ಕಂಪ್ಲಿ.ಜ.03: ಪಟ್ಟಣದಿಂದ ಬಳ್ಳಾರಿಗೆ ತೆರಳುವ ಬಸ್ ಗಳ ವ್ಯವಸ್ಥೆ ಇಲ್ಲದೇ ನಿತ್ಯ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ, ಈ ಕುರಿತು ಶಾಸಕರು ಸಂಬಂಧ ಪಟ್ಟಂತಹ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ರೀತಿಯ ಪ್ರಯೋಜನವಾಗಿಲ್ಲವೆಂದು ಕಾನೂನು ವಿದ್ಯಾರ್ಥಿಗಳಾದ ಶಾಂತ್ ಕುಮಾರ್, ಗುರು ಅಸಮಧಾನ ವ್ಯಕ್ತ ಪಡಿಸಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಮಂಗಳವಾರ ಬೆ.9 ಗಂಟೆಯಾದರೂ ನಿಲ್ದಾಣಾಧಿಕಾರಿಗಳ ಕಚೇರಿಯನ್ನು ಮುಚ್ಚಲಾಗಿತ್ತು, ಈ ಕುರಿತು ಅಧಿಕಾರಿಗಳ ನಿರ್ಲಕ್ಷ್ಯೆವನ್ನು ಖಂಡಿಸಿ ಮಾತನಾಡಿದ ಅವರು
ಪಟ್ಟಣದಿಂದ ಬಳ್ಳಾರಿಗೆ ಬೆ.6 ಗಂಟೆ ಹಾಗೂ 6:30ಕ್ಕೆ ಸೇರಿ ಒಟ್ಟು ಎರೆಡು ಬಸ್ ಗಳು ತೆರಳುತ್ತವೆ. ಇದಾದ ಬಳಿಕ 8:30ರವರೆಗೆ ಬಸ್ ನ ವ್ಯವಸ್ಥೆ ಇಲ್ಲ. ಇನ್ನು ಪಟ್ಟಣ, ದೇವಸಮುದ್ರ, ಮೆಟ್ರಿ, ದೇವಲಾಪುರ, ಹಳೇ ದರೋಜಿ, ಹೊಸ ದರೋಜಿ, ತಿಮ್ಮಲಾಪುರ ಗ್ರಾಮಗಳ ಸೇರಿ ನಿತ್ಯ 150 ರಿಂದ 180ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಳ್ಳಾರಿಗೆ ತೆರಳುತ್ತಾರೆ. ಇರುವಂತಹ ಎರೆಡು ಬಸ್ ಗಳು ನಿತ್ಯ ಜನಸಂಗುಳಿಯಿಂದ ತುಂಬಿಕೊಂಡಿರುತ್ತವೆ. ಇದರ ಮಧ್ಯೆಯೂ ತರಗತಿಗಳು ತಪ್ಪುತ್ತವೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಬಸ್ ಗೆ ಜೋತು ಬಿದ್ದು ಹೋಗುತ್ತಾರೆ. ಇರುವ ಎರೆಡು ಬಸ್ ನಲ್ಲಿ 150 ಜನರವರೆಗೂ ಸಂಚರಿಸಿದರೂ ವಿದ್ಯಾರ್ಥಿಗಳಿಗೆ ನಿತ್ಯ ಸೀಟ್ ದೊರೆಯದೇ ಬಸ್ ಗಳಲ್ಲಿ ನಿಂತುಕೊಂಡಾದರೂ ತೆರಳಲು ಅವಕಾಶ ದೊರೆಯುತ್ತಿಲ್ಲ. ಇದರಿಂದಾಗಿ ನಿತ್ಯ ತರಗತಿಗಳನ್ನು ತಪ್ಪಿಸಿಕೊಳ್ಳುತ್ತಿದ್ದೇವೆ ಎಂದರು.
ಶಾಸಕ ಜೆ.ಎನ್.ಗಣೇಶ್ ನಿರ್ಲಕ್ಷ್ಯೆ :
ಕಂಪ್ಲಿಯಿಂದ ಬಳ್ಳಾರಿಗೆ ತೆರಳಲು ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲದೇ ನಿತ್ಯ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದು ಈ ಕುರಿತು ಶಾಸಕ ಜೆ.ಎನ್.ಗಣೇಶ್ ಅವರ ನಿವಾಸದ ಮುಂದೆ ಈ ಹಿಂದೆ ಬಸ್ ನಿಲ್ಲಿಸಿ ಪ್ರತಿಭಟನೆ ನಡೆಸಿ ಬಸ್ ವ್ಯವಸ್ಥೆ ಕಲ್ಪಿಸಲು ಕ್ರಮವಹಿಸುವಂತೆ ಮನವಿ ಸಲ್ಲಿಸಲಾಗಿತ್ತು. ವಿದ್ಯಾರ್ಥಿಗಳ ಕಷ್ಟಕ್ಕೆ ಸ್ಪಂದಿಸುವುದಾಗಿ ಭರವಸೆ ನೀಡಿದ್ದ ಶಾಸಕರು ಈ ವರೆಗೂ ಬಸ್ ವ್ಯವಸ್ಥೆ ಕಲ್ಪಿಸುವ ಚಕಾರ ಎತ್ತುತ್ತಿಲ್ಲ, ಅಲ್ಲದೇ ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾತುಮಾತಿಗೂ ಬಿಜೆಪಿ ಅಧಿಕಾರದಲ್ಲಿರುವ ಕಾರಣ ಯಾವುದೇ ಕೆಲಸಗಳಾಗುತ್ತಿಲ್ಲ ಎಂದು ಕಾರಣ ಹೇಳುತ್ತಿದ್ದ ಶಾಸಕರು ಇದೀಗ ಅವರದೇ ಪಕ್ಷ ಅಧಿಕಾರದಲ್ಲಿದ್ದರೂ ಬಸ್ ನ ವ್ಯವಸ್ಥೆ ಕಲ್ಪಿಸಲಾಗುತ್ತಿಲ್ಲ. ಶಾಸಕರ ಈ ನಿರ್ಲಕ್ಷ್ಯೆಗೆ ನೂರಾರು ವಿದ್ಯಾರ್ಥಿಗಳ ಭವಿಷ್ಯ ಹದೆಗೆಡಲಿದೆ. ಅಲ್ಲದೇ ನಿತ್ಯ ನೂರಾರು ಜನ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಉಲ್ಬಣವಾಗಿದೆ.
ಸಂಡೂರು ಕ್ಷೇತ್ರದ ವ್ಯಾಪ್ತಿಯ ಹಳೆ ದರೋಜಿ, ಹೊಸ ದರೋಜಿ, ತಿಮ್ಮಲಾಪುರ ಗ್ರಾಮಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಡೂರು ಕ್ಷೇತ್ರದ ಶಾಸಕರಾದ ಇ.ತುಕಾರಾಂ ಅವರು ಹಾಗೂ ಕಂಪ್ಲಿ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಾಸಕ ಜೆ.ಎನ್.ಗಣೇಶ್ ಇಬ್ಬರು ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ವಿನೋದ್, ಹರ್ಷಾ, ಗಣೇಶ್, ಮಹಮದ್ ಕೈಫ್, ಸೈಯದ್ ವಾರಿಸ್, ರೋಷನ್, ಉಲ್ಲಾಸ್, ವಿನುತಾ, ಶ್ವೇತ ಸೇರಿದಂತೆ ಇತರರಿದ್ದರು.