ನವದೆಹಲಿ:– ಐಎನ್ಡಿಐಎಗೆ ಮತ್ತೊಂದು ಹಿನ್ನಡೆ ಆಗಿದ್ದು, ಎನ್ಡಿಎ ಮೈತ್ರಿಕೂಟಕ್ಕೆ ಆರ್ಎಲ್ಡಿ ಪಕ್ಷ ಸೇರ್ಪಡೆ ಆಗಲು ಸಜ್ಜಾಗಿದೆ.
ಪಕ್ಷದ ಅಧ್ಯಕ್ಷ ಜಯಂತ್ ಚೌಧರಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆಯೂ ನಡೆಸಿದ್ದಾರೆ.
ನಿನ್ನೆ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಜಯಂತ್ ಚೌಧರಿ ಅವರು ಸುದೀರ್ಘ ಮಾತುಕತೆ ನಡೆಸಿದ್ದು, ಎನ್ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾಗಲು ಒಪ್ಪಿಗೆ ಸೂಚಿಸಿದ್ದಾರೆ. ಬಳಿಕ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಆರ್ಎಲ್ಡಿ ಪಕ್ಷ ಎನ್ಡಿಎ ಸೇರ್ಪಡೆ ಬಗ್ಗೆ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡ ಜೆಪಿ ನಡ್ಡಾ, ಇಂದು ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಆರ್ಎಲ್ಡಿ ಪಕ್ಷದ ಅಧ್ಯಕ್ಷ ಜಯಂತ್ ಚೌಧರಿ ಅವರೊಂದಿಗೆ ಸಭೆ ನಡೆಯಿತು. ಎನ್ಡಿಎ ಕುಟುಂಬಕ್ಕೆ ಸೇರುವ ಜಯಂತ್ ನಿರ್ಧಾರವನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಪ್ರಯಾಣ ಮತ್ತು ಉತ್ತರ ಪ್ರದೇಶದ ಅಭಿವೃದ್ಧಿಯಲ್ಲಿ ನೀವು ಪ್ರಮುಖ ಕೊಡುಗೆ ನೀಡುತ್ತೀರಿ ಎಂದು ಹೇಳಿದರು. ಅಲ್ಲದೆ, ಈ ಬಾರಿ ಎನ್ಡಿಎ 400 ದಾಟುತ್ತದೆ ಎಂದಿದ್ದಾರೆ.
ರಾಷ್ಟ್ರೀಯ ಲೋಕದಳದ ಅಧ್ಯಕ್ಷರಾದ ಜಯಂತ್ ಅವರನ್ನು ನಾನು NDA ಕುಟುಂಬಕ್ಕೆ ಸ್ವಾಗತಿಸುತ್ತೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೀತಿಗಳಲ್ಲಿ ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ. ಅವರು ಎನ್ಡಿಎಗೆ ಸೇರ್ಪಡೆಯಿಂದ ರೈತರು, ಬಡವರು ಮತ್ತು ವಂಚಿತ ವರ್ಗಗಳ ಉನ್ನತಿಗಾಗಿ ತೊಟ್ಟಿರುವ ನಮ್ಮ ಸಂಕಲ್ಪವನ್ನು ಇನ್ನಷ್ಟು ಬಲ ಸಿಕ್ಕಂತಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ 400 ದಾಟಲಿದೆ ಎಂದು ಅಮಿತ್ ಶಾ ಅವರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.