ಹಂಗಾಮಿ ಪ್ರಾಧ್ಯಾಪಕರನ್ನು ಪೊಲೀಸರು ಬಂಧಿಸಿದ್ದಾರೆ.
ತಮ್ಮ ಕಾಲೇಜಿನ ಪ್ರೊಫೆಸರ್ಗಳಲ್ಲಿ ಕೆಲವರು ತಮಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಮತ್ತು ಅಶ್ಲೀಲ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಇದರಿಂದಾಗಿ ತಮ್ಮ ಅಧ್ಯಯನದ ಮೇಲೆ ಕೇಂದ್ರೀಕರಿಸಲು ಕಷ್ಟವಾಗುತ್ತಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ವಿದ್ಯಾರ್ಥಿನಿಯರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪ್ರೊಫೆಸರ್ ರಾಜಪಾಂಡಿ, ಹಂಗಾಮಿ ಪ್ರಾಧ್ಯಾಪಕರಾದ ಮುರಳಿರಾಜ್ ಮತ್ತು ಸತೀಶ್ಕುಮಾರ್, ಪ್ರಯೋಗಾಲಯ ಸಹಾಯಕ ಅನ್ಬರಸು ಎಂಬ ನಾಲ್ವರನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸರು ಇಲಾಖಾ ಕ್ರಮ ಕೈಗೊಂಡಿದ್ದು, ಮಹಿಳಾ ಆಯೋಗ ಈ ಬಗ್ಗೆ ಕೂಲಂಕಷ ತನಿಖೆ ನಡೆಸುತ್ತಿದೆ.
ಆರೋಪಿಗಳು ಕಾಲೇಜಿನ ವಿದ್ಯಾರ್ಥಿನಿಯರಿಗೆ ವಾಟ್ಸಪ್ ಮೂಲಕ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದರು ಎಂಬುದು ಆರೋಪಿಗಳ ಮೇಲಿರುವ ಪ್ರಮುಖ ಆರೋಪ. ತರಗತಿಯ ಸಮಯದ ನಂತರವೂ ಆರೋಪಿಗಳು ವಿದ್ಯಾರ್ಥಿನಿಯರನ್ನು ಲ್ಯಾಬ್ನಲ್ಲಿ ಇರುವಂತೆ ಹೇಳಿದ್ದಾರೆ. ನಂತರ ಅನುಚಿತವಾಗಿ ವರ್ತಿಸಿ ದೈಹಿಕ ಹಿಂಸೆ ನೀಡಿದ್ದರು. ತರಗತಿ ನಡೆಯುವಾಗ ಮತ್ತು ಲ್ಯಾಬ್ನಲ್ಲಿ ದೇಹವನ್ನು ಕೆಟ್ಟದಾಗಿ ಸ್ಪರ್ಶಿಸುತ್ತಿದ್ದರು ಎಂದು ವಿದ್ಯಾರ್ಥಿಗಳ ದೂರಿನಲ್ಲಿ ಆರೋಪಿಸಲಾಗಿದೆ.