ಪ್ರತಿಯೊಬ್ಬರೂ ವಿಶೇಷವಾಗಿ ಪಾಲಕರು ಮತ್ತು ವಿದ್ಯಾರ್ಥಿಗಳು ಅಗತ್ಯವಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಅರಿತು ಪಾಲಿಸಬೇಕೆಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್ ಅವರು ತಿಳಿಸಿದರು ರಸ್ತೆ ಸುರಕ್ಷತಾ ಮಾಸ ದಿನಾಚರಣೆ ಅಂಗವಾಗಿ ಮಿನಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಪಾದಚಾರಿಗಳು ರಸ್ತೆಯ ಬಲಬದಿಯಲ್ಲಿ ನಡೆಯಬೇಕು ಹಾಗೂ ಸುರಕ್ಷತಾ ನಡಿಗೆಯ ನಿಯಮವನ್ನು ಪಾಲಿಸಿ ಎಂದರು.
ಜೀವ ಅಮೂಲ್ಯ ಇದನ್ನು ಅರಿತು ಪ್ರತಿಯೊಬ್ಬರು ವಾಹನ ಚಲಿಸುವಾಗ ಕಡ್ಡಾಯವಾಗಿ ಹೆಲ್ಮೆಟನ್ನು ಧರಿಸಬೇಕೆಂದರು. ನೀವುಗಳು ದುಡಿಕಿ ಮಾಡುವ ಒಂದು ಸಣ್ಣ ತಪ್ಪಿನಿಂದ ಒಂದು ಜೀವ ಹೋಗುವುದು ಜೊತೆಗೆ ಅವರ ಸಂಸಾರ ಬೀದಿಗೆ ಬರುತ್ತದೆ. ಇದಕ್ಕೆ ಹೊಣೆಗಾರರು ನೀವೆ ಆಗುತ್ತಿರಿ ಎಂದರು. ಪಾದಚಾರಿ ಮಾರ್ಗದಲ್ಲಿರುವ ಅಂಗಡಿಗಳನ್ನು ಕಾರ್ಪೊರೇಷನ್ ಅವರು ತೆರುವುಗೊಳಿಸಿ ಸಾರ್ವಜನಿಕರ ಸುಗುಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದರು.
ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳ ಸುತ್ತಮುತ್ತ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಮತ್ತು ಅಮಲು ಪದಾರ್ಥಗಳನ್ನು ಮಾರಾಟ ಮಾಡುವವರು ಮತ್ತು ಸೇವಿಸುವವರು ಕಂಡುಬಂದಲ್ಲಿ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕೆಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಕಾರ್ಯಪಾಲಕ ಅಭಿಯಂತರರು ರಾಮಮೂರ್ತಿ ರವರು ಮಾತನಾಡಿ ಯಾವುದೇ ವಾಹನ ಚಲಾಯಿಸುವಾಗ ಮೊಬೈಲ್ನಲ್ಲಿ ಮಾತನಾಡದೆ ರಸ್ತೆಯ ಮೇಲೆ ಗಮನವಿಟ್ಟು ವಾಹನ ಚಲಾಯಿಸಿ,
ದ್ವಿಚಕ್ರ ವಾಹನದಲ್ಲಿ 3 ರಿಂದ 4 ಜನ ಸಂಚಾರ ಮಾಡುವುದು ನಿಷೇಧವಾಗಿದ್ದು, ಆದರೂ ವಿದ್ಯಾರ್ಥಿಗಳು ಇದನ್ನು ಗಮನಿಸದೆ ವಾಹನ ಚಲಾಯಿಸಿ ಅಪಘಾತಕ್ಕಿಡಾಗುತ್ತಿದ್ದಾರೆ ಪೋಷಕರು ಈ ಬಗ್ಗೆ ಸಂಚಾರ ನಿಯಮದ ಅರಿವು ನೀಡಬೇಕೆಂದರು. ಪ್ರಾದೇಶಿಕ ಸಾರಿಗೆ ಕಛೇರಿಯ ನಯಾಜ್ ಪಾಷರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ವಾಹನಗಳ ಚಾಲಕರ ಕಲ್ಯಾಣ ಸಂಸ್ಥೆಯ ಅಧ್ಯಕ್ಷರಾದ ಕೆ.ವಿ ಸುರೇಶ್ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು.
ಹಿರಿಯ ವಾಹನ ನಿರೀಕ್ಷಕರಾದ ಗೋಪಾಲಕೃಷ್ಣ ಅವರು ಕಾರ್ಯಕ್ರಮ ನಿರೂಪಿಸಿದರು. ವಿವಿಧ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾವನ್ನು ನಡೆಸಿದರು. ಈ ಸಂದರ್ಭದಲ್ಲಿ ಲಾರಿ, ಆಟೋ ಹಾಗೂ ಖಾಸಗಿ ವಾಹನಗಳಲ್ಲಿ ಅಪಘಾತ ರಹಿತ ಚಾಲನೆ ಮಾಡಿದ ವಾಹನ ಚಾಲಕರಿಗೆ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಾರಿಗೆ ಸುರಕ್ಷತೆ ಕುರಿತ ಕರಪತ್ರವನ್ನು ಬಿಡುಗಡೆ ಮಾಡಲಾಯಿತು.