ಹುಬ್ಬಳ್ಳಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಔಷಧ ಮಾರಾಟ ಪ್ರತಿನಿಧಿಗಳ ಫೆಡರೇಷನ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ರಾಜ್ಯ ಔಷಧಿ ಮಾರಾಟ ಪ್ರತಿನಿಧಿಗಳು ಕೆಲಸವನ್ನು ಬಹಿಷ್ಕರಿಸಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಾರಿ ಮಾಡಿರುತ್ತಿರುವ ಕಾರ್ಮಿಕ ಹಾಗೂ ರೈತ ವಿರೋಧಿ ನೀತಿಗಳು, ಪೆಟ್ರೋಲ್ ಡೀಸೆಲ್ ಬೆಲೆಗಳ ಮೇಲಿನ ಅಬಕಾರಿ ಸುಂಕ ಹೆಚ್ಚಳ, ಜೀವನಾವಶ್ಯಕ ಔಷಧಿಗಳ ಮೇಲಿನ ಜಿ.ಎಸ್.ಟಿ. ಯಿಂದ ಔಷಧಗಳ ಬೆಲೆ ಏರಿಕೆ, ಜಿಲ್ಲಾ ಆಸ್ಪತ್ರೆಗಳನ್ನ ಪಬ್ಲಿಕ್ ಪ್ರೈವೇಟ್ ಪಾರ್ಟನರ್ಶಿಪ್(ಪಿ.ಪಿ.ಪಿ.) ಅಡಿಯಲ್ಲಿ ತರುವ ಮೂಲಕ ಮಾಡುತ್ತಿರುವ ಖಾಸಗೀಕರಣ, ಸರ್ಕಾರಿ ಆಸ್ಪತ್ರೆಗಳಿಗೆ ಉತ್ಪಾದನೆ ಮಾಡಿ ಸರಬರಾಜು ಮಾಡುತ್ತಿದ್ದ ಔಷಧ & ಜೀವ ರಕ್ಷಕ ವ್ಯಾಕ್ಸಿನ್ ಉತ್ಪಾದನಾ ಘಟಕಗಳ ಷೇರುಗಳನ್ನು ಬಿಡಿಗಾಸಿಗೆ ಖಾಸಗೀ ಬಂಡವಾಳಿಗರಿಗೆ ಮಾರಾಟ ಮಾಡುತ್ತಿರುವುದು. ಕಡಿಮೆ ಬೆಲೆಯಲ್ಲಿ ಔಷಧಗಳನ್ನು ಜನೌಷಧಿಗಳ ಮೂಲಕ ಕೊಡುವುದಾಗಿ ಪ್ರಚಾರ ಮಾಡಿದ ಕೇಂದ್ರ ಸರ್ಕಾರವು ಜನೌಷಧಿ ಮಳಿಗೆಗಳನ್ನ ಮೊಟ್ಟ ಮೊದಲಿಗೆ ಪ್ರಾರಂಭಿಸಿದ್ದು ಉಚಿತವಾಗಿ ಔಷಧಗಳನ್ನು ನೀಡುತ್ತಿದ್ದ ಸರ್ಕಾರಿ ಆಸ್ಪತ್ರೆಗಳಲ್ಲಿ, ಈ ಎಲ್ಲಾ ಅನ್ಯಾಯಗಳು ದೇಶದ ಕಾರ್ಮಿಕ ವರ್ಗ ತ್ಯಾಗ ಬಲಿದಾನಗಳ ಮೂಲಕ ಗಳಿಸಿರುವ ಎಲ್ಲಾ ಹಕ್ಕುಗಳನ್ನು ಕಿತ್ತುಕೊಳ್ಳಲಿದೆ. ಅಲ್ಲದೆ ರೈತರು ಹಾಗೂ ಜನಸಾಮಾನ್ಯರ ದಿನನಿತ್ಯದ ಬದುಕನ್ನು ಮತ್ತಷ್ಟು ಕಷ್ಟಕ್ಕೀಡು ಮಾಡಲಿದೆ.
ಈ ಹಿನ್ನಲೆಯಲ್ಲಿ ಅಖಿಲ ಭಾರತ ಔಷಧ ಮಾರಾಟ ಪ್ರತಿನಿಧಿಗಳ ಫೆಡರೇಷನ್ ಕರೆ ನೀಡಿರುವ ಈ ಮುಷ್ಕರವು ಅತ್ಯಂತ ಮಹತ್ವದ್ದಾಗಿದೆ.ಔಷಧಿ ಕ್ಷೇತ್ರದಲ್ಲಿ ಅನೈತಿಕವಾಗಿ ನಡೆಯುತ್ತಿರುವ ಮಾರಾಟ ದಂಧೆಗೆ ಕಡಿವಾಣ ಹಾಕಿ ಜನಸಾಮಾನ್ಯರಿಗೆ ಅವಶ್ಯಕವಿರುವ ಜೀವರಕ್ಷಕ ಔಷಧಿಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡುವ ಅವಕಾಶಗಳಿದ್ದರೂ ಕೇಂದ್ರ ಸರಕಾರ ಅದಕ್ಕೆ ಗಮನವೇ ನೀಡುತ್ತಿಲ್ಲ ಎಂದು ಕಾರ್ಮಿಕ ಮುಖಂಡ ಬಿ.ಎಸ್ ಸೊಪ್ಪಿನ ಆಕ್ರೋಶ ವ್ಯಕ್ತಪಡಿಸಿದರು.
ಖಾಸಗೀ ಬಹುರಾಷ್ಟ್ರೀ ಕಂಪನಿಗಳು ಭ್ರಷ್ಟ ವ್ಯವಸ್ಥೆ ಮೂಲಕ ತಮ್ಮ ಲಾಭ ಕೋರತನದಿಂದ ಜನರಿಗೆ ಅನಾವಶ್ಯಕವಾದ ಔಷಧಿಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ ಅದನ್ನು ಬಳಸುವ ರೋಗಿಗಳ ಆರೋಗ್ಯವನ್ನು ಮತ್ತಷ್ಟು ಹಾಳು ಮಾಡುತ್ತಿವೆ. ಜನರ ಆರೋಗ್ಯವನ್ನು ರಕ್ಷಿಸಬೇಕಾದ ಕೇಂದ್ರ ಸರಕಾರವು ಕಂಡು ಕಾಣದಂತೆ ವರ್ತಿಸುತ್ತಿದೆ.
ಮಾತ್ರವಲ್ಲ ಸಾರ್ವಜನಿಕ ವಲಯದ ಔಷಧಿ ಕಂಪನಿಗಳನ್ನು ಮುಚ್ಚುವ ಮೂಲಕ ಖಾಸಗೀ ಕಂಪನಿಗಳ ಲಾಭಕೋರತನವನ್ನು ಸರಕಾರವೇ ಬೆಂಬಲಿಸುತ್ತಿರುವುದು ದುರದೃಷ್ಟಕರ. ಇದರಿಂದಾಗಿ ಖಾಸಗೀ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಇಚ್ಚೆ ಬಂದಷ್ಟು ಔಷಧಿಗಳ ಬೆಲೆಗಳ ಏರಿಕೆಗೆ ಅವಕಾಶ ನೀಡಿದಂತಾಗಿದೆಯಲ್ಲದೇ, ಔಷಧಿಗಳ ಎಂ.ಆರ್.ಪಿ. ಮೇಲೆ ಪ್ರತೀ ವರ್ಷ ಶೇ.೧೦ ರಷ್ಟು ಬೆಲೆ ಹೆಚ್ಚಿಸುವ ಅವಕಾಶವನ್ನು ಕೇಂದ್ರ ಸರ್ಕಾರ ಮಾಡಿದೆ. ಇದರಿಂದಾಗಿ ಇಡೀ ಆರೋಗ್ಯ ಕ್ಷೇತ್ರವೇ ಖಾಸಗೀಯವರ ದಾಳಕ್ಕೆ ಸಿಲುಕಿದೆ, ಪರಿಣಾಮವಾಗಿ ಅಲ್ಲಿ ಚಿಕಿತ್ಸೆ ಪಡೆಯುವುದು ಸಂಪೂರ್ಣ ಹಣದ ವ್ಯವಹಾರದ ಮೇಲೆ ನಿಂತಿದೆ, ಇದರಿಂದ ರೋಗಿಗಳ ಜೀವ ಸದಾ ಅಪಾಯದಲ್ಲಿದೆ.
ಇದಲ್ಲದೆ ಔಷಧಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಔಷಧಿ ಮಾರಾಟ ಪ್ರತಿನಿಧಿಗಳಿಗೆ ಯಾವುದೇ ಕನಿಷ್ಟವೇತನ, ಸಾಮಾಜಿಕ ಭದ್ರತೆ ಎಂಬುದೇ ಇಲ್ಲ. ಇಲ್ಲಿ ಕಾರ್ಮಿಕ ಕಾನೂನು ಉಲ್ಲಂಘನೆ ಎಂಬುದು ನಿತ್ಯ ನಡೆಯುತ್ತಲೇ ಇದೆ. ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲಿರುವ ಔಷಧ ಕಂಪನಿಗಳ ದಾಖಲೆಗಳನ್ನ ಪರಿಶೀಲಿಸಲು ನಮ್ಮ ಸಂಘಟನೆಯು ಒತ್ತಾಯ ಮಾಡಿದ್ದರೂ ರಾಜ್ಯ ಸರ್ಕಾರವು ಸರಿಯಾದ ಕ್ರಮ ಕೈಗೊಂಡಿರುವುದಿಲ್ಲ, ಇದೀಗ ಕೇಂದ್ರ ಸರಕಾರ ಕಾರ್ಮಿಕ ಕಾನೂನು ತಿದ್ದುಪಡಿ ಮಾಡುವ ಮೂಲಕ ಕಾರ್ಮಿಕರನ್ನು ಶೋಷಣೆ ಮಾಡಿ ಮಾಲಿಕರನ್ನು ಪೋಷಣೆ ಮಾಡುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಿರುವುದರಿಂದ ಮಾರಾಟ ಪ್ರತಿನಿಧಿಗಳ ರಕ್ಷಣೆಗೆ ಇದ್ದಂತಹ ಎಸ್.ಪಿ.ಇ. ಖಾಯಿದೆ ರದ್ಧಾಗಲಿದೆ. ಆಸ್ಪತ್ರೆಗಳಲ್ಲಿ ಔಷಧ ಮಾರಾಟ ಪ್ರತಿನಿಧಿಗಳ ಪ್ರವೇಶ ನಿರ್ಬಂಧ ಮಾಡಿರುವುದು, ಸೇವಾ ಷರತ್ತುಗಳು ಮತ್ತು ಕೆಲಸದ ಅವಧಿಯನ್ನ ನಿಗಧಿ ಮಾಡದೇ ಜಿ.ಪಿ.ಆರ್.ಎಸ್. ಮತ್ತು ಜಿಯೋ ಟ್ಯಾಗಿಂಗ್ ನಿಂದ ಗೌಪ್ಯತೆ ಬಹಿರಂಗಪಡಿಸುವ ಮೂಲಕ ಸುಮಾರು ೧೩-೧೫ ಗಂಟೆ ಕೆಲಸ ಮಾಡಿಸುವ ಮೂಲಕ ಮಾರಾಟ ಪ್ರತಿನಿಧಿಗಳ ಮೇಲೆ ನೆಡೆಯುತ್ತಿರುವ ಶೋಷಣೆಯು ಸಂವಿಧಾನ ವಿರೋಧಿ ನೆಡೆಯಾಗಿದೆ, ಮಾರಾಟದ ಹೆಸರಲ್ಲಿ ಮಾರಾಟ ಪ್ರತಿನಿಧಿಗಳಿಗೆ ಆಡಳಿತ ವರ್ಗದಿಂದ ಕಿರುಕುಳ, ಈ ಹಿನ್ನಲೆಯಲ್ಲಿ ಅಖಿಲ ಭಾರತ ಔಷಧ ಮಾರಾಟ ಪ್ರತಿನಿಧಿಗಳ ಫೆಡರೇಷನ್ ಕೇಂದ್ರ ಸರಕಾರದ ಈ ನೀತಿಗಳ ವಿರುದ್ದ ನಡೆಸುತ್ತಿರುವ ಮುಷ್ಕರವು ನ್ಯಾಯ ಸಮ್ಮತವಾಗಿದೆ.
ಈ ಮುಷ್ಕರದಲ್ಲಿ ಇಡೀ ದೇಶವ್ಯಾಪಿ ಕೆಲಸ ಮಾಡುತ್ತಿರುವ ಲಕ್ಷಾಂತರ ಔಷಧಿ ಮಾರಾಟ ಪ್ರತಿನಿಧಿಗಳ ಹಲವಾರು ಬೇಡಿಕೆಗಳನ್ನು ಏನೇ ಇವೆ ಅಂತಾ ಔಷಧಿ ಮಾರಾಟಗಾರರ ಸಂಘದ ಮುಖಂಡ ರಮೇಶ ಹಿರೇಗೌಡರ ಹೇಳಿದರು.
ಇನ್ನು ನಗರದ ಚೆನ್ನಮ್ಮ ಸರ್ಕಲ್ ದಿಂದ ಮಿನಿವಿಧಾನ ಸೌಧದವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.