ಬೆಂಗಳೂರು: ಇಷ್ಟು ದಿನ ಬೆಂಗಳೂರಿನಲ್ಲಿ ನೆತ್ತಿ ಸುಡುತ್ತಿದ್ದ ಬಿಸಿಲಿಗೆ ಜನ ಬಳಲಿ ಬೆಂಡಾಗಿದ್ರು. ಆದ್ರೀಗ ಅದೇ ಬಿಸಿಲಿಗೆ ಜನ ಮೊರೆ ಹೋಗಿದ್ದಾರೆ. ನಿರಂತರ ಮಳೆ ಇರುವ ಕಾರಣ ಅಯ್ಯೋ ನಾಳೆ ಒಂದು ದಿನ ಮಳೆ ಬೇಡ ಬಿಸಿಲೇ ಬಾರಪ್ಪ ಅಂತ ಮೇಘರಾಜನಿಗೆ ಹರಕೆ ಹೊತ್ತಿದ್ದಾರೆ. ಹೌದು.. ಬೆಂಗಳೂರಲ್ಲಿ ಮೂರು ನಾಲ್ಕು ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.
ಹೀಗಾಗಿ ಬೆಂಗಳೂರಿಗೆ ಆರೆಂಜ್ ಅಲರ್ಟ್ ಘೋಷಿಸಿದೆ ರಾಜ್ಯ ಹಾವಾಮಾನ ಇಲಾಖೆ. ಮೇ 18 ರಿಂದ 20ರ ವರೆಗೆ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಎಚ್ಚರಿಕೆ ಕೊಡಲಾಗಿದೆ. ಜೊತೆಗೆ ಮೈಸೂರು, ಮಂಡ್ಯ, ಕೋಲಾರ, ಬೆಂ ಗ್ರಾಮಾಂತರದಲ್ಲಿ ಭಾರೀ ಮಳೆಯಾಗುವ ಸಂಭವವಿದೆ. ಎಂದು ಮಳೆ ತಜ್ಞರು ಹೇಳಿದ್ದಾರೆ.
ನಿನ್ನೆಯೂ ರಾಜ್ಯದಲ್ಲಿ ಉತ್ತಮ ಮಳೆಯಾಗಿತ್ತು. ಹಾಸನ, ದಾವಣೆಗೆರೆ, ಮೂಡಿಗೆರೆಯಲ್ಲಿ ಹೆಚ್ಚಿನ ಮಳೆಯ ಪ್ರಮಾಣ ದಾಖಲಾಗಿತ್ತು. ಇದರ ಮುಂದುವರೆದ ಭಾಗವಾಗಿ ದಕ್ಷಿಣ ಭಾಗದಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಜೊತೆಗೆ ಹವಾಮಾನ ತಜ್ಞರ ಪ್ರಕಾರ ಮೇ 18 ರಿಂದ 20ರ ಮೂರು ದಿನಗಳ ಅವಧಿಯಲ್ಲಿ 115 ರಿಂದ 204 ಮಿ.ಮೀ ನಷ್ಟು ದಾಖಲೆಯ ಮಳೆಯಾಗುವ ಸಾಧ್ಯತೆ ಇದೆ.
ರಾಜ್ಯ ಹವಾಮಾನ ಇಲಾಖೆಯ ವರದಿಯ ಪ್ರಕಾರ ಮೇ 18ರಂದು ಅಂದ್ರೆ ನಾಳೆ ಮಳೆಯಬ್ಬರ ಬೆಂಗಳೂ ರಲ್ಲಿ ಜೋರಾಗಿ ಇರಲಿದೆಯಂತೆ. ಹೀಗಾದರೆ ಆರ್ ಸಿಬಿ ಪ್ಲೇ ಆಫ್ ಕನಸಿಗೆ ತಣ್ಣೀರು ಎರಚಿದಂತಾಗಲಿದೆ. ಮಳೆಯಿಂದಾಗಿ ಪಂದ್ಯ ರದ್ದಾದರೆ ಸಿಎಸ್ ಕೆ ಪ್ಲೇ ಆಫ್ ಗೆ ಏರಲಿದೆ. ಇದು ಆರ್ ಸಿಬಿ ಅಭಿಮಾನಿಗಳನ್ನು ಚಿಂತೆಗೆ ಈಡುಮಾಡಿದೆ.
ಒಟ್ಟಾರೆ ಪೂರ್ವ ಮುಂಗಾರು ಮಳೆ ಬೆಂಗಳೂರಲ್ಲಿ ದಿನೆ ದಿನೆ ಚುರುಕಾಕ್ತಿದೆ, ಶೀಘ್ರವೇ ಮುಂಗಾರು ಪ್ರವೇಶ ಕಾಣುವ ಸಾಧ್ಯತೆ ಇದೆ. ಇದರ ನಡುವೆ ಮೇ 18ರಿಂದ 20ರ ವರೆಗೆ ಬೆಂಗಳೂರಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಇದೇ ಸಮಯದಲ್ಲಿ RCB CSK ನಾಕೌಟ್ ಪಂದ್ಯವೂ ಇರಲಿದ್ದು, ಮೇಘರಾಜನ ಒಲವು ತೋರಬೇಕಿದೆ. ಆರ್ ಸಿಬಿ ಈ ಬಾರಿಯ ಪ್ಲೇ ಆಫ್ ಕನಸನ್ನು ನುಚ್ಚು ನೂರು ಮಾಡಂದಂತೆ, ಕೋಟಿ ಕೋಟಿ ಅಭಿಮಾನಿಗಳ ಮೊಗದಲ್ಲಿ ಮಂದಹಾಸ ಮೂಡಿಸಬೇಕಿದೆ.