ದೆಹಲಿ: ರಾಷ್ಟ್ರಪತಿ ಭವನದಲ್ಲಿರುವ (Rashtrapati Bhavan) ದರ್ಬಾರ್ ಹಾಲ್ (Durbar Hall) ಮತ್ತು ಅಶೋಕ್ ಹಾಲ್ (Ashok Hall) ಸಭಾಂಗಣಗಳನ್ನು ಕ್ರಮವಾಗಿ ‘ಗಣತಂತ್ರ ಮಂಟಪ’ ಮತ್ತು ‘ಅಶೋಕ ಮಂಟಪ’ ಎಂದು ಮರುನಾಮಕರಣ ಮಾಡಲಾಗಿದೆ.
ಭಾರತೀಯ ಸಾಂಸ್ಕೃತಿಕ ಮೌಲ್ಯಗಳು ಮತ್ತು ನೈತಿಕತೆಯನ್ನು ಪ್ರತಿಬಿಂಬಿಸುವ ಪ್ರಯತ್ನವಾಗಿ ದರ್ಬಾರ್ ಮತ್ತು ಹಾಲ್ ಪದವನ್ನು ಬದಲಾಯಿಸಲಾಗಿದೆ. ಭಾರತದ ರಾಜರ ಆಸ್ಥಾನಗಳಿಗೆ ಮತ್ತು ಬ್ರಿಟಿಷರ ನ್ಯಾಯಾಲಯಗಳಿಗೆ ದರ್ಬಾರ್ ಎಂದು ಕರೆಯಲಾಗುತ್ತಿತ್ತು. ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾದ ಬಳಿಕ ದರ್ಬಾರ್ ಅರ್ಥ ಕಳೆದುಕೊಂಡಿದೆ. ಹಿಂದಿನಿಂದಲೂ ಭಾರತೀಯ ಸಮಾಜದಲ್ಲಿ ಗಣತಂತ್ರ ಪರಿಕಲ್ಪನೆ ಇದೆ. ಈ ಕಾರಣಕ್ಕಾಗಿ ದರ್ಬಾರ್ ಹಾಲ್ಗೆ ಗಣತಂತ್ರ ಮಂಟಪ ಎಂದು ಹೆಸರನ್ನು ಇಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಶೋಕ ಹಾಲ್ ಸಾಂಸ್ಕೃತಿಕ ಸಭಾಂಗಣವಾಗಿದೆ. ಚಕ್ರವರ್ತಿ ಅಶೋಕನನ್ನು ಸೂಚಿಸುವುದರಿಂದ ಏಕತೆ ಮತ್ತು ಶಾಂತಿಯುತ ಸಹಬಾಳ್ವೆಯ ಸಂಕೇತವಾಗಿದೆ. ಅಶೋಕ ಪದ ಎಲ್ಲಾ ದುಃಖಗಳಿಂದ ಮುಕ್ತ’ ಅಥವಾ ಯಾವುದೇ ದುಃಖದಿಂದ ದೂರವಿರುವ ವ್ಯಕ್ತಿಯನ್ನು ಸೂಚಿಸುತ್ತದೆ. ಆಂಗ್ಲೀಕರಣದ ಕುರುಹುಗಳನ್ನು ತೆಗೆದುಹಾಕಲು ಹಾಲ್ ಪದವನ್ನು ತೆಗೆದು ಹಾಕಲಾಗಿದೆ ಎಂದು ಹೇಳಿದೆ.