ಹುಬ್ಬಳ್ಳಿ: ಯುವ ಸಮೂಹಕ್ಕೆ ಮಾರಕವಾಗಿರುವ ಆನ್ ಲೈನ್ ಬೆಟ್ಟಿಂಗ್, ರಮ್ಮಿ ಮುಂತಾದ ಆ್ಯಪ್ ಗಳನ್ನು ಬಂದ್ ಮಾಡಬೇಕೆಂದು ಆಗ್ರಹಿಸಿ, ನಮ್ಮ ಕರ್ನಾಟಕ ಸೇನೆ ವತಿಯಿಂದ ನಗರದಲ್ಲಿಂದು ಪ್ರತಿಭಟನೆ ನಡೆಸಲಾಯಿತು.
ನಗರದ ಸಂಗೊಳ್ಳಿ ರಾಯಣ್ಣನ ವೃತ್ತದಿಂದ ತಹಶಿಲ್ದಾರ ಕಛೇರಿಯವರೆಗೆ ಪ್ರತಿಭಟನಾ ರ್ಯಾಲಿ ಮಾಡುವ ಮೂಲಕ ಪ್ರತಿಭಟನಾಕಾರರು ತಹಶಿಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ನಮ್ಮ ಕರ್ನಾಟಕ ಸೇನೆಯ ಉತ್ತರ ಕರ್ನಾಟಕ ಅಧ್ಯಕ್ಷರಾದ ಅಮೃತ ಇಜಾರಿ ಮಾತನಾಡಿ, ಆನ್ಲೈನ್ ಬೆಟ್ಟಿಂಗ್ ಜಾಲಕ್ಕೆ ಶಾಲಾ ವಿದ್ಯಾರ್ಥಿಗಳು, ಯುವಕರು ಸಿಕ್ಕು ತಮ್ಮ ಜೀವನ ಹಾಳು ಮಾಡಿಕೊಳ್ಳವ ದುಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ಮಾನಸಿಕವಾಗಿ ಮನನೊಂದು ಆತ್ಮಹತ್ಯೆಗೆ ಶರಣಾಗುತ್ತಿರುವ ಉದಾಹರಣೆಗಳು ಸಾಕಷ್ಟು ನಡೆದಿವೆ.
ಈ ನಿಟ್ಟಿನಲ್ಲಿ ದೇಶದ ಕೆಲ ರಾಜ್ಯಗಳಲ್ಲಿ ಬೆಟ್ಟಿಂಗ್ ಆನ್ಲೈನ್ ಆಪ್ ಗಳನ್ನು ನಿಷೇಧ ಮಾಡಲಾಗಿದ್ದು, ಇಂತಹ ಮಾರಕ ಆ್ಯಪ್ ಗಳನ್ನು ರಾಜ್ಯ ಸರ್ಕಾರ ರಾಜ್ಯದಲ್ಲಿ ನಿಷೇಧ ಮಾಡಬೇಕೆಂದು ಆಗ್ರಹಪಡಿಸಿದರು. ಒಂದು ವೇಳೆ ನಿಷೇಧ ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬಸವರಾಜ್ ದೇವರಮನಿ, ಮಹೇಶ ಪತ್ತಾರ, ಶೀತಲ ಮಲಗಾವಿ, ಸಿದ್ದು ಸಫಾರೆ, ಮನೋಹರ ಸಫಾರೆ, ಬಸವರಾಜ್ ಸಾಲಿ, ಹಿತೇಶ ರಾಠೋಡ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.