ಬೆಂಗಳೂರು:- ನಗರದ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಘಟನೆಯಲ್ಲಿ 10 ಜನರಿಗೆ ಗಾಯವಾಗಿದ್ದು, ಮಧ್ಯಾಹ್ನ 12 :50 ರಿಂದ 1 ಘಂಟೆ ಸುಮಾರಿನಲ್ಲಿ ಘಟನೆ ಸಂಭವಿಸಿದೆ. ಯಾರೋ ಅನುಮಾನಾಸ್ಪದ ವ್ಯಕ್ತಿ ಬ್ಯಾಗ್ ತಂದಿಟ್ಟು ಹೋಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಬಾಂಬ್ ಸ್ಕ್ವಾಡ್, ಹಿರಿಯ ಅಧಿಕಾರಿಗಳು, ಎನ್ಐಎ ಆಫೀಸರ್ಸ್ ಕೂಡ ಸ್ಥಳದಲ್ಲಿ ಮಾಹಿತಿ ಸಂಗ್ರಹಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಕೂಡ ಮಾಹಿತಿ ಪಡೆದುಕೊಂಡಿದ್ದಾರೆ.
ಘಟನಾ ಸ್ಥಳದಲ್ಲಿ ವೈಟ್ಫೀಲ್ಡ್, ಹೆಚ್ಎಎಲ್, ಇಂದಿರಾನಗರ ಮೂರು ಠಾಣೆಯ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ, ಎಫ್ಎಸ್ಎಲ್, ರಾಷ್ಟ್ರೀಯ ತನಿಖಾ ತಂಡಗಳು ಇಂಚಿಂಚು ಜಾಲಾಡಿವೆ. ಸದ್ಯದಲ್ಲೇ ದುರುಳರನ್ನ ಪತ್ತೆ ಹಚ್ಚುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದುಷ್ಕರ್ಮಿಗಳು ಟೈಮರ್ ಬಳಸಿ ಐಇಡಿ ಸ್ಫೋಟಿಸಿದ್ದಾರೆ. ಸ್ಫೋಟವಾದ ಸ್ಥಳದಲ್ಲಿ ಪತ್ತೆಯಾದ ಟೈಮರ್ ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.