ಡಿಸೆಂಬರ್ 19ಕ್ಕೆ ಇದೇ ಮೊದಲ ಬಾರಿಗೆ ದುಬೈನಲ್ಲಿ ಐಪಿಎಲ್ IPL ಹರಾಜು ನಡೆಯಲಿದ್ದು, ನ್ಯೂಜಿಲೆಂಡ್ ತಂಡದ ಸೆನ್ಸೇಷನಲ್ ಬ್ಯಾಟ್ಸ್ಮನ್ ಹಾಗೂ ಕನ್ನಡಿಗ ರಚಿನ್ ರವೀಂದ್ರ ಇದೀಗ ಟಾಕ್ ಆಫ್ ದಿ ಟೌನ್ ಆಗಿದ್ದಾರೆ.
ಪ್ರಸಕ್ತ ವಿಶ್ವಕಪ್ನಲ್ಲಿ ಅತ್ಯಧಿಕ ರನ್ ಗಳಿಸಿದ ಪಟ್ಟಿಯಲ್ಲಿ ರಚಿನ್ ಮೊದಲ ಸ್ಥಾನದಲ್ಲಿದ್ದು, ಮುಂಬರುವ ಐಪಿಎಲ್ ಟೂರ್ನಿಯ ತಮ್ಮ ಆದ್ಯತೆಯ ತಂಡದ ಬಗ್ಗೆ ಸುಳಿವು ನೀಡಿದ್ದು, ಕ್ರಿಕೆಟ್ ಲೋಕದಲ್ಲಿ ಸಂಚಲನ ಸೃಷ್ಟಿ ಮಾಡಿದೆ.
ವಿಶ್ವಕಪ್ನಲ್ಲಿ ತಮ್ಮ ಅಮೋಘ ಪ್ರದರ್ಶನದ ಮೂಲಕ ರಚಿನ್ ಎಲ್ಲರ ಮನಸ್ಸನ್ನು ಕದ್ದಿದ್ದಾರೆ. ಕೇವಲ 9 ಪಂದ್ಯಗಳಲ್ಲಿ 3 ಶತಕದೊಂದಿಗೆ 565 ರನ್ ವೈಯಕ್ತಿಕ ರನ್ ಕಲೆಹಾಕುವ ಮೂಲಕ ಅಗ್ರ ಕ್ರಮಾಂಕದ ಬ್ಯಾಟರ್ ಆಗಿ ತಮ್ಮ ಪರಾಕ್ರಮವನ್ನು ಪ್ರದರ್ಶಿಸಿದ್ದಾರೆ. ನಿನ್ನೆ (ನ.09) ಲಂಕಾ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಭರ್ಜರಿ ಗೆಲುವು ದಾಖಲಿಸಿ, ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ರಚಿನ್ ಅವರನ್ನು ಆಟವನ್ನು ಮರೆಯುವಂತಿಲ್ಲ. ಕೇವಲ 34 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ ನೆರವಿನೊಂದಿಗೆ 42 ರನ್ ಬಾರಿಸುವ ಮೂಲಕ ಮುಂಬರುವ ಐಪಿಎಲ್ ಸೀಸನ್ಗೆ ತಾನೊರ್ವ ಉತ್ತಮ ಆಯ್ಕೆ ಎಂಬುದನ್ನು ಸಾಬೀತು ಮಾಡಿದ್ದಾರೆ. ಅಲ್ಲದೆ, ಬಹುತೇಕರ ಕಣ್ಣು ರಚಿನ್ ಮೇಲೂ ಬಿದ್ದಿದೆ.
ನಿನ್ನೆ ಪಂದ್ಯದ ಬಳಿಕ ಮಾತನಾಡಿದ ರಚಿನ್, ಚಿನ್ನಸ್ವಾಮಿ ಕ್ರೀಡಾಂಗಣ ಮತ್ತು ಅಲ್ಲಿ ನೆರೆದಿದ್ದ ಜನತೆಯ ಭಾರೀ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು. ನನ್ನ ಹೃದಯದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ವಿಶೇಷ ಸ್ಥಾನವಿದೆ ಎಂದು ಹೇಳಿದರು. ಅಲ್ಲದೆ, ಮುಂಬರುವ ದಿನಗಳಲ್ಲಿ ಇಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ. ಇದೇ ಹೇಳಿಕೆ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ರಚಿನ್ ಸೇರಲಿದ್ದಾರೆ ಎಂಬ ಊಹಾಪೋಹಕ್ಕೆ ಕಾರಣವಾಗಿದೆ. ಅಲ್ಲದೆ, ಮುಂಬರುವ 2024ರ ಐಪಿಎಲ್ನಲ್ಲಿ ಆರ್ಸಿಬಿಯಲ್ಲಿ ವಿರಾಟ್ ಕೊಹ್ಲಿ ಜತೆ ಆಡುವ ಬಯಕೆಯನ್ನು ರಚಿನ್ ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ. ರಚಿನ್ ಪೋಸ್ಟ್ ಆರ್ಸಿಬಿ ಅಭಿಮಾನಿಗಳ ಮನದಲ್ಲಿ ನಗು ಮೂಡಿಸಿದೆ.