ಮಂಡ್ಯ: 2019ರ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಸುಮಲತಾ ಗೆದ್ದು ಸಂಸದರಾದರೂ ಕೂಡ ಜೆಡಿಎಸ್ನವರು ಸಂಸದೆ ಸುಮಲತಾ (Sumalatha Ambareesh) ಅವರಿಗೆ ಯಾವುದೇ ಸಹಕಾರ ನೀಡದೆ ಪ್ರತಿ ಹಂತದಲ್ಲೂ ಸುಮಲತಾ ವರ್ಸಸ್ ದಳಪತಿಗಳ ನಡುವೆ ವಾಕ್ಸಮರ ನಡೆಯುತ್ತಿತ್ತು. ಸದ್ಯ ಮಂಡ್ಯ (Mandya) ರಾಜಕೀಯ ಪಲ್ಲಟಕ್ಕೆ ಸಾಕ್ಷಿಯಾಗಿದ್ದು, ನಿತ್ಯವೂ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಇಡೀ ಇಂಡಿಯಾವೇ ಮಂಡ್ಯದತ್ತ ತಿರುಗಿ ನೋಡುವಂತೆ ಮಾಡಿತ್ತು. ಕಾರಣ, ಅಂದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಕ್ಷೇತ್ರದಲ್ಲಿ ಸ್ವಾಭಿಮಾನದ ಕಹಳೆ ಮೊಳಗಿಸಿದ್ದರು. ಅಂದಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವೇ ಮಂಡ್ಯದಲ್ಲಿ ಬೀಡುಬಿಟ್ಟರೂ ಸ್ವಾಭಿಮಾನದ ಅಲೆಯಲ್ಲಿ ಈಜಿ ದಡ ಸೇರಲು ಸಾಧ್ಯವಾಗಲಿಲ್ಲ. ಸ್ವಾಭಿಮಾನದ ಸೆರಗೊಡ್ಡಿ ಮತ ಭಿಕ್ಷೆ ಬೇಡಿದ ಪರಿಣಾಮ ಸುಮಲತಾ ಅಂಬರೀಶ್ ಗೆದ್ದು, ಅಂದಿನ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೀನಾಯವಾಗಿ ಸೋಲಬೇಕಾಯಿತು.
ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ತಿಂಗಳಿಗೆ 12,400 ರೂ. ಸ್ಕಾಲರ್ ಶಿಪ್..! ಇಂದೇ ಅರ್ಜಿ ಸಲ್ಲಿಸಿ
ಅತ್ತ ಸುಮಲತಾ ಅಂಬರೀಶ್ ಸಂಸದರಾದ ನಂತರ ಬಿಜೆಪಿ ಪಕ್ಷಕ್ಕೆ ಬಾಹ್ಯ ಬೆಂಬಲ ಘೋಷಿಸಿದರು. ಇತ್ತ ಕಳೆದ ವಿಧಾನಸಭೆ ಚುನಾವಣೆ ಸೋಲಿನ ನಂತರ ಬಿಜೆಪಿ ಜೊತೆ ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಂಡಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ (JDS) ಪಕ್ಷಕ್ಕೆ ಬಿಟ್ಟುಕೊಡಲಾಗಿದೆ. ಇದು ಸಂಸದೆ ಸುಮಲತಾಗೆ ತೀವ್ರ ನಿರಾಸೆ ಉಂಟು ಮಾಡಿದೆ.
ಮಂಡ್ಯ ಬಿಜೆಪಿ ಟಿಕೆಟ್ಗಾಗಿ ಕಸರತ್ತು ನಡೆಸಿದ್ದ ಸುಮಲತಾಗೆ ಟಿಕೆಟ್ ಕೈತಪ್ಪಿದೆ. ಸಾಲದೆಂಬಂತೆ ತನ್ನ ರಾಜಕೀಯ ಎದುರಾಳಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಬೆಂಬಲಿಸಬೇಕಾ? ತಟಸ್ಥವಾಗಿ ಉಳಿಯಬೇಕಾ? ಅಥವಾ ಕಳೆದ ಬಾರಿಯಂತೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕಾ ಎಂಬ ಗೊಂದಲ ಸುಮಲತಾ ಹಾಗೂ ಆಪ್ತರದ್ದಾಗಿದೆ. ಇದರ ನಡುವೆಯೇ ಇಂದು ಮಂಡ್ಯದಲ್ಲಿ ಮಹತ್ವದ ಸಭೆ ಕರೆದಿರೋ ಸುಮಲತಾ, ಇಂದು ಮಂಡ್ಯದಲ್ಲೇ ತಮ್ಮ ಮುಂದಿನ ನಿರ್ಧಾರ ಪ್ರಕಟಿಸಲಿದ್ದಾರೆ.
ಇಂದು ಬೆಳಗ್ಗೆ ಮಂಡ್ಯದ ಕಾಳಿಕಾಂಬ ದೇಗುಲದ ಬಳಿ ಸುಮಲತಾ ಬೆಂಬಲಿಗರ ಸಭೆ ಕರೆಯಲಾಗಿದೆ. ಈ ಸಂಬಂಧ ತನ್ನ ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿರೋ ಸುಮಲತಾ ಇಂದಿನ ಸಭೆಗೆ ಬೆಂಬಲಿಗರನ್ನು ವಿಶೇಷವಾಗಿಯೇ ಆಹ್ವಾನಿಸಿದ್ದಾರೆ. ನನ್ನ ಸ್ವಾಭಿಮಾನಿ ಮಂಡ್ಯದ ಬಂಧುಗಳೆ, ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಾನು ಕಳೆದ ಬಾರಿ ಐತಿಹಾಸಿಕ ಗೆಲುವು ಸಾಧಿಸಿದ ನಂತರ, ಈ ಕ್ಷೇತ್ರದ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ಸಲದ ಲೋಕಸಭೆ ಚುನಾವಣೆಯೂ ಅದಕ್ಕೆ ಹೊರತಾಗಿಲ್ಲ. ಈಗಾಗಲೇ ರಾಜಕೀಯ ಪಲ್ಲಟಕ್ಕೆ ಮಂಡ್ಯ ಕ್ಷೇತ್ರ ಸಾಕ್ಷಿಯಾಗಿದೆ.