ಅಯೋಧ್ಯೆ:- ಅಯೋಧ್ಯಾ ನಗರ ವರ್ಣರಂಜಿತ ಹೂವುಗಳು, ದೀಪಗಳಿಂದ ಅಲಂಕರಿಸಲ್ಪಟ್ಟಿದೆ. ಎಲ್ಲೆಡೆ ರಾಮನ ಧ್ವಜಗಳು ಹಾರಾಡುತ್ತಿವೆ. ರಾಮಸ್ತೋತ್ರ, ಗಾಯನ, ನೃತ್ಯ, ಸಂಗೀತಗಳೊಂದಿಗೆ ಇಡೀ ನಗರ ‘ರಾಮಮಯ’ವಾಗಿ ಮಾರ್ಪಟ್ಟಿದೆ. ಮಂದಿರದ ಪ್ರವೇಶದ್ವಾರ, ಅತಿಥಿಗಳನ್ನು ಸ್ವಾಗತಿಸುವ ಅಯೋಧ್ಯಾಧಾಮ್ ರಸ್ತೆ, ಗೋಡೆಗಳೆಲ್ಲವೂ ಹೂವುಗಳ ಸುಂದರ ವಿನ್ಯಾಸದಿಂದ ಭಕ್ತರನ್ನು ಆಕರ್ಷಿಸುತ್ತಿವೆ.
ಮದುವಣಗಿತ್ತಿಯಂತೆ ಕಂಗೊಳಿಸುತ್ತಿರುವ ರಾಮನಗರಿ, ಶ್ರೀರಾಮನಾಗಮನದ ಆನಂದದಲ್ಲಿ ತೇಲಾಡುತ್ತಿದ್ದರೆ, ಯಜ್ಞಶಾಲೆಗಳಲ್ಲಿ ವೇದಮಂತ್ರದ ಘೊಷಣೆ ಮುಗಿಲುಮಟ್ಟಿದೆ. ‘ರಾಮ್ ಆಯೇಂಗೆ ರಾಮ್ ಆಯೇಂಗೆ’ ಎಂಬೆಲ್ಲ ರಾಮನನ್ನು ಕೇಂದ್ರೀಕರಿಸಿದ ಹಾಡುಗಳಂತೂ ಬೀದಿಬೀದಿಗಳಲ್ಲಿ ಅನುರಣಿಸುತ್ತಿವೆ. ಕಿಕ್ಕಿರಿದು ತುಂಬಿರುವ ಅಯೋಧ್ಯೆಯಲ್ಲಿ ಕಾಲಿಡಲೂ ಜಾಗವಿಲ್ಲದ ಪರಿಸ್ಥಿತಿ ನಿರ್ವಣವಾಗಿದ್ದರೂ, ಕೊರೆಯುವ ಚಳಿಯ ಮಧ್ಯೆಯೂ ಕಳೆದ ಮೂರ್ನಾಲ್ಕು ದಿನಗಳಿಂದ ಭಕ್ತರು ಭಾರೀ ಉತ್ಸಾಹದಿಂದ ಆಗಮಿಸುತ್ತಿದ್ದಾರೆ. ‘ಶುಭ್ ಘಡಿ ಆಯಿ, ತೈಯಾರ್ ಹೈ ಅಯೋಧ್ಯಾಧಾಮ್ ಶ್ರೀರಾಮ್ ಬಾಸೋ ಮೇರೆ ಮನ್ ಮೇ, ರಾಮ್ ಆಯೇಂಗೆ, ಅವಧ್ ಮೇ ರಾಮ್ ಆಗಯಾ, ರಾಮರಾಜ್ಯ’ ಎಂದು ಬರೆದಿರುವ ಪೋಸ್ಟರ್, ಹೋರ್ಡಿಂಗ್ಗಳಿಂದ ಆವೃತವಾಗಿರುವ ಅಯೋಧ್ಯಾ ರಾಮೋತ್ಸವ ಸಂಭ್ರಮೋಲ್ಲಾಸದಲ್ಲಿದೆ.
