ಅಮೆರಿಕದ ಉಪಗ್ರಹದ ದತ್ತಾಂಶಗಳನ್ನು ಬಳಸಿಕೊಂಡು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ವಿಜ್ಞಾನಿಗಳು ರಾಮಸೇತುವಿನ ಅತ್ಯಂತ ವಿವರವಾದ ನಕ್ಷೆಯನ್ನು ಸಿದ್ಧಪಡಿಸಿದ್ದಾರೆ. ಈ ಮೂಲಕ ಭಾರತದ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾದ ಸಮುದ್ರದಲ್ಲಿ ನೀರಿನಲ್ಲಿ ಮುಳುಗಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಪುರಾತನ ‘ರಾಮ ಸೇತು’ವಿನ ಕುರಿತಾದ ಮತ್ತಷ್ಟು ರಹಸ್ಯಗಳನ್ನು ಬೆಳಕಿಗೆ ತರುವಲ್ಲಿ ಇಸ್ರೋ ಯಶಸ್ವಿಯಾಗಿದೆ.
ಭಾರತ ಮತ್ತು ಶ್ರೀಲಂಕಾ ನಡುವೆ ಇರುವ ಈ ಸೇತುವೆಯ ಮೂಲದ ಕುರಿತು ದೀರ್ಘಕಾಲದಿಂದ ಇರುವ ವಿವಾದಗಳನ್ನು ಬಗೆಹರಿಸಲು ಈ ನಕ್ಷೆಯಿಂದ ಸಾಧ್ಯವಾಗಲಿದೆ ಎಂದು ಭಾವಿಸಲಾಗಿದೆ. 29 ಕಿ.ಮೀ. ಉದ್ದದ ಸೇತುವೆಯ ಸಮುದ್ರದಡಿಯ ನಕ್ಷೆಯನ್ನು ಇಷ್ಟೊಂದು ನಿಖರವಾಗಿ ಸಿದ್ಧಪಡಿಸಿದಿರುವುದು ಇದೇ ಮೊದಲು.
‘ಸೈಂಟಿಫಿಕ್ ರಿಪೋರ್ಟ್ಸ್’ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಇಸ್ರೋ ವಿಜ್ಞಾನಿಗಳು ಅಮೆರಿಕದ ‘ಐಸಿಇಸ್ಯಾಟ್-2’ ಉಪಗ್ರಹದ ಸುಧಾರಿತ ಲೇಸರ್ ತಂತ್ರಜ್ಞಾನವನ್ನು ಬಳಸಿಕೊಂಡು ಮುಳುಗಿದ ಸೇತುವೆಯ ಹೆಚ್ಚಿನ ರೆಸಲ್ಯೂಶನ್ (10 ಮೀ. ರೆಸಲ್ಯೂಶನ್) ನಕ್ಷೆಯನ್ನು ರಚಿಸಿದ್ದಾರೆ. ಅಕ್ಟೋಬರ್ 2018ರಿಂದ ಅಕ್ಟೋಬರ್ 2023ರವರೆಗೆ ಅಧ್ಯಯನ ಮಾಡಲಾಗಿದೆ.
ನಾಸಾದ ಉಪಗ್ರಹವು ಲೇಸರ್ ಆಲ್ಟಿಮೀಟರ್ ಉಪಕರಣ ಹೊಂದಿದ್ದು, ಇದು ಸಮುದ್ರದ ಆಳವಿಲ್ಲದ ಪ್ರದೇಶದ ಯಾವುದೇ ರಚನೆಯ ಎತ್ತರವನ್ನು ಅಳೆಯಲು ಸಾಧ್ಯವಾಗುತ್ತದೆ.
ರಾಮ ಹೆಂಡತಿ ಸೀತೆಯನ್ನು ರಾವಣ ಅಪಹರಿಸಿ ಲಂಕೆಯಲ್ಲಿ ಇಟ್ಟಿದ್ದನು. ಲಂಕೆಯಿಂದ ಸೀತೆಯನ್ನು ಕರೆದುಕೊಂಡು ಬರಲು ಸಮುದ್ರದ ಮಧ್ಯೆ ಸೇತುವೆ ಕಟ್ಟಿ, ಅದರ ಮೂಲಕವೇ ಶ್ರೀರಾಮ ಹಾಗೂ ಸೇನೆ ಲಂಕೆಗೆ ಹೋಗಿತ್ತು. ವಾಮನ ಪಡೆಯಿಂದ ವಿಶೇಷ ಕಲ್ಲುಗಳನ್ನು ಬಳಸಿ ಈ ಸೇತುವೆ ನಿರ್ಮಾಣವಾಗಿತ್ತು ಎನ್ನುವ ಪ್ರತೀತಿ ಇದೆ.
ಯುಪಿಎ ಸರ್ಕಾರದ ಸಂದರ್ಭದಲ್ಲಿ ರಾಮಸೇತು ಅಸ್ಥಿತ್ವದ ಬಗ್ಗೆ ಸಾಕಷ್ಟು ವಾದ ವಿವಾದಗಳು ನಡೆದಿದ್ದವು. ಯುಪಿಎ ಸರ್ಕಾರ ರಾಮ ಸೇತು ಅನ್ನುವುದಿಲ್ಲ. ಅದು ರಾಮ ಕಟ್ಟಿದ ಸೇತುವೆ ಅನ್ನುವುದಕ್ಕೆ ಪುರಾವೆ ಇಲ್ಲ ಎಂದು ಹೇಳಿತ್ತು. ಇದನ್ನು ಬಿಜೆಪಿ ಚುನಾವಣಾ ಅಸ್ತ್ರವನ್ನಾಗಿಸಿಕೊಂಡಿತ್ತು. ಆದರೆ ಇದೀಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ರಾಮಸೇತುವೆಯ ವಿವರವಾದ ನಕ್ಷೆಯನ್ನು ತಯಾರಿಸಿದ್ದಾರೆ. ಇದು ಪರೋಕ್ಷವಾಗಿ ಹಿಂದಿನ ಸರ್ಕಾರಕ್ಕೆ ತಿರುಗೇಟು ಕೊಟ್ಟಂತೆ ಆಗಿದೆ.
ಗಿರಿಬಾಬು ದಂಡಬಾತುಲ ನೇತೃತ್ವದ ಸಂಶೋಧನಾ ತಂಡವು ನೀರೊಳಗಿನ ವಿವರವಾದ ನಕ್ಷೆಯು ಧನುಷ್ಕೋಡಿಯಿಂದ ತಲೈಮನ್ನಾರ್ವರೆಗಿನ ಸೇತುವೆಯ ಸಂಪರ್ಕವನ್ನು ಸಾಬೀತುಪಡಿಸಿದೆ. ಈ ಪೈಕಿ ಶೇ. 99.98ರಷ್ಟು ಭಾಗ ಆಳವಿಲ್ಲದ ನೀರಿನಲ್ಲಿ ಮುಳುಗಿದೆ. ಜೊತೆಗೆ ಮನ್ನಾರ್ ಕೊಲ್ಲಿ ಮತ್ತು ಪಾಕ್ ಜಲಸಂಧಿ ನಡುವೆ 11 ಕಿರಿದಾದ ಕಾಲುವೆಗಳನ್ನು ಕಂಡುಹಿಡಿದಿದೆ. ಈ ಕಾಲುವೆಗಳು ಸಮುದ್ರದ ಅಲೆಗಳಿಂದ ರಾಮಸೇತುವನ್ನು ಸಂರಕ್ಷಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ಕ್ರಿ.ಶ. 9ನೇ ಶತಮಾನದಲ್ಲಿ ಪರ್ಷಿಯನ್ ನಾವಿಕರು ಈ ಸೇತುವೆಯನ್ನು ಸೇತು ಬಂಧೈ ಅಥವಾ ಸಮುದ್ರದ ಮೇಲಿನ ಸೇತುವೆ ಎಂದು ಉಲ್ಲೇಖಿಸಿದ್ದಾರೆ. ರಾಮೇಶ್ವರಂ ದೇವಾಲಯದ ದಾಖಲೆಗಳು, ಸೇತುವೆಯು ಕ್ರಿ. ಶ. 1480 ರವರೆಗೂ ಸಮುದ್ರ ಮಟ್ಟಕ್ಕಿಂತ ಮೇಲಿತ್ತು. ಆದರೆ ಅದು ಪ್ರಬಲವಾದ ಚಂಡಮಾರುತದಿಂದ ಧ್ವಂಸವಾಗಿತ್ತು ಎಂದು ಸೂಚಿಸುತ್ತವೆ
ಈಗಾಗಲೇ ಭಾರತ ಶ್ರೀಲಂಕಾ ನಡುವಣ ಈ ಅಂತಾರಾಷ್ಟ್ರೀಯ ಸಮುದ್ರ ಸೇತುವೆ ಸುಮಾರು 23 ಕಿಲೋ ಮೀಟರ್ ದೂರ ಇರಲಿದೆ. ರಸ್ತೆ ಮಾರ್ಗ ಮಾತ್ರವಲ್ಲ, ರೈಲು ಮಾರ್ಗವನ್ನೂ ನಿರ್ಮಾಣ ಮಾಡೋದಕ್ಕೆ ಯೋಜನೆ ಮಾಡಲಾಗಿದೆ. ಭಾರತದ ಧನುಷ್ಕೋಡಿಯಿಂದ ಸೀದಾ ಶ್ರೀಲಂಕಾದ ತಲೈ ಮನ್ನಾರ್ವರೆಗೆ ಈ ಸೇತುವೆ ಇರಲಿದೆ ಎನ್ನಲಾಗಿದೆ.