ಅಯೋಧ್ಯೆ:- ಇಂದು ನಡೆಯಲಿರುವ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಅಯೋಧ್ಯೆಯು ಸಡಗರದಿಂದ ಸಜ್ಜಾಗಿದೆ. ಸಂಭ್ರಮ ಮನೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ, ಸಾಧುಸಂತರು, ಪ್ರಮುಖ ಕೈಗಾರಿಕೋದ್ಯಮಿಗಳು, ಬಾಲಿವುಡ್ ತಾರೆಯರು ಸೇರಿದಂತೆ ಸರಿಸುಮಾರು ಎಂಟು ಸಾವಿರ ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಇಡೀ ಅಯೋಧ್ಯೆಯು ರಾಮ ಭಕ್ತಿಯಲ್ಲಿ ಮುಳುಗಿರುವಂತೆ ಕಾಣುತ್ತಿದೆ. ದೇಶದ ವಿವಿಧೆಡೆಗಳಿಂದ ಬಂದಿರುವ ಸಾಧುಗಳು ಹಾಗೂ ಭಕ್ತರು ಭಜನೆ ಹಾಡುತ್ತ, ತುಳಸೀದಾಸರು ಬರೆದ ರಾಮಚರಿತಮಾನಸದ ಸಾಲುಗಳನ್ನು ಹೇಳುತ್ತ ನರ್ತಿಸುತ್ತಿರುವ ದೃಶ್ಯ ಇಲ್ಲಿನ ಬೀದಿಗಳಲ್ಲಿ ಕಾಣಿಸುತ್ತಿದೆ.
‘ಮಂಗಲ ಭವನ ಅಮಂಗಲ ಹಾರಿ, ದ್ರವಹು ಸುದಸರಥ ಅಜಿರ ವಿಹಾರಿ’ (ನನಗೆ ಯಾವ ಕೆಡುಕೂ ಆಗದಂತೆ ಶ್ರೀರಾಮ ಮಾತ್ರ ನೋಡಿಕೊಳ್ಳಬಲ್ಲ… ಅವನ ಆಶೀರ್ವಾದ ಕೋರಿ ಪ್ರಾರ್ಥಿಸುತ್ತೇನೆ) ಎಂದು ನೆರೆಯ ಅಂಬೇಡ್ಕರ್ ನಗರ ಜಿಲ್ಲೆಯ ಹರೇಂದ್ರ ಮಿಶ್ರಾ ಹೇಳುತ್ತಾರೆ. ಇಲ್ಲಿ ರಾಮ ಭಕ್ತರು ಶ್ರೀರಾಮನ ಸ್ಮರಣೆಯಲ್ಲಿ ಅದೆಷ್ಟು ಮಗ್ನರಾಗಿದ್ದಾರೆಂದರೆ, ತಮ್ಮನ್ನು ಉದ್ದೇಶಿಸಿ ಕೇಳಿದ ಪ್ರಶ್ನೆಗೆ ಈ ದ್ವಿಪದಿಯನ್ನು ಉಲ್ಲೇಖಿಸಿ ಉತ್ತರಿಸಿದ್ದಾರೆ.
ಅಯೋಧ್ಯೆಯ ಹಲವು ಕಡೆಗಳಲ್ಲಿ ಸ್ವಾಗತ ಕಮಾನುಗಳನ್ನು ಅಳವಡಿಸಲಾಗಿದೆ. ಇವು ‘ಜೈ ಸಿಯಾ ರಾಮ್’ ಬರಹದೊಂದಿಗೆ ಜನರನ್ನು ಸ್ವಾಗತಿಸುತ್ತಿವೆ. ‘ಜೈಶ್ರೀರಾಮ್’ ಘೋಷಣೆಯು ಎಲ್ಲೆಡೆ ಕೇಳಿಸುತ್ತಿದೆ. ಅಲ್ಲಲ್ಲಿ ಬೇರೆ ಬೇರೆ ಬಣ್ಣಗಳನ್ನು ಬಳಸಿ ರಂಗೋಲಿ ಬರೆಯಲಾಗಿದೆ. ಇಲ್ಲಿನ ಮನೆಗಳು, ದೇವಸ್ಥಾನಗಳು ಹಾಗೂ ಮಠಗಳ ಮೇಲೆ ಬಣ್ಣಬಣ್ಣದ ದೀಪಗಳನ್ನು ಅಳವಡಿಸಲಾಗಿದ್ದು, ಇಲ್ಲಿ ಈಗ ದೀಪಾವಳಿ ಆಚರಣೆ ನಡೆದಿದೆಯೇನೋ ಅನಿಸುವಂತಿದೆ.