ಅಯೋಧ್ಯೆಯ ವಿವಿಧ ಪುರಾತನ ಮಂದಿರಗಳು, ಬೀದಿಗಳು, ರಾಮಪಥ, ಧರ್ಮಪಥ, ಸರಯೂ ನದಿದಂಡೆ, ನಯಾ ಘಾಟ್ ಮುಂತಾದ ಪ್ರಮುಖ ಸ್ಥಳಗಳ ರಸ್ತೆ, ಗಲ್ಲಿಗಳಲ್ಲಿ ರಾಮಾಯಣದ ವಿವಿಧ ಶ್ಲೋಕಗಳ ಪೋಸ್ಟರ್ಗಳೇ ರಾರಾಜಿಸುತ್ತಿವೆ. ಎಲ್ಲೆಡೆ ಉಚಿತ ಅನ್ನದಾನ ನಡೆಯುತ್ತಿದೆ. ಬೇರೆ ಬೇರೆ ರಾಜ್ಯಗಳಿಂದ ಬಂದ ರಾಮಭಕ್ತರು, ದಾನಿಗಳು ಭೋಜನಸೇವೆ ಮೂಲಕ ರಾಮೋತ್ಸವ ಸಂಭ್ರಮಕ್ಕೆ ಮೆರುಗು ತುಂಬಿದ್ದಾರೆ. ಸರಯೂ ನದಿ ದಂಡೆಯಲ್ಲೂ ರಾಮಭಜನೆ, ಗಾಯನ ಪ್ರತಿಧ್ವನಿಸುತ್ತಿವೆ. ರಾತ್ರಿ-ಹಗಲೆನ್ನದೆ, ಬೀದಿಬೀದಿಗಳಲ್ಲಿ ರಾಮಲೀಲಾ, ಭಗವತ್ ಕಥಾ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಯುತ್ತಲೇ ಇವೆ.
ಲೇಸರ್ ಲೈಟ್ಗಳಿಂದ ಪ್ರಕಾಶಿತಗೊಂಡಿರುವ ಸರಯೂ ನದಿಯ ಸುಂದರ ದಡಗಳು ಜನಾಕರ್ಷಣೆಯ ಕೇಂದ್ರಬಿಂದುಗಳಾಗಿಬಿಟ್ಟಿವೆ. ಸೂರ್ಯಾಸ್ತದ ನಂತರದ ಸರಯೂ ಆರತಿಯಲ್ಲಿ ಭಕ್ತರು ಸಡಗರದಿಂದ ಪಾಲ್ಗೊಳ್ಳುತ್ತಿದ್ದಾರೆ. ಅಯೋಧ್ಯೆಯ ವಿವಿಧೆಡೆ ಸೂರ್ಯಕಂಬಗಳನ್ನು ಅಳವಡಿಸಲಾಗಿದೆ. ರಾಮಮಂದಿರ ಪ್ರದೇಶದಲ್ಲಿ ಜಟಾಯುವಿನ ಬೃಹತ್ ಹಿತ್ತಾಳೆಯ ವಿಗ್ರಹ ಸ್ಥಾಪಿಸಲಾಗಿದೆ. ಮರ್ಯಾದಾ ಪುರುಷೋತ್ತಮ ಶ್ರೀರಾಮ ವಿಮಾನ ನಿಲ್ದಾಣವೂ ದೀಪಗಳಿಂದ ಬೆಳಗುತ್ತಿದೆ. ಅಯೋಧ್ಯೆ ರೈಲು ನಿಲ್ದಾಣ ಕೂಡ ಗಮನ ಸೆಳೆಯುತ್ತಿದೆ. ಶೀತಗಾಳಿ ಇರುವುದರಿಂದ ನಗರಾಡಳಿತ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಅಯೋಧ್ಯೆ ಏಮ್್ಸ ಮತ್ತು ಸುತ್ತಮುತ್ತಲಿನ ಜಿಲ್ಲಾ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳಲ್ಲಿ ಹಾಸಿಗೆಗಳನ್ನು ಕಾಯ್ದಿರಿಸಿದೆ