ಮುಂಬೈ: ವಿಶೇಷಚೇತನ ಹಾಗೂ ಒಬಿಸಿ ಕೋಟಾವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆಂಬ ಆರೋಪ ಎದುರಿಸುತ್ತಿರುವ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಗಳು ಕಂಡುಬರುತ್ತಿವೆ. ಈ ನಡುವೆಯೇ ಮಹಾರಾಷ್ಟ್ರ ಸರ್ಕಾರ ಅವರ ತರಬೇತಿಯನ್ನು ತಡೆಹಿಡಿದಿದ್ದು, ಜುಲೈ 23ರ ಒಳಗೆ ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ಗೆ ಬರುವಂತೆ ಸೂಚಿಸಿದೆ.
ನಕಲಿ ಜಾತಿ ಪ್ರಮಾಣಪತ್ರ, ವಿಶೇಷಚೇತನ ಎಂದು ಸುಳ್ಳು ದಾಖಲೆ ಸೃಷ್ಟಿ, ವಯಸ್ಸಿನ ಕುರಿತು ನಕಲಿ ದಾಖಲೆ ಮಾಡಿಸಿರುವ ಆರೋಪ ಎದುರಿಸುತ್ತಿರುವ ಪೂಜಾ ಖೇಡ್ಕರ್ ಮಹಾರಾಷ್ಟ್ರದ ವಾಶೀಂ ಜಿಲ್ಲೆಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಂಗಳವಾರ ಅವರ ಜಿಲ್ಲಾ ತರಬೇತಿಯನ್ನು ತಡೆಹಿಡಿಯಲಾಗಿದೆ.
BPL ಕಾರ್ಡ್ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: 1.73 ಲಕ್ಷ ರೇಷನ್ ಕಾರ್ಡ್ ವಿತರಣೆ – ಕೆಎಚ್ ಮುನಿಯಪ್ಪ ಸ್ಪಷ್ಟನೆ
ಪೂಜಾ ಖೇಡ್ಕರ್ ಅವರ ಪ್ರಕರಣದಲ್ಲಿ ಸರ್ಕಾರದ ಮೊದಲ ಮಹತ್ವದ ಕ್ರಮ ಇದು ಎಂದು ಹೇಳಲಾಗಿದೆ. ಮುಂದಿನ ಕ್ರಮಕ್ಕಾಗಿ ಅವರನ್ನು ತರಬೇತಿ ಅಕಾಡೆಮಿಗೆ ಬರುವಂತೆ ಆದೇಶ ಪ್ರತಿಯಲ್ಲಿ ಸೂಚಿಸಿದೆ. ಕಳೆದ ವಾರವಷ್ಟೇ ರಾಜ್ಯ ಸರ್ಕಾರ ಪ್ರಕರಣದ ತನಿಖೆಗೆ ಏಕಸದಸ್ಯ ಸಮಿತಿ ರಚಿಸಿತ್ತು. ಸೋಮವಾರ (ಜು.15) ಸಹ ಪೊಲೀಸರು ತಡರಾತ್ರಿವರೆಗೆ ಮೇಲ್ವಿಚಾರಣೆ ನಡೆಸಿದ್ದರು. ರಾತ್ರಿ 11 ಗಂಟೆಯಿಂದ 1 ಗಂಟೆವರೆಗೆ ಮೂವರು ಮಹಿಳಾ ಅಧಿಕಾರಿಗಳು ವಿಚಾರಣೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ಬಗ್ಗೆ ಪೂಜಾ ಖೇಡ್ಕರ್ ಹೇಳಿದ್ದೇನು?
ನಕಲಿ ದಾಖಲೆ, ಅಧಿಕಾರ ದುರುಪಯೋಗ ಸೇರಿ ಹಲವು ಆರೋಪಗಳ ಕುರಿತು ತನಿಖೆಗೆ ಆದೇಶಿಸಲಾಗಿದ್ದು, ಮೊದಲ ಬಾರಿಗೆ ಅವರು ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು. ಯಾರೇ ಆಗಲಿ, ಆರೋಪ ಸಾಬೀತಾಗುವವರೆಗೆ ಅವರು ಆರೋಪಿಯೇ, ಮಾಧ್ಯಮಗಳ ವರದಿಗಳು, ತೀರ್ಪುಗಳು ನಾನು ಏನೆಂಬುದನ್ನು ತೀರ್ಮಾನಿಸುವುದಿಲ್ಲ. ತನಿಖೆಗೆ ರಚನೆಯಾಗಿರುವ ಸಮಿತಿಯ ತೀರ್ಮಾನದ ಬಳಿಕವೇ ಸತ್ಯ ಏನೆಂಬುದು ಗೊತ್ತಾಗುತ್ತದೆ. ಮಾಧ್ಯಮಗಳು ಅಥವಾ ಜನರು ನನ್ನನ್ನು ತೀರ್ಮಾನಿಸಲಾಗುವುದಿಲ್ಲ ಎಂದು ಹೇಳಿದ್ದರು.