ಮಂಡ್ಯ :- ಹೈಕಮಾಂಡ್ ಸೂಚನೆ ಮೇರೆಗೆ ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡಿಲ್ಲ. ಇದು ನನ್ನ ವೈಯಕ್ತಿಕ ನಿರ್ಧಾರವೇ ಹೊರತು ಇದರಲ್ಲಿ ಯಾರದ್ದೇ ಹಸ್ತಕ್ಷೇಪ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಸ್ಪಷ್ಟಪಡಿಸಿದರು.
![Demo](https://ainlivenews.com/wp-content/uploads/2023/12/spoorthi-1.jpg)
ಮದ್ದೂರು ತಾಲೂಕಿನ ಆತಗೂರು ಹೋಬಳಿಯ ಸಿದ್ದೇಗೌಡನದೊಡ್ಡಿ, ಹರಕನಹಳ್ಳಿ ಹಾಗೂ ಚಾಕನಕೆರೆ ಗ್ರಾಮಗಳಲ್ಲಿ ಗುರುವಾರ ಬರಪರಿಸ್ಥಿತಿ ಅಧ್ಯಯನ ಹಾಗೂ ರೈತ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಸೋಮವಾರವಷ್ಟೆ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡಿದ ಬಳಿಕ ಬರ ಅಧ್ಯಯನ ಪ್ರವಾಸದಲ್ಲಿ ಭಾಗಿಯಾಗಿದ್ದ ಅವರು, ಮನುಷ್ಯನಿಗೆ ಕೆಲವು ಇತಿಮಿತಿ ಇರಬೇಕು. ಮೂವತ್ತು ವರ್ಷದಿಂದ ಪಕ್ಷ ನನಗೆ ಎಲ್ಲ ಸ್ಥಾನಮಾನ ಕೊಟ್ಟಿದೆ. ಪಕ್ಷದಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದೆ, ಕೇಂದ್ರ ಸರ್ಕಾರದಲ್ಲಿ ಏಳು ವರ್ಷ ಸಚಿವರಾಗಿ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಕೆಲಸ ಮಾಡಿದ್ದೇನೆ. ರಾಜ್ಯದ ಮುಖ್ಯಮಂತ್ರಿಯೂ ಆಗಿದ್ದೆ. ರಾಜ್ಯಾಧ್ಯಕ್ಷನಾಗಿ ಪಕ್ಷವನ್ನು ಮುನ್ನೆಡೆಸಿದ್ದೇನೆ ರಾಜಕೀಯದಲ್ಲಿ ಇಷ್ಟು ಮಾತ್ರ ಸಾಕಲ್ಲವೇ ಎಂದು ಪ್ರಶ್ನಿಸಿದರು.
ರಾಜಕಾರಣಕ್ಕೆ ಪ್ರವೇಶಿಸಿದ 25 ವರ್ಷದ ನಂತರ ಚುನಾವಣಾ ರಾಜಕೀಯದಿಂದ ದೂರ ಆಗಬೇಕು ಎಂದುಕೊಂಡಿದ್ದೇ. ಪಕ್ಷ ಎಲ್ಲವೂ ಕೊಟ್ಟಿದೆ, ಪಕ್ಷದ ಒತ್ತಡದ ಹಿನ್ನೆಲೆಯಲ್ಲಿ ಕಳೆದ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದೆ. 6 ತಿಂಗಳ ಮುನ್ನ ನಿವೃತ್ತಿ ಪ್ರಕಟಿಸಿದರೆ ಪಕ್ಷಕ್ಕೆ ಹೊಸಬರನ್ನ ಹುಡುಕಲು ಅನುಕೂಲ ಆಗಲಿದೆ ಎಂದರು.
