ರಾಯಚೂರು: ಸ್ವಾಧಾರ ಕೇಂದ್ರ ಕಟ್ಟಡದ ಮೇಲಿಂದ ಜಿಗಿದು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರಿನ ದೇವರ ಕಾಲೋನಿಯಲ್ಲಿ ನಡೆದಿದೆ. ಪ್ರೇಮ ವಿಚಾರಕ್ಕೆ ಠಾಣೆ ಮೆಟ್ಟಿಲು ಹತ್ತಿದ್ದ ಯುವತಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಚಿಕಿತ್ಸೆ ಫಲಕಾರಿಯಾಗದೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
ನಗರದ ಜಲಾಲನಗರದ ಅನುರಾಧ (19) ಮೃತ ಯುವತಿ. ರಾತ್ರಿ 8:30ರ ಸಮಯದಲ್ಲಿ ಸ್ವಾಧಾರ ಕೇಂದ್ರದಿಂದ ಜಿಗಿದು ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಬೆಳಗಿನ ಜಾವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಯುವತಿ ಕಟ್ಟಡದಿಂದ ಜಿಗಿದ ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Heart Attack Symptoms: ಎಚ್ಚರ! ಈ ಲಕ್ಷಣಗಳು ಹಾರ್ಟ್ ಅಟ್ಯಾಕ್’ನ ಸೂಚನೆ ಇರಬಹುದು..!
ವಿನಯ ರೆಡ್ಡಿ ಎಂಬುವವನನ್ನ ಪ್ರೀತಿಸಿದ್ದ ಅನುರಾಧ ಯುವಕನೊಡನೆ ರಕ್ಷಣೆ ಕೋರಿ ಹಾಗೂ ಮದುವೆಗಾಗಿ ಜೂನ್ 20 ರಂದು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಗೆ ಹೋಗಿದ್ದರು. ಆದರೆ ಮದುವೆಗೆ ಯುವತಿ ಮನೆಯವರು ಒಪ್ಪಿಗೆ ನೀಡಿರದ ಹಿನ್ನೆಲೆ ಯುವತಿಯನ್ನು ಪೊಲೀಸರು ಸ್ವಾಧಾರ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದರು.
ಯುವಕ ಸಹ ಮದುವೆಗೆ ನಿರಾಕರಿಸಿದ ಹಿನ್ನೆಲೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಯುವತಿ ಕುಟುಂಬದವರು ಆರೋಪಿಸಿದ್ದಾರೆ. ನಗರದ ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯುವಕನ ವಿರುದ್ಧ ಕುಟುಂಬಸ್ಥರು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.