ಇಂಡಿಯನ್ ಪ್ರೀಮಿಯರ್ ಲೀಗ್ ಹದಿನೇಳನೇ ಆವೃತ್ತಿಯಲ್ಲಿ ಅತ್ಯುತ್ತಮ ಲಯದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ರೌಂಡರ್ ಶಿವಂ ದುಬೆ, ಮುಂದಿನ ಕೆಲವು ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಿದರೆ ಟಿ20 ವಿಶ್ವಕಪ್ ಟೂರ್ನಿಯ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ ಎಂದು ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮಂಗಳವಾರ (ಮಾರ್ಚ್ 26) ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್, ಋತುರಾಜ್ ಗಾಯಕ್ವಾಡ್ (46 ರನ್), ರಚಿನ್ ರವೀಂದ್ರ (46 ರನ್) ಹಾಗೂ ಶಿವಂ ದುಬೆ (51 ರನ್) ಸ್ಫೋಟಕ ಆಟದ ನೆರವಿನಿಂದ 20 ಓವರ್ಗಳಿಗೆ 206 ರನ್ ಗಳಿಸಿತ್ತು. ಈ ಕಠಿಣ ಗುರಿ ಹಿಂಬಾಲಿಸಿದ್ದ ಶುಭಮನ್ ಗಿಲ್ ಪಡೆ, ಸಿಎಸ್ಕೆಯ ಸಂಘಟಿತ ಬೌಲಿಂಗ್ ಪ್ರದರ್ಶನದಿಂದ ಪಂದ್ಯದ ಮುಕ್ತಾಯಕ್ಕೆ 8 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿ 63 ರನ್ಗಳ ಸೋಲು ಕಂಡಿತು. ಶಿವಂ ದುಬೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಶಿವಂ ದುಬೆ ತಮ್ಮ ಸಾಮರ್ಥ್ಯವನ್ನು ಅರಿತಿದ್ದು, ಎಡಗೈ ಸ್ಪಿನ್ನರ್ಗಳ ವಿರುದ್ಧ ಪ್ರಾಬಲ್ಯ ಸಾಧಿಸುತ್ತಾರೆ. ಗುಜರಾತ್ ಟೈಟನ್ಸ್ ಸ್ಪಿನ್ನರ್ ಸಾಯಿ ಕಿಶೋರ್ ಬೌಲಿಂಗ್ನಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿದ್ದ ದುಬೆ, 22 ಎಸೆತಗಳಲ್ಲೇ ಎರಡು ಬೌಂಡರಿ ಹಾಗೂ ಐದು ಸಿಕ್ಸರ್ ಸಹಿತ ಅರ್ಧಶತಕ (50 ರನ್) ಪೂರೈಸಿದ್ದರು.
ತಂಡ ಖಾತೆ ತೆರೆಯದೆ ಎರಡು ವಿಕೆಟ್ ಕಳೆದುಕೊಂಡು ಅವರ ಮುಂದೆ ಎಡಗೈ ಬೌಲರ್ ಬೌಲ್ ಮಾಡುತ್ತಿದ್ದರೆ, ಆತ ಸ್ಫೋಟಕ ಸಿಕ್ಸ್ ಸಿಡಿಸುತ್ತಾರೆ. ಏಕೆಂದರೆ ಅವರು ಆ ರೀತಿಯ ಶೈಲಿಯಲ್ಲಿ ಬ್ಯಾಟ್ ಮಾಡುತ್ತಾರೆ. ಯಾವುದೇ ಕಾರಣಕ್ಕೂ ತನ್ನ ಆಟದ ಶೈಲಿಯನ್ನು ಬದಲಾಯಿಸುವುದಿಲ್ಲ