ನಂಬಿಕೆಗಳ ಪ್ರಕಾರ, ವನವಾಸ ಮುಗಿಸಿದ ಶ್ರೀರಾಮ ಅಯೋಧ್ಯೆಗೆ ಮರಳುವ ಸಂದರ್ಭದಲ್ಲಿ ಇಲ್ಲಿನ ಜನ ಹಣತೆಗಳನ್ನು ಹಚ್ಚಿದ್ದರಂತೆ. ಆ ದಿನವನ್ನು ದೀಪಾವಳಿಯಾಗಿ ಆಚರಿಸಲಾಗುತ್ತದೆ. ‘ವನವಾಸವನ್ನು ಪೂರ್ಣಗೊಳಿಸಿದ ಶ್ರೀರಾಮನು ಸೀತಾ ಮಾತೆ ಹಾಗೂ ಸಹೋದರ ಲಕ್ಷ್ಮಣನೊಂದಿಗೆ ಅಯೋಧ್ಯೆಗೆ ಮರಳಿಬರುತ್ತಿದ್ದಾನೆ ಅನಿಸುವಂತಿದೆ… ಇಲ್ಲಿನ ಜನ ಆಗ ಶ್ರೀರಾಮನನ್ನು ಇದೇ ಬಗೆಯಲ್ಲಿ ಸ್ವಾಗತಿಸಿರಬೇಕು… ಇದನ್ನು ನಾವು ರಾಮಾಯಣದಲ್ಲಿ ಓದಿ ತಿಳಿದಿದ್ದೆವು… ಈಗ ನಾವು ಅದನ್ನು ಅನುಭವಿಸಿ ನೋಡಬಹುದು’ ಎಂದು ಸೂರಜ್ ದಾಸ್ ಎನ್ನುವ ಸಾಧು ಹೇಳಿದರು.
ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ‘ಮುಖ್ಯ ಯಜಮಾನ’ (ಪುರೋಹಿತರು ಇವರ ಪರವಾಗಿ ವಿಧಿ ವಿಧಾನಗಳನ್ನು ನಡೆಸುತ್ತಾರೆ) ಆಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇವಸ್ಥಾನ ಸಂಕೀರ್ಣವನ್ನು ಪೂರ್ವ ದಿಕ್ಕಿನ ಬಾಗಿಲಿನಿಂದ ಪ್ರವೇಶಿಸಲಿದ್ದಾರೆ ಎಂದು ಸಮಾರಂಭದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿರುವ ಸ್ವಾಮೀಜಿಯೊಬ್ಬರು ತಿಳಿಸಿದರು. ಮಂದಿರ ನಿರ್ಮಾಣದ ಉಸ್ತುವಾರಿ ಹೊತ್ತಿರುವ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಸದಸ್ಯರನ್ನು ಮೋದಿ ಅವರು ಭೇಟಿ ಮಾಡಲಿದ್ದಾರೆ. ಪ್ರಧಾನಿಯವರು ಹತ್ತು ಬಗೆಯ ದಾನ ಕಾರ್ಯ ನಡೆಸಲಿದ್ದಾರೆ. ಅದಾದ ಬಳಿಕ ಅವರು ಗರ್ಭ ಗೃಹ ಪ್ರವೇಶಿಸಲಿದ್ದಾರೆ ಎಂದು ಸ್ವಾಮೀಜಿ ತಿಳಿಸಿದರು.ಹತ್ತು ಬಗೆಯ ದಾನ
ಶ್ರೀರಾಮನು ಅಯೋಧ್ಯೆಗೆ ಮರಳಿದ ಸಂದರ್ಭದಲ್ಲಿ ಅಲ್ಲಿನ ಜನ ಹೇಗೆ ಸ್ವಾಗತಿಸಿದ್ದರು ಎಂಬುದನ್ನು ರಾಮಚರಿತಮಾನಸದಲ್ಲಿ ಹೇಳಿರುವಂತೆ ‘ಚಿನ್ನದ ಕಳಶಗಳಿಗೆ ಅಲಂಕಾರ ಮಾಡಿ ಜನರು ಅವುಗಳನ್ನು ತಮ್ಮ ಮನೆಗಳ ಬಾಗಿಲ ಬಳಿ ಇರಿಸಿದ್ದರು. ಮನೆಗಳ ಗೋಡೆಯ ಮೇಲೆ ಬಣ್ಣ ಬಣ್ಣ ಧ್ವಜ ಹಾಗೂ ಆಲಂಕಾರಿಕ ಚಿತ್ರಗಳನ್ನು ಅಳವಡಿಸಿದ್ದರು’ ಎಂದು ಅವರು ವಿವರಿಸಿದರು.
ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನಡೆಯಲಿರುವ ರಾಮಜನ್ಮಭೂಮಿ ಸಂಕೀರ್ಣದಲ್ಲಿ ಭಾನುವಾರ ಅಂತಿಮ ಹಂತದ ಕೆಲವು ಕೆಲಸಗಳು ನಡೆದಿದ್ದವು. ಪ್ರಾಣ ಪ್ರತಿಷ್ಠಾಪನೆಗೂ ಮೊದಲಿನ ಧಾರ್ಮಿಕ ವಿಧಿ ವಿಧಾನಗಳು ಭಾನುವಾರ ಕೊನೆಗೊಂಡವು. ಬಾಲರಾಮನ ಸಿಂಹಾಸನವನ್ನು 114 ಕಳಶಗಳಲ್ಲಿ ಇದ್ದ ಪವಿತ್ರ ನೀರಿನಿಂದ ಶುದ್ಧೀಕರಿಸಲಾಯಿತು. ಗಂಗೆ, ಸರಯೂ ಸೇರಿದಂತೆ ದೇಶದ ವಿವಿಧ ಪವಿತ್ರ ನದಿಗಳಿಂದ ಈ ನೀರನ್ನು ತರಲಾಗಿತ್ತು.
ನಿತ್ಯಪೂಜೆ, ಹವನ, ಪರಿಕ್ರಮ, ಔಷಧೀಯ ಮಹತ್ವದ ಸಸ್ಯಗಳನ್ನು ಇರಿಸಿದ್ದ ನೀರಿನಿಂದ ವಿಗ್ರಹವನ್ನು ಶುಚಿಗೊಳಿಸುವ ಕೆಲಸ ಭಾನುವಾರ ನಡೆದಿದೆ ಎಂದು ಅರ್ಚಕರು ತಿಳಿಸಿದರು.
ಶೈವ, ವೈಷ್ಣವ, ಗಾಣಪತ್ಯ, ಸಿಖ್, ಬೌದ್ಧ, ಜೈನ, ರಾಮನಂದಿ, ರಾಮಾನುಜ, ನಿಂಬಾರ್ಕ, ಗರೀಬದಾಸಿ, ಕಬೀರಪಂಥಿ, ಶಂಕರದೇವ ಹಾಗೂ ಇತರ ಪಂಥಗಳ ಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ 14 ದಂಪತಿ ‘ಯಜಮಾನ’ರಾಗಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕದ ಲಿಂಗರಾಜ ಬಸವರಾಜ ಅವರು ಯಜಮಾನರಾಗಿ ಪತ್ನಿಯೊಂದಿಗೆ ಭಾಗಿಯಾ ಗಲಿದ್ದಾರೆ.14 ಯಜಮಾನರು-ಹಿಮಂತ ಬಿಸ್ವ ಶರ್ಮ, ಅಸ್ಸಾಂ ಮುಖ್ಯಮಂತ್ರಿಕೋಮುಸೌಹಾರ್ದ ಹಾಗೂ ಭ್ರಾತೃತ್ವ ಕಾಪಾಡಲು ಎಲ್ಲರೂ ತಮ್ಮದೇ ಆದ ಬಗೆಯಲ್ಲಿ ಪ್ರಾರ್ಥನೆ ಸಲ್ಲಿಸಬೇಕು. ಎಲ್ಲ ಮತಧರ್ಮಗಳ ಜನರೂ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗಿಯಾಗಬೇಕು.
ಇಂದಿನ ಕಾರ್ಯಕ್ರಮಗಳು
ಪ್ರಾಣ ಪ್ರತಿಷ್ಠಾಪನೆಯ ಶುಭ ಮುಹೂರ್ತ ಇರುವುದು 84 ಸೆಕೆಂಡುಗಳಷ್ಟು ಮಾತ್ರ. ಅದು 12 ಗಂಟೆ 29 ನಿಮಿಷ 8 ಸೆಕೆಂಡುಗಳಿಂದ 12 ಗಂಟೆ 30 ನಿಮಿಷ 32 ಸೆಕೆಂಡುಗಳವರೆಗೆ ಇರಲಿದೆ
ಪ್ರಾಣ ಪ್ರತಿಷ್ಠಾಪನೆಗೆ ಸಂಬಂಧಿಸಿದ ಕಾರ್ಯಕ್ರಮವು 12.20ರಿಂದ 12.45ರವರೆಗೆ ನಡೆಯಲಿದೆ.
ಮಹಾವಿಷ್ಣುವಿನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಶುರುವಾಗಲಿದೆ
ಪುರೋಹಿತರು ಮಂತ್ರಗಳ ಮೂಲಕ ಶ್ರೀರಾಮನನ್ನು ಆವಾಹನೆ ಮಾಡುತ್ತಾರೆ
ಗರ್ಭಗೃಹದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಸಂಬಂಧಿಸಿದ ವಿಧಿವಿಧಾನಗಳು ನಡೆಯುತ್ತವೆ
ಧಾರ್ಮಿಕ ವಿಧಿವಿಧಾನಗಳನ್ನು 121 ಮಂದಿ ವೈದಿಕ ವಿದ್ವಾಂಸರು, ಆಚಾರ್ಯ ಗಣೇಶ್ವರ ದ್ರಾವಿಡ್ ಮತ್ತು ಆಚಾರ್ಯ ಲಕ್ಷ್ಮೀಕಾಂತ ದ್ವಿವೇದಿ ಮಾರ್ಗದರ್ಶನದಲ್ಲಿ ನಡೆಸಲಿದ್ದಾರೆ
ಪ್ರಾಣ ಪ್ರತಿಷ್ಠಾಪನೆಯ ನಂತರದಲ್ಲಿ, ಅಯೋಧ್ಯೆಯಲ್ಲಿ ಸೋಮವಾರ ಸಂಜೆ ದೀಪೋತ್ಸವ ನಡೆಯಲಿದೆ. ಒಟ್ಟು ಹತ್ತು ಲಕ್ಷ ಹಣತೆಗಳನ್ನು ಬೆಳಗಿಸಲಾಗುತ್ತದೆ