ಮಂಡ್ಯ :- ಸ್ವಾತಂತ್ರ್ಯ ಚಳುವಳಿಯ ಕುರುಹು ಆಗಿರುವ ಧ್ವಜ ಸತ್ಯಾಗ್ರಹ ಸೌಧವನ್ನು ಆಕರ್ಷಣೆಯ ಸ್ಥಳವನ್ನಾಗಿ ನಿರ್ಮಾಣ ಮಾಡಲು ಆದಷ್ಟು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಭರವಸೆ ನೀಡಿದರು.
ಮದ್ದೂರು ಪಟ್ಟಣದ ಶಿವಪುರದ ಧ್ವಜ ಸತ್ಯಾಗ್ರಹ ಸೌಧದ ಆವರಣದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಅಂದಿನ ಬ್ರಿಟಿಷ್ ಆಡಳಿತದ ವಿರೋಧದ ನಡುವೆಯೂ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಚಳುವಳಿಗೆ ಮತ್ತಷ್ಟು ಕಿಚ್ಚು ಹೊತ್ತಿಸಿದ ಸ್ಥಳವಿದು. ಆಗಾಗಿ ಈ ಜಾಗದಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಭವ್ಯ ಸೌಧವನ್ನು ನಿರ್ಮಾಣ ಮಾಡಿತ್ತು.
ಇಂತಹ ಸ್ವಾತಂತ್ರ್ಯ ಚಳುವಳಿಯ ಕುರುಹು ಆಗಿರುವ ಧ್ವಜ ಸತ್ಯಾಗ್ರಹ ಸೌಧವನ್ನು ಆಕರ್ಷಣೆಯ ಸ್ಥಳವನ್ನಾಗಿ ನಿರ್ಮಾಣ ಮಾಡಲು ಈಗಾಗಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಲಾಗಿದೆ ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದ್ದು, ಸ್ವಲ್ಪ ಮಟ್ಟಿಗೆ ಅನುದಾನವನ್ನು ಮೀಸಲಿಡಲಾಗಿದೆ ಎಂದರು.
ಇನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಹ ಸೌಧದ ಅಭಿವೃದ್ಧಿಗೆ ಅನುದಾನ ನೀಡಲು ಸಕಾರಾತ್ಮಕ ಸ್ಪಂದಿಸಿದ್ದು, ಮುಂದಿನ ದಿನಗಳಲ್ಲಿ ಈ ಸೌಧವನ್ನು ವಿಶೇಷವಾದ ಆಕರ್ಷಣಿಯ ಸ್ಥಳವನ್ನಾಗಿ ನಿರ್ಮಾಣ ಮಾಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ಇದೇ ವೇಳೆ ಸ್ವಾತಂತ್ರ್ಯ ಹೋರಾಟಗಾರ ಕೆ.ಟಿ.ಚಂದು, ತಹಶೀಲ್ದಾರ್ ಸೋಮಶೇಖರ್, ಕಸಾಪ ತಾಲೂಕು ಅಧ್ಯಕ್ಷ ಸುನೀಲ್ ಕುಮಾರ್, ಮುಖಂಡರಾದ ಸ್ವರೂಪ್ ಚಂದ್, ಅಪೂರ್ವ ಚಂದ್ರು, ಉಮಾಶಂಕರ್, ರಾಜೇಶ್, ಮಹದೇವಪ್ಪ, ಶಿವಪ್ಪ, ಪುರಸಭಾ ಸದಸ್ಯರಾದ ಸರ್ವಮಂಗಳ, ಮೋಹನ್, ಚನ್ನಂಕೇಗೌಡ ಸೇರಿದಂತೆ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