ನನ್ನ ರಾಜಕೀಯ ಜೀವನದಲ್ಲಿ ಯಾರ ಹಿಂದೆಯೂ ಚೀಲ ಹಿಡಿದು ಹೋಗಿಲ್ಲ, ಬೆಣ್ಣೆ ಹಿಡಿದು ಹೋಗಿಲ್ಲ, ಗುಂಪುಗಾರಿಕೆಯು ಮಾಡಿಲ್ಲ, ನಾನು ಅಪ್ಪಟ ಬಿಜೆಪಿ ಕಾರ್ಯಕರ್ತ ಎಂದು ಹೇಳಿದರು.
ಬಿಜೆಪಿ ಪಕ್ಷದ ಬರ ಅಧ್ಯಯನ ಬಗ್ಗೆ ಸ್ವ ಪಕ್ಷಿಯ ಶಾಸಕ ಎಸ್.ಟಿ ಸೋಮಶೇಖರ್ ಅಕ್ಷೇಪ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಒಂದು ಕೈಯಲ್ಲಿ ಐದು ಬೆರಳು ಕೂಡ ಸಮವಾಗಿ ಇರುವುದಿಲ್ಲ, ಅದೇ ರೀತಿ ರಾಜಕೀಯ ಪಕ್ಷದಲ್ಲಿ ಕೆಲವರು ಇರುತ್ತಾರೆ, ಅದರ ಬಗ್ಗೆ ನಾನು ವಾದ ಮಾಡುವುದಿಲ್ಲ. ರಾಜಕೀಯ ಪಕ್ಷದಲ್ಲಿ ಎಲ್ಲರೂ ಒಂದೇ ರೀತಿ ಇರಲ್ಲ, ಬೇರೆ ಮನಸ್ಸು ಇರುತ್ತದೆ
ಈ ಬಗ್ಗೆ ಉತ್ತರ ಕೊಡುವುದು ಸರಿಯಲ್ಲ. ಅವರು ಹೇಳಿರುವುದು ಕಾಂಗ್ರೆಸ್ ರೈತರಿಗೆ ವಿಷ ಕೊಡುತ್ತಾರೆ ಎಂದಿದ್ದಾರೆ ಅದು ಸರಿಯಾಗಿದೆ ಎಂದರು.
ಆತಗೂರು ಹೋಬಳಿಯಲ್ಲಿ ಚಿರತೆಗಳ ಹಾವಳಿ ಮಿತಿ ಮೀರಿದೆ ಯಾರು ಕ್ರಮ ಕೈಗೊಳ್ಳುತ್ತಿಲ್ಲ… ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ… ವಾಣಿಜ್ಯ ಬಳಕೆಯ ವಿದ್ಯುತ್ ಗೆ ಹೆಚ್ಚಿನ ಬಿಲ್ ಬರುತ್ತಿದೆ… ವಿದ್ಯುತ್ ಟಿಸಿಗೂ ದುಡ್ಡು ಕೊಡಬೇಕಿದೆ… ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಅವರ ನೇತೃತ್ವದಲ್ಲಿ ಗುರುವಾರ ಬಿಜೆಪಿಯ ಬರ ಅಧ್ಯಯನ ತಂಡ ವಿವಿಧ ಗ್ರಾಮಗಳಿಗೆ ಆಗಮಿಸಿದಾಗ ರೈತರು ಹಲವಾರು ಸಮಸ್ಯೆಗಳ ಬಗ್ಗೆ ಬರ ಅಧ್ಯಯನ ತಂಡದ ಮುಖಂಡರ ಸಮ್ಮುಖದಲ್ಲಿ ಅನಾವರಣಗೊಳಿಸಿದರು.
ಮೊದಲು ಸಿದ್ದೇಗೌಡದೊಡ್ಡಿ ಗ್ರಾಮದ ಬಿಳಿಯಪ್ಪ ಎಂಬುವರ ಮನೆಗೆ ಭೇಟಿ ನೀಡಿದಾಗ.
ಬಿಳಿಯಪ್ಪ ಅವರ ಮನೆ ಬಳಿ ಮೇಕೆ ಮತ್ತು ನಾಯಿಯನ್ನ ಚಿರತೆ ಎತ್ತುಕೊಂಡು ಹೋಗಿತ್ತು. ಈ ಬಗ್ಗೆ ರೈತ ಬಿಳಿಯಪ್ಪ ಗಮನ ಸೆಳೆದರು. ಆಗ ಸ್ಥಳದಲ್ಲಿದ್ದ ರೈತರು ಈ ಭಾಗದಲ್ಲಿ ಹಾಡು ಹಗಲೇ ಚಿರತೆಗಳು ಜಮೀನುಗಳ ಬಳಿ ಕಾಣಿಸುತ್ತಿದೆ. ರಸ್ತೆ ಪಕ್ಕದಲ್ಲಿ ದೊಡ್ಡ ದೊಡ್ಡ ಪೋದೆಗಳಿದ್ದು ಅದರಲ್ಲಿ ಚರಿತೆಗಳು ಅವಿತುಕೊಳ್ಳುತ್ತವೆ. ಈಗಾಗಲೇ 4 ಚಿರತೆಗಳನ್ನು ಅರಣ್ಯಾಧಿಕಾರಿಗಳು ಸೆರೆ ಹಿಡಿದಿದ್ದು, ಇನ್ನು ಹಲವು ಚಿರತೆಗಳಿವೆ. ಅವುಗಳನ್ನು ಸೆರೆ ಹಿಡಿಯದ ಕಾರಣ ಆತಂಕದಲ್ಲಿ ನಾವು ಜೀವನ ನಡೆಸಬೇಕಾಗಿದೆ ಎಂದು ಅಳಲು ತೋಡಿಕೊಂಡರು.
ಸ್ಥಳದಲ್ಲೇ ಡಿಎಫ್ಒ ಶ್ರೀಧರ್ ಗೆ ಮೊಬೈಲ್ ನಲ್ಲಿ ಕರೆ ಮಾಡಿ ಮಾಹಿತಿ ಪಡೆದುಕೊಂಡ ಮಾಜಿ ಸಿಎಂ ಸದಾನಂದಗೌಡ, ಚಿರತೆ ಹಾವಳಿಯಿಂದ ರೈತರಿಗೆ, ಗ್ರಾಮಸ್ಥರಿಗೆ ಮಕ್ಕಳಿಗೆ ತೊಂದರೆ ಆಗಿದೆ. ಈ ಸಂಬಂಧ ಅಗತ್ಯ ಕ್ರಮ ಕೈಗೊಂಡು ಒಂದು ವಾರದ ಒಳಗೆ ಮಾಹಿತಿ ಕೊಡುವಂತೆ ಡಿಎಫ್ಓ ಗೆ ಸೂಚನೆ ನೀಡಿದರು.
ಹಲವಾರು ವರ್ಷಗಳಿಂದ ನಮ್ಮ ಪೂರ್ವಜರು ಇಲ್ಲಿ ವ್ಯವಸಾಯ ಮಾಡುತ್ತಿದ್ದವು. ಆದರೆ, ರಿಸರ್ವೆ ಮಾಡಿದ ಸಂದರ್ಭದಲ್ಲಿ ಪಹಣಿ ಬದಲಾವಣೆ ಮಾಡಲಾಗಿದೆ.
ಆದರೆ, ಈಗ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿರುವ ಕಾರಣ ಪಹಣಿ ನೀಡುತ್ತಿಲ್ಲ ಹೀಗಾಗಿ ರೆವಿನ್ಯೂ ಹಾಗೂ ಫಾರೆಸ್ಟ್ ಇಲಾಖೆಗಳ ತಪ್ಪಿನಿಂದ ನಮಗೆ ಭೂಮಿ ದೊರೆಯುತ್ತಿಲ್ಲ ಎಂದು ರೈತ ಪುಟ್ಟಸ್ವಾಮಿ ಸದಾನಂದಗೌಡ ಅವರಿಗೆ ದೂರು ನೀಡಿದರು. ತಕ್ಷಣವೇ ಮಂಡ್ಯ ಡಿಸಿ ಡಾ.ಕುಮಾರ್ ಗೆ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದುಕೊಂಡ ಮಾಜಿ ಸಿಎಂ ಸದಾನಂದಗೌಡ ಚರ್ಚಿಸಿ ಈ ಸಮಸ್ಯೆಯನ್ನು ಕಾನೂನು ವ್ಯಾಪ್ತಿಯಲ್ಲಿ ಬಗೆಹರಿಸುವಂತೆ ತಿಳಿಸಿದರು.
ಈ ಭಾಗದಲ್ಲಿ ಮಳೆ ಹೇಗೆ ಬಂದಿದೆ, ವಿದ್ಯುತ್ ಪೂರೈಕೆ ಹೇಗಿದೆ, ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದಾರಾ, ನಿಮ್ಮ ಸಮಸ್ಯೆಗಳನ್ನು ಕೇಳಿದ್ದಾರಾ ತ್ರೀಫೇಸ್ ಕರೆಂಟ್ ಕೊಡುತ್ತಿದ್ದಾರಾ, ಸಹಕಾರ ಬ್ಯಾಂಕ್ ನಿಂದ ಏನಾದರೂ ಸಾಲ ಮನ್ನಾ ಆಗಿದೀಯಾ, ಎಂಬ ಹಲವು ಸಮಸ್ಯೆಗಳ ಬಗ್ಗೆ ರೈತರಿಂದ ಮಾಜಿ ಸಿಎಂ ಸದಾನಂದಗೌಡ ಮಾಹಿತಿ ಪಡೆದುಕೊಂಡರು.
ಚಿರತೆ ದಾಳಿಯಿಂದ ಸಾಕು ಪ್ರಾಣಿಗಳನ್ನು ಕಳೆದುಕೊಂಡಿದ್ದ ರೈತರಿಗೆ ಶ್ರೀನಿಧಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸೇವಾ ಟ್ರಸ್ಟ್ ವತಿಯಿಂದ ಪರಿಹಾರ ಧನ ನೀಡಲಾಯಿತು.
ಇದೇ ವೇಳೆ ಹರಕನಹಳ್ಳಿ ಗ್ರಾಮದ ಯುವ ರೈತ ಎಚ್.ಆರ್.ರಂಜಿತ್ 5 ತಿಂಗಳ ಕುರಿಮರಿಯನ್ನು ಸದಾನಂದಗೌಡರಿಗೆ ಉಡುಗೊರೆ ನೀಡಿದರು. ಇದರಿಂದ ಸಂತೋಷಗೊಂಡ ಸದಾನಂದಗೌಡರು, ನೀವೇ ಚೆನ್ನಾಗಿ ಸಾಕಿ ಬೆಳೆಸಿ, ಇದೇ ಕುರಿ ಮಾಂಸದೂಟಕ್ಕಾಗಿ ತಮ್ಮ ಗ್ರಾಮಕ್ಕೆ ಬರುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ್, ಮಾಜಿ ಶಾಸಕ ಪ್ರೀತಂಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಬಿಜೆಪಿ ಮುಖಂಡ ಹಾಗೂ ಮನ್ಮುಲ್ ನಿರ್ದೇಶಕರಾದ ಎಸ್.ಪಿ. ಸ್ವಾಮಿ, ರೂಪ, ಜಿಲ್ಲಾ ಸಮಿತಿ ಮುಖಂಡ ಎಂ. ಸತೀಶ್, ತಾಲೂಕು ಬಿಜೆಪಿ ಅಧ್ಯಕ್ಷ ಶಿವದಾಸ್ ಸತೀಶ್, ಮುಖಂಡರಾದ ಎಂ.ಸಿ. ಸಿದ್ದು, ಜಿ.ಸಿ.ಮಹೇಂದ್ರ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
![](https://ainlivenews.com/wp-content/uploads/2024/01/Ad-Banner-copy-scaled.jpg)