ಬೆಂಗಳೂರು:- ಪೌರ ಕಾರ್ಮಿಕರಿಗೆ ನಿವೇಶನ ನೀಡುವ ಸುದ್ದಿ ಸತ್ಯಕ್ಕೆ ದೂರವಾದದ್ದು ಎನ್ನುವುದನ್ನು ಬಿಬಿಎಂಪಿ ಸ್ಪಷ್ಟಪಡಿಸಿದೆ. ಇದೊಂದು ಮೋಸದ ಜಾಲವಾಗಿದ್ದು ಯಾರೂ ಈ ಮೋಸದ ಬಲೆಗೆ ಬೀಳಬಾರದು ಎಂದು ಪಾಲಿಕೆ ಮನವಿ ಮಾಡಿದೆ.
ಬಿವಿಎಂಪಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಪಾಲಿಕೆ ವತಿಯಿಂದ ನಿವೇಶನ ದೊರಕಿಸಿಕೊಡುವುದಾಗಿ ಅಪಪ್ರಚಾರ ನಡೆಸುವ ಕೆಲಸ ಕೆಲವು ದಿನಗಳಿಂದ ನಡೆದಿದೆ. ಈ ಬಗ್ಗೆ ಇದೀಗ ಬಿಬಿಎಂಪಿ ಸ್ಪಷ್ಟನೆ ನೀಡಿದೆ. ಮನೆ ದೊರಕಿಸಿಕೊಡುವ ನೆಪದಲ್ಲಿ ಹಣ ವಸೂಲಿ ಮಾಡುತ್ತಿರುವ ಪ್ರಕರಣ ಬಗ್ಗೆ ಪಾಲಿಕೆ ತನ್ನ ಹೇಳಿಕೆ ಬಿಡುಗಡೆ ಮಾಡಿದೆ. ಇದು ಅನಾಮಧೇಯ ವ್ಯಕ್ತಿಗಳು ಪಾಲಿಕೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ಈ ರೀತಿ ಮಾಡುತ್ತಿದ್ದಾರೆ ಎನ್ನುವುದನ್ನು ಸ್ಪಷ್ಟವಾಗಿ ಹೇಳಿದೆ.
ಗದಗ ಜೀಮ್ಸ್ ಆಸ್ಪತ್ರೆ ಇದೀಗ ರೀಲ್ಸ್ ಸ್ಪಾಟ್! – ರವಿಚಂದ್ರನ್ ಹಾಡಿಗೆ ವಿದ್ಯಾರ್ಥಿಗಳ ಸಖತ್ ಸ್ಟೆಪ್!
ಪೌರಕಾರ್ಮಿಕರಿಗೆ ಪಾಲಿಕೆ ವತಿಯಿಂದ ಯಾವುದೇ ನಿವೇಶನಗಳನ್ನು ನೀಡುವ ಯೋಜನೆಯನ್ನು ಪ್ರಸ್ತುತ ಕೈಗೆತ್ತಿಕೊಂಡಿಲ್ಲ ಎನ್ನುವುದನ್ನು ಬಿಬಿಎಂಪಿ ಹೇಳಿಕೆ ಮೂಲಕ ಸ್ಪಷ್ಟಪಡಿಸಿದೆ. ನಿವೇಶನ ಹಂಚಿಕೆ ಕುರಿತು ಪಾಲಿಕೆಯಿಂದ ಯಾವುದೇ ಅಧಿಕೃತವಾಗಿ ಅಧಿಸೂಚನೆ ಹೊರಡಿಸಲಾಗಿರುವುದಿಲ್ಲ ಎಂದು ಪಾಲಿಕೆ ತಿಳಿಸಿದೆ. ಇಂತಹ ಯಾವುದೇ ಆಮಿಷಗಳಿಗೆ/ಸುಳ್ಳು ವದಂತಿಗಳಿಗೆ ಕಿವಿ ಗೊಟ್ಟು ಮೋಸ ಹೋಗಬಾರದೆಂದು ಪೌರಕಾರ್ಮಿಕರು ಮತ್ತು ಸಾರ್ವಜನಿಕರಲ್ಲಿ ವಿನಂತಿಸಿದೆ.
ಒಂದು ವೇಳೆ ಅನಾಮಧೇಯ ವ್ಯಕ್ತಿಗಳ ಮಾತುಗಳನ್ನು ಕೇಳಿ ಮೋಸ ಹೋದರೆ ಪಾಲಿಕೆಯು ಜವಾಬ್ದಾರಿಯಾಗಿರುವುದಿಲ್ಲವೆಂದು ಜಂಟಿ ಆಯುಕ್ತರು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ.