ಬೆಂಗಳೂರು:- ಮೆಟ್ರೋ ಸುರಂಗ ಮಾರ್ಗ ಕೊರೆದು ವರ್ಷಕ್ಕೆ 8 ದಿನ ಬಾಕಿ ಇರುವಾಗಲೇ ಟಿಬಿಎಂ ಭದ್ರ ಹೊರಬಂದಿದೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ‘ಭದ್ರಾ’ ಹೆಸರಿನ ಟನಲ್ ಬೋರಿಂಗ್ ಮೆಷಿನ್ ಸದ್ಯ ಪ್ರಸ್ತುತ ವೆಂಕಟೇಶಪುರದಿಂದ ಕೆಜಿ ಹಳ್ಳಿಯವರೆಗೆ ಬರೋಬ್ಬರಿ 1,186 ಮೀಟರ್ ಉದ್ದದ ಸುರಂಗ ಕೊರೆದು ಹೊರಬಂದಿದೆ. ಒಂದು ವರ್ಷಕ್ಕೆ ಎಂಟು ದಿನಗಳು ಬಾಕಿ ಇರುವಾಗಲೇ ಇಂದು ಟಿಬಿಎಂ ಭದ್ರ ಕಾಡುಗೊಂಡನಹಳ್ಳಿ ನಿಲ್ದಾಣದಿಂದ ಹೊರ ಬಂದಿದ್ದು, ಸ್ಥಳದಲ್ಲಿ ಮೆಟ್ರೋ ನೌಕರರು ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಿ ಬರಮಾಡಿಕೊಂಡರು.
ವೆಂಕಟೇಶಪುರದಿಂದ ಕಾಡುಗೊಂಡನಹಳ್ಳಿ ನಿಲ್ದಾಣದ ವರೆಗಿನ ಸುರಂಗ ಮಾರ್ಗ ಕೊರೆಯಲು ಟಿಬಿಎಂ ಭದ್ರ 2023ರ ಫೆಬ್ರವರಿ 16ರಂದು ಕಾಮಗಾರಿ ಆರಂಭಿಸಿತ್ತು. ಇಂದು ಅಂದರೆ ಒಂದು ವರ್ಷಕ್ಕೆ ಕೇವಲ 8 ದಿನಗಳು ಬಾಕಿ ಇರುವಾಗಲೇ ಭದ್ರ, 1,185 ಮೀಟರ್ ಸುರಂಗ ಕೊರೆದು ಆಚೆ ಬಂದಿದೆ. ಈ ಮೂಲಕ 20,992 ಮೀಟರ್ ಸುರಂಗ ಮಾರ್ಗದ ಪೈಕಿ 19,120 ಮೀಟರ್ ಸುರಂಗ ಮಾರ್ಗ ಕಾಮಗಾರಿ ಪೂರ್ಣಗೊಂಡಂತಾಗಿದೆ.
ಹಂತ-2 ಯೋಜನೆಯ ಅಡಿಯಲ್ಲಿ ರೀಚ್-6 ಮಾರ್ಗವು ಕಾಳೇನ ಅಗ್ರಹಾರದಿಂದ ನಾಗಾವಾರದವರೆಗೆ ಒಟ್ಟು 21.26 ಕಿಲೋ ಉದ್ದವಿದೆ. ಈ ರೀಚ್- 6 ಮಾರ್ಗ 18 ನಿಲ್ದಾಣಗಳನ್ನ ಹೊಂದಿದ್ದು, ರೀಚ್-6 ಮಾರ್ಗ 2025ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಇನ್ನು ಭದ್ರವನ್ನು ಬರಮಾಡಿಕೊಂಡ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಜನರು ಆದಷ್ಟು ಮೆಟ್ರೋ ಬಳಸಬೇಕು ಎನ್ನುವುದು ಸರ್ಕಾರದ ಬಯಕೆ. ಅದಕ್ಕೆ ಹೆಚ್ಚು ಒತ್ತು ಕೊಟ್ಟು ಮೆಟ್ರೋ ಸುರಂಗ ಕಾಮಗಾರಿ ನಡೀತಿದೆ. ಕೆ.ಜಿ.ಹಳ್ಳಿ ಮೆಟ್ರೋ ಸ್ಟೇಷನ್ನಲ್ಲಿ ಟಿಬಿಎಂ ಭದ್ರ ಓಪನ್ ಮಾಡಿದ್ದು, ನಾಗವಾರದವರೆಗೆ 1.18 ಕಿಲೋ ಮೀಟರ್ ಸುರಂಗ ಕೊರೆಯಲಾಗಿದೆ. 13.76 ಕಿಲೋ ಮೀಟರ್ ಪಿಂಕ್ ಮಾರ್ಗ ನಿರ್ಮಾಣ ಮಾಡಲಾಗಿದೆ ಎಂದರು ಹೇಳಿದರು