ಹುಬ್ಬಳ್ಳಿ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಜ. 23ರಿಂದ 25ರವರೆಗೆ ರಾಜ್ಯದ ಎಲ್ಲ ಸಂಸದರ ಮನೆಗಳ ಮುಂದೆ ವಿವಿಧ ವಿಭಾಗದ ಕಾರ್ಮಿಕರ ಸಾಮೂಹಿಕ ಪ್ರತಿಭಟನೆ ಏರ್ಪಡಿಸಲಾಗಿದೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಕರ್ನಾಟಕ ಸಮಿತಿ ಅಧ್ಯಕ್ಷೆ ಎಸ್. ವರಲಕ್ಷ್ಮೀ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಕಾರ್ಮಿಕರು, ರೈತ ಮತ್ತು ಜನಸಾಮಾನ್ಯರ ವಿರೋಧಿ ನೀತಿಗಳನ್ನು ಕೈ ಬಿಡಬೇಕೆಂದು ಒತ್ತಾಯಿಸಿದರು.
![Demo](https://ainlivenews.com/wp-content/uploads/2023/12/spoorthi-1.jpg)
ಜಿಎಸ್ಟಿ ಸಂಗ್ರಹದಲ್ಲಿ ಕರ್ನಾಟಕ ರಾಜ್ಯ 2 ನೇ ಸ್ಥಾನದಲ್ಲಿದೆ. ಆದರೂ ರಾಜ್ಯಕ್ಕೆ ದೊರಕಬೇಕಾದ ನ್ಯಾಯಯುತ ಪಾಲನ್ನು ಕೇಂದ್ರ ಸರ್ಕಾರ ಕೊಡಲು ನಿರಂತರವಾಗಿ ನಿರಾಕರಿಸುತ್ತಿದೆ. ರಾಜ್ಯದ ಜನತೆಗೆ ಕೇಂದ್ರ ಸರ್ಕಾರ ಮಾಡುತ್ತಿರುವ ವಂಚನೆಯನ್ನು ಕಾಂಗ್ರೆಸ್ ಸರ್ಕಾರವು ರಾಜಕೀಯವಾಗಿ ಬಹಿರಂಗಗೊಳಿಸುತ್ತಿಲ್ಲ ಎಂದರು.
ವಿವಿಧ ವಿಷಯ ಒಳಗೊಂಡಂತೆ ಪ್ರತಿರಂಗದಲ್ಲಿಯೂ ಕೇಂದ್ರ ಸರ್ಕಾರದ ನೀತಿಗಳಿಂದ ಆಗುತ್ತಿರುವ ಕೆಟ್ಟ ಪರಿಣಾಮಗಳನ್ನು ಬಯಲು ಮಾಡಲು ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ಮುಂದಾಗುತ್ತಿಲ್ಲ. ಕಾರ್ಮಿಕರಿಗೆ ಸಾಮಾಜಿಕ ರಕ್ಷಣಾ ಹಾಗೂ ಕಲ್ಯಾಣ ಯೋಜನೆ ವಿಸ್ತಾರಗೊಳಿಸುವ ಬದಲು ಅವುಗಳನ್ನು ನಾಶ ಮಾಡುವ ಪ್ರಯತ್ನಗಳಿಗೆ ಕೇಂದ್ರ ಸರ್ಕಾರ ಮುಂದಾಗುತ್ತಿದೆ ಎಂದು ಆರೋಪಿಸಿದರು.
ಒಂದು ಕೋಟಿ ಸಹಿ ಸಂಗ್ರಹವನ್ನು ಸ್ವಾಮಿ ವಿವೇಕಾನಂದರ ಜನ್ಮ ದಿನದಂದು ಅಂದರೆ ಜ. 12ರಿಂದ ರಾಜ್ಯದಲ್ಲಿ ಆರಂಭಿಸಲಾಗುವುದು. ಸಹಿ ಸಂಗ್ರಹ ಚಳವಳಿಯ ಮೂಲಕ ಕೇಂದ್ರ ಸರ್ಕಾರವನ್ನು ಎಚ್ಚರಗೊಳಿಸಲಾಗುವುದು. ನಂತರ ಪ್ರತಿಭಟನೆ ನಡೆಸಲಾಗುವುದು. 3 ದಿನಗಳವರೆಗೆ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿನ ಸಂಸದರ ಕಚೇರಿ ಬಳಿ ವಿವಿಧ ವಿಭಾಗದ ಕಾರ್ಮಿಕರಿಂದ ಸಾಮೂಹಿಕ ಪ್ರತಿಭಟನೆ ಆಯೋಜಿಸಲಾಗಿದೆ ಎಂದರು.
ಕಾರ್ಮಿಕ ಸಂಘಟನೆ ಪ್ರಮುಖರಾದ ಮೀನಾಕ್ಷಿ ಸುಂದರಂ, ಕೆ. ಮಹಾಂತೇಶ, ಮಹೇಶ ಪತ್ತಾರ, ಬಿ.ಐ. ಈಳಿಗೇರ ಸುದ್ದಿಗೋಷ್ಠಿಯಲ್ಲಿದ್ದರು.
![](https://ainlivenews.com/wp-content/uploads/2024/01/Ad-Banner-copy-scaled.jpg)