ಬೆಂಗಳೂರು:- ರೇಣುಕಾ ಸ್ವಾಮಿ ಕೊಲೆ ಮುಚ್ಚಿಹಾಕಲು ದರ್ಶನ್ ನೀಡಿದ್ದ ಹಣದ ಜೊತೆಗೆ ಇನ್ನೂ ದೊಡ್ಡ ಮೊತ್ತದ ಹಣವನ್ನು ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ವಶಪಡಿಸಿಕೊಂಡಿದ್ದಾರೆ. ದೊಡ್ಡ ಮೊತ್ತದ ಹಣವನ್ನು ಪ್ರಕರಣದಲ್ಲಿ ದೊರೆತಿರುವ ಕಾರಣ ಆದಾಯ ತೆರಿಗೆ ಇಲಾಖೆಗೆ ಪೊಲೀಸರು ಮಾಹಿತಿ ನೀಡಿದ್ದು, ಇದೀಗ ಐಟಿ ಇಲಾಖೆಯೂ ಸಹ ತನಿಖೆ ನಡೆಸುವ ಸಾಧ್ಯತೆ ದಟ್ಟವಾಗಿದೆ.
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನಿಂದಿಸಿದ ದರ್ಶನ್ ಮಹಿಳಾ ಅಭಿಮಾನಿ.. ದೂರು ದಾಖಲು!
ದರ್ಶನ್ಗೆ ಈಗ ತೆರಿಗೆ ಇಲಾಖೆಯ ಸಮಸ್ಯೆಯೂ ಸುತ್ತಿಕೊಳ್ಳಲಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಈಗಾಗಲೇ 77 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ, ಹಾಗಾಗಿ ಈಗ ದರ್ಶನ್ ರ ಹಣಕಾಸು ವ್ಯವಹಾರದ ತನಿಖೆಯನ್ನು ಐಟಿ ಇಲಾಖೆ ನಡೆಸಲಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣ ಮುಚ್ಚಿ ಹಾಕಲು ದರ್ಶನ್ ನೀಡಿದ್ದಾರೆ ಎನ್ನಲಾದ 30 ಲಕ್ಷ ರೂಪಾಯಿ ಹಣವನ್ನು ಪೊಲೀಸರು ವಿವಿಧ ಆರೋಪಿಗಳಿಂದ ಈಗಾಗಲೇ ವಶಪಡಿಸಿಕೊಂಡಿದ್ದಾರೆ. ದರ್ಶನ್ರ ಆರ್ಆರ್ ನಗರದ ಮನೆ ಮಹಜರು ಮಾಡುವ ಸಂದರ್ಭದಲ್ಲಿ 37.40 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಳ್ಳಲಾಗಿತ್ತು. ಅದಾದ ಬಳಿಕ ವಿಜಯಲಕ್ಷ್ಮಿ ದರ್ಶನ್ ಅವರ ವಿಚಾರಣೆ ವೇಳೆ ಅವರು ಮೂರು ಲಕ್ಷ ರೂಪಾಯಿ ಹಣವನ್ನು ಪೊಲೀಸರ ಸುಪರ್ಧಿಗೆ ನೀಡಿದ್ದಾರೆ. ಅಲ್ಲಿಗೆ ಒಟ್ಟು 70.40 ಲಕ್ಷ ರೂಪಾಯಿ ಹಣವನ್ನು ಪೊಲೀಸರು ಈವರೆಗೆ ವಶಪಡಿಸಿಕೊಂಡಿದ್ದಾರೆ.
ದರ್ಶನ್, ತಮ್ಮ ಸಹಾಯಕನಿಂದ ವಿಜಯಲಕ್ಷ್ಮಿ ಅವರಿಗೆ ಮೂರು ಲಕ್ಷ ರೂಪಾಯಿ ಹಣ ಕೊಟ್ಟು ಕಳಿಸಿದ್ದರಂತೆ. ಹಾಗಾಗಿ ಆ ಹಣವನ್ನು ವಿಜಯಲಕ್ಷ್ಮಿ ಅವರು ಪೊಲೀಸರ ವಶಕ್ಕೆ ನೀಡಿದ್ದಾರೆ. ನಿಯಮದ ಪ್ರಕಾರ 10 ಲಕ್ಷಕ್ಕಿಂತಲೂ ಹೆಚ್ಚಿಗೆ ಹಣ ಪತ್ತೆಯಾದರೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕು. ಇದೀಗ ಈ ಪ್ರಕರಣದಲ್ಲಿ 70.40 ಲಕ್ಷ ರೂಪಾಯಿ ಹಣ ಪತ್ತೆ ಆಗಿರುವ ಕಾರಣ ಪೊಲೀಸರು ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆದು ಮಾಹಿತಿ ಹಂಚಿಕೊಂಡಿದ್ದು, ಐಟಿ ಇಲಾಖೆ ಸಹ ಪ್ರಕರಣದ ತನಿಖೆ ನಡೆಸಲಿದೆ.