ಧಾರವಾಡ: ಡಿಕೆಶಿ ಸಿಎಂ ಆಗಲಿ ಎಂದು ನೊಣವಿನಕೆರೆ ಸ್ವಾಮೀಜಿ ಹೇಳಿಕೆ ಕೊಟ್ಟ ವಿಚಾರವಾಗಿ ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಧಾರವಾಡದಲ್ಲಿ ಮಾತನಾಡಿರುವ ಅವರು, ಸ್ವಾಮೀಜಿಗಳು ರಾಜಕೀಯದಿಂದ ಹೊರತಾಗಿರಬೇಕು. ನಮ್ಮದೇನಿದ್ದರೂ ಧರ್ಮ, ಸಂಸ್ಕತಿ, ಸಂಸ್ಕಾರದ ವಿಚಾರಧಾರೆಗಳಿರಬೇಕು. ಈಗ ಎಲ್ಲ ಸಮುದಾಯಗಳು ಸಂಕೀರ್ಣದಿಂದ ಹೊರಗೆ ಬಂದಿವೆ. ಮಠಾಧೀಶರು ರಾಜಕಾರಣದಲ್ಲಿದ್ದಾರೆ ಎಂಬ ವಿಚಾರ ಒಂದು ಕಡೆ ಆದರೆ,
ಮಾಧ್ಯಮಗಳೂ ಸಹ ರಾಜಕಾರಣದ ವರ್ಗದಲ್ಲಿದೆ. ಅವುಗಳು ಕೂಡ ರಾಜಕಾರಣ ಹೊರತುಪಡಿಸಿ ನಿಂತಿಲ್ಲ ಎಂದರು. ಒಂದೊಂದು ಚಾನೆಲ್ಗಳು ಒಬ್ಬೊಬ್ಬ ರಾಜಕಾರಣಿಯನ್ನು ವೈಭವೀಕರಿಸಿದರೆ, ಕೆಲ ಚಾನೆಲ್ಗಳು ಕೆಲ ರಾಜಕಾರಣಿಗಳನ್ನು ನಿರಾಕರಿಸುತ್ತವೆ. ಈಗ ಮಾಧ್ಯಮ ಮತ್ತು ಸ್ವಾಮೀಜಿಗಳ ಇಬ್ಬರ ಪಾತ್ರವೂ ಸೋಲುತ್ತಿದೆ. ಸಮಾಜದಲ್ಲಿ ಎಲ್ಲವೂ ಸಮತೋಲನ ತಪ್ಪಿದೆ ಎಂದರು. ಮಠಾಧೀಶರು ರಾಜಕಾರಣದಲ್ಲಿ ಬರಬಾರದು ಎನ್ನುವುದು ಸತ್ಯ. ಧರ್ಮ,
ರಾಜಕಾರಣದಲ್ಲಿ ಪ್ರವೇಶ ಮಾಡಬಾರದು. ಕೇವಲ ಲಿಂಗಾಯತ ಸ್ವಾಮೀಜಿಗಳು ಮಾತ್ರವಲ್ಲ ಮೌಲ್ವಿ, ಪಾದ್ರಿಗಳೂ ಕೂಡ ರಾಜಕಾರಣ ದಲ್ಲಿ ಪ್ರವೇಶ ಆಗಬಾರದು. ಯಾವ ಧರ್ಮದ ನೇತಾರರೂ ರಾಜಕಾರಣ ಪ್ರವೇಶ ಮಾಡಬಾರದು. ರಾಜಕಾರಣಿಗಳಿಗೆ ಸ್ವಾಮೀಜಿಗಳು ಬುದ್ಧಿ ಹೇಳಬಹುದು, ಮಾರ್ಗದರ್ಶನ ಮಾಡಬಹುದು. ಒಬ್ಬ ಸ್ವಾಮೀಜಿಯನ್ನು ಬಳಸಿಕೊಳ್ಳುವಾಗ ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು. ಅವರನ್ನು ಧಾರ್ಮಿಕ ಕಾರ್ಯಕ್ಕೆ ಮಾತ್ರವೇ ಬಳಸಿಕೊಳ್ಳಬೇಕು.ರಾಜಕಾರಣಿಗಳು ಸ್ವಾಮೀಜಿಗಳನ್ನು ಬೇರೆ ಕೆಲಸಕ್ಕೆ ಬಳಸುವಾಗ ಸ್ವಾಮೀಜಿಗಳೂ ಎಚ್ಚರಿಕೆಯಿಂದ ಇರಬೇಕು ಎಂದರು.