2023ರ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ರಿಂಕು ಸಿಂಗ್, ಯುವ ವೇಗಿ ಯಶ್ ದಯಾಳ್ ಅವರ ಬೌಲಿಂಗ್ನಲ್ಲಿ ಸತತ 5 ಸಿಕ್ಸರ್ ಸಿಡಿಸಿ ಕೋಲ್ಕತ್ತಾ ನೈಟ್ ರೈಡರ್ಸ್ಗೆ ಅಸಾಧ್ಯವಾದ ಗೆಲುವು ತಂದುಕೊಟ್ಟಿದ್ದರು. ಅಲ್ಲದೆ ಆಡಿದ 14 ಪಂದ್ಯಗಳಿಂದ 150 ಸ್ಟ್ರೆಕ್ ರೇಟ್ ನಲ್ಲಿ 474 ರನ್ ಗಳಿಸಿದ್ದರು.
ಇದೇ ಪ್ರದರ್ಶನದ ಆಧಾರದ ಮೇಲೆ ರಿಂಕು ಸಿಂಗ್ ಅವರನ್ನು ಐರ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗಿತ್ತು. ಆಡಿದ ಮೊದಲ ಪಂದ್ಯದಲ್ಲೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ರಿಂಕು ಸಿಂಗ್, ಭಾರತ ತಂಡದ ಪರ ಇಲ್ಲಿಯವರೆಗೂ ಆಡಿರುವ 6 ಟಿ20-ಐ ಪಂದ್ಯಗಳಿಂದ 187ರ ಸ್ಟ್ರೆಕ್ ರೇಟ್ನಲ್ಲಿ 180 ರನ್ ಗಳಿಸಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲೂ ಫಿನಿಷರ್ ಪಾತ್ರ ವಹಿಸಿ 106 ರನ್ ಗಳಿಸಿದ್ದರು.
ರಿಂಕು ಸಿಂಗ್ ಟೀಮ್ ಇಂಡಿಯಾಗೆ ಸಿಕ್ಕಿರುವ ಅತ್ಯಮೂಲ್ಯ ಆಟಗಾರ ಎಂದು ಸುನೀಲ್ ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್ ಜೊತೆ ನಡೆಸಿದ ಸಂವಾದದಲ್ಲಿ ಶ್ಲಾಘಿಸಿದ್ದಾರೆ. ಐಪಿಎಲ್ ಟೂರ್ನಿಯ ವೇಳೆ ತಮ್ಮ ಕಠಿಣ ಪರಿಶ್ರಮದಿಂದ ರನ್ ಹೊಳೆ ಹರಿಸಿ ಗಮನ ಸೆಳೆದಿದ್ದು, ಅದೇ ಪ್ರದರ್ಶನವನ್ನು ಟೀಮ್ ಇಂಡಿಯಾದಲ್ಲೂ ಮುಂದುವರಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.
“ಪ್ರತಿಭೆ ಎಂಬುದು ಎಲ್ಲರಿಗೂ ಒಲಿದು ಬರುವುದಿಲ್ಲ. ನೀವು ಮೊದಲು ಆಟವನ್ನು ಪ್ರೀತಿಸಬೇಕು. ಅದಕ್ಕಾಗಿ ನೀವು ಒಂದು ಇಡೀ ದಿನ ಆಡಬೇಕು. ಆದರೆ ಕೆಲವು ಬಾರಿ ನಿಮ್ಮಲ್ಲಿ ಪ್ರತಿಭೆ ಇಲ್ಲ ಎಂದು ಅರಿತು ಪ್ರಯತ್ನವನ್ನು ಮೊಟಕುಗೊಳಿಸುತ್ತೀರಿ. ಆದರೆ ಅವರು (ರಿಂಕು ಸಿಂಗ್) ತನ್ನ ಪ್ರತಿಭೆಯ ಮೇಲೆ ನಂಬಿಕೆ ಇಟ್ಟಿದ್ದರು. ಅದಕ್ಕಾಗಿ ಕಳೆದ 2-3 ವರ್ಷಗಳಿಂದ ಕಠಿಣ ಶ್ರಮ ಪಟ್ಟಿದ್ದಾರೆ,” ಎಂದು ಖ್ಯಾತ ಕ್ರಿಕೆಟ್ ವಿವರಣೆಗಾರ ಗುಣಗಾನ ಮಾಡಿದ್ದಾರೆ.
“ಐಪಿಎಲ್ನಲ್ಲೂ ಕೂಡ ಅವರು ಸಾಕಷ್ಟು ಶ್ರಮಪಟ್ಟಿದ್ದಾರೆ. ಸಾಕಷ್ಟು ಫ್ರಾಂಚೈಸಿಗಳ ಪರ ಆಡಿ ಹೊರಬಿದ್ದಿದ್ದಾರೆ. ಆದರೂ ಕೊನೆಗೂ ಕೆಕೆಆರ್ ತಂಡದ ಫಿನಿಷರ್ ಆಗಿ ಗುರುತಿಸಿಕೊಂಡಿದ್ದಾರೆ. ತನಗೆ ಸಿಕ್ಕ ಅವಕಾಶವನ್ನು ಅವರು ಚಾಚಿಕೊಂಡ ರೀತಿ ಅದ್ಭುತವಾಗಿತ್ತು,” ಎಂದು ಟೀಮ್ ಇಂಡಿಯಾದ ಮಾಜಿ ನಾಯಕ ಹೇಳಿದ್ದಾರೆ.