ಖ್ಯಾತ ನಟಿಯೊಬ್ಬರು 12 ವರ್ಷದ ಹಿಂದೆ ಮಾಡಿದ್ದ ಪೋಸ್ಟ್ ಒಂದು ಸಂಕಷ್ಟ ತಂದಿದ್ದು ಆಕೆ ಕ್ಷಮೆಯಾಚಿಸಿದ್ದಾರೆ. ಬೆಂಗಳೂರು ಮೂಲದ ನಟಿ ಧನ್ಯಾ ಬಾಲಕೃಷ್ಣ 12 ವರ್ಷಗಳ ಹಿಂದೆ ನಡೆದ ಸಿಎಸ್ಕೆ ಹಾಗೂ ಆರ್ಸಿಬಿ ನಡುವಿನ ಪಂದ್ಯದ ಕುರಿತು ಸಾಮಾಜಿಕ ಜಾಲತಾಣದಲ್ಇ ಬರೆದುಕೊಂಡಿದ್ದರು. ಈ ವಿಚಾರ ಈಗ ಸದ್ದು ಮಾಡುತ್ತಿದ್ದು, ಅವರು ತಮಿಳು ಜನರ ಕ್ಷಮೆಯಾಚಿಸಿದ್ದಾರೆ.
ಧನ್ಯಾ ಬಾಲಕೃಷ್ಣ, ತೆಲುಗು, ತಮಿಳು ಚಿತ್ರರಂಗದ ಜನಪ್ರಿಯ ಪೋಷಕ ನಟಿ. ಕನ್ನಡದ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಇದೀಗ ಇವರ ನಟನೆಯ ತಮಿಳು ಸಿನಿಮಾ ‘ಲಾಲ್ ಸಲಾಂ’ ಬಿಡುಗಡೆ ಆಗಲಿದ್ದು, ಇದರ ನಡುವೆ ಧನ್ಯಾ ಅವರದ್ದು ಎನ್ನಲಾಗುತ್ತಿರುವ ಹಳೆಯ ಪೋಸ್ಟ್ ಒಂದು ವೈರಲ್ ಆಗಿ ವಿವಾದ ಸೃಷ್ಟಿಸಿದೆ. ‘ಲಾಲ್ ಸಲಾಂ’ ಸಿನಿಮಾ ಬಿಡುಗಡೆಗೆ ತಡೆ ಒಡ್ಡುವ ಬೆದರಿಕೆಯನ್ನು ಸಹ ಕೆಲವರು ಹಾಕಿದ್ದು, ಇದೀಗ ನಟಿ ಧನ್ಯಾ ಬಾಲಕೃಷ್ಣ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಧನ್ಯಾ ಅವರ ಪೋಸ್ಟ್ನಲ್ಲಿ ಚೆನ್ನೈ ಸೂಪರ್ಕಿಂಗ್ಸ್ ತಂಡವನ್ನು ಕಟುವಾಗಿ ಟೀಕಿಸಿರುವ ಅವರು, ನೀವು ನೀರು, ಕರೆಂಟ್ಗಾಗಿ ಬೇಡಿಕೊಳ್ಳಿ ನಾವು ಕೊಡುತ್ತೇವೆ. ನಿಮ್ಮ ಜನರು ಬಂದು ನಮ್ಮ ಸುಂದರ ನಗರವನ್ನು ಆಕ್ರಮಿಸಿಕೊಂಡಿದ್ದಾರೆ. ನಾವು ಈಗ ಕರುಣೆ ತೋರಿದ್ದಕ್ಕೆ ಈಗ ನೀವು ಪ್ಲೇ ಆಫ್ಸ್ ಪ್ರವೇಶಿಸಿದ್ದೀರಾ ನಿಮಗೆ ನಾಚಿಕೆಯಾಗುವುದಿಲ್ಲವಾ ಎಂದು ಪೋಸ್ಟ್ ಮಾಡಿ ಟೀಕಿಸಿದ್ದರು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಧನ್ಯಾ, ’12 ವರ್ಷಗಳ ಆ ಪೋಸ್ಟ್ ಅನ್ನು ನಾನು ಮಾಡಿಲ್ಲ. ಅದು ಯಾವುದೋ ಟ್ರೋಲಿಗರು ಮಾಡಿರುವ ಎಡಿಟ್. ಆ ಘಟನೆ ನಡೆದಾಗಲೇ ನಾನು ಆ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ನನಗೆ ಅನ್ನ ನೀಡುತ್ತಿರುವ ನನ್ನ ವೃತ್ತಿಯ ಆಣೆಯಾಗಿಯೂ ನಾನು ಈ ಮಾತನ್ನು ಹೇಳುತ್ತಿದ್ದೇನೆ. ನಾನು ಈ ವಿಷಯವಾಗಿ ಮೊದಲೇ ಸ್ಪಷ್ಟನೆ ನೀಡಬೇಕು ಎಂದುಕೊಂಡಿದ್ದೆ